
- ಸಂತಪೂರಿನಲ್ಲಿ ಜರುಗಿದ ಡಾ. ಬಸವಲಿಂಗ ಪಟ್ಟದೇವರಿಗೆ ಅಭಿನಂದನೆ ಸಮಾರಂಭ
ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಭಾಲ್ಕಿ ಹಿರೇಮಠದ ಶ್ರೀ ಬಸವಲಿಂಗ ಪಟ್ಟದ್ದೇವರು ಮಾಡಿರುವ ಕೆಲಸ ಕಾರ್ಯಗಳು ಆದರ್ಶ ಹಾಗೂ ಅನುಕರಣೀಯವಾಗಿವೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಸ.ಚಿ ರಮೇಶ ನುಡಿದರು.
ಬಸವಲಿಂಗ ಪಟ್ಟದ್ದೇವರು ಅವರಿಗೆ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಹಿನ್ನೆಲೆಯಲ್ಲಿ ಔರಾದ ತಾಲೂಕಿನ ಸಂತಪೂರ ಗ್ರಾಮದಲ್ಲಿ ಶ್ರೀಗಳಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
"ಧಾರ್ಮಿಕ ಕಾರ್ಯ ಅಷ್ಟೇ ಅಲ್ಲದೆ ದೀನ ದಲಿತರ, ಬಡವರ ಕಲ್ಯಾಣಕ್ಕಾಗಿ ಅನೇಕ ಸಾಮಾಜಿಕ ಕಾರ್ಯಗಳನ್ನು ಬಸವಲಿಂಗ ಪಟ್ಟದ್ದೇವರು ನಡೆಸಿದ್ದಾರೆ. ಶೈಕ್ಷಣಿಕ, ಸಾಮಾಜಿಕ ಕಳಕಳಿ, ಸಾಹಿತ್ಯಿಕ ಒಲವನ್ನು ಜನಮಾನಸದಲ್ಲಿ ಬಿತ್ತಿದ್ದಾರೆ. ಭಾಲ್ಕಿ ಶ್ರೀಗಳ ಬದುಕು ಸಮಾಜಕ್ಕೆ ಮಾದರಿಯಾಗಿದೆ" ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಬಸವಲಿಂಗ ಪಟ್ಟದ್ದೇವರು, " ಬಸವಾದಿ ಶರಣರ ಸಂಕಲ್ಪವನ್ನೆ ಜೀವನದುದ್ದಕ್ಕೂ ಹೊತ್ತೊಯ್ಯುವ ಮಹತ್ತರ ಬಯಕೆ ನನ್ನದು. ಭಕ್ತವೃಂದ ತೋರುವ ಪ್ರೀತಿ, ಸಹಕಾರ, ವಿಶ್ವಾಸವೇ ಇಂದು ಹಲವು ಕೆಲಸಗಳನ್ನು ಮಾಡಲು ನೆರವಾಗಿದೆ. ನಿಮ್ಮೆಲ್ಲರ ನಿಷ್ಕಲ್ಮಶ ಉತ್ಸಾಹ ಉಲ್ಲಾಸ ಕಂಡು ಮನಸ್ಸಿಗೆ ಸಂತಸವಾಗಿದೆ. ಉಸಿರಿರುವವರೆಗೆ ಸಮಾಜಕ್ಕೆ ಶ್ರಮಿಸುವೆ" ಎಂದರು.
ಮಹಾದೇವಮ್ಮ ತಾಯಿ ಸಮಾರಂಭದ ಸಮ್ಮುಖ ವಹಿಸಿದ್ದರು. ಜಾನಪದ ವಿದ್ವಾಂಸ ಡಾ. ಜಗನ್ನಾಥ ಹೆಬ್ಬಾಳೆ, ಪೂಜ್ಯ ಗುರುಬಸವ ಪಟ್ಟದೇವರು, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಸಂಜೀವಕುಮಾರ ಜುಮ್ಮಾ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ?: ದೇಸಿ ನುಡಿಗಟ್ಟು - ಔರಾದ್ ಸೀಮೆ | ಎದ್ಯಾಗ್ ನಾಕ್ ಅಕ್ಷರ್ ಇಲ್ಲ ಖರೇ, ಅವರೋಟ್ ಶ್ಯಾಣೆ ಯಾರ್ಬಿ ಇಲ್ಲ
ಕಾರ್ಯಕ್ರಮದಲ್ಲಿ ಅನುಭವ ಮಂಟಪ ಸಂತಪೂರ ಅಧ್ಯಕ್ಷ ಬಸವರಾಜ ಬಿರಾದಾರ ಅಧ್ಯಕ್ಷತೆ ವಹಿಸಿದರು. ಡಾ.ಮಹೇಶ್ ಬಿರಾದಾರ, ಶಿವಕುಮಾರ್ ಘಾಟೆ, ಸೂರ್ಯಕಾಂತ ಅಲ್ಮಾಜೆ, ವಸಂತ ಬಿರಾದಾರ, ಗುರುನಾಥ ವಡ್ಡೆ, ಅಶೋಕ ಕೋರೆ, ಶಿವಶರಣಪ್ಪ ವಲ್ಲಾಪೂರೆ, ನವೀಲಕುಮಾರ ಉತ್ಕಾರ್, ಮಾರುತಿ ಗಾದಗೆ, ಸಂದೀಪ ಪಾಟೀಲ್, ಡಾ.ಭೀಮಸೇನರಾವ ಸಿಂಧೆ, ಡಾ.ಲಕ್ಷ್ಮಣರಾವ ಸೋರಳ್ಳಿಕರ್, ಸುಧಾಕರ ಕೊಳ್ಳೂರ, ರಾಜಕುಮಾರ್ ಎಡವೆ, ಧನರಾಜ್ ಮುಸ್ತಾಪುರೆ, ಗಣಪತಿ ದೇಶಪಾಂಡೆ, ಸುಭಾಷ್ ಲಾಧಾ ಸೇರಿದಂತೆ ಇನ್ನಿತರರಿದ್ದರು.