
- ಮಂಗಳವಾರ ಆರೋಗ್ಯ ಸೌಧದ ಮುಂದೆ ಪ್ರತಿಭಟನೆ ನಡೆಸಿದ್ದರು
- ಗುರುವಾರ ಸಂಜೆಯೊಳಗೆ ವೇತನ ನೀಡಬೇಕು. ಇಲ್ಲದಿದ್ದರೆ, ಸೇವೆ ಸ್ಥಗಿತ
ಕಳೆದ ಎರಡು ತಿಂಗಳಿಂದ ಬಾಕಿ ಉಳಿದಿರುವ ವೇತನ ನೀಡುವಂತೆ ಒತ್ತಾಯಿಸಿ, ರಾಜ್ಯಾದ್ಯಂತ ಗುರುವಾರ 108 ಸಿಬ್ಬಂದಿ ಪ್ರತಿಭಟನೆ ನಡೆಸಲಿದ್ದಾರೆ. ಆಂಬುಲೆನ್ಸ್ ಸೇವೆ ಸ್ಥಗಿತಗೊಳಿಸುವ ಸಾಧ್ಯತೆ ಇದೆ.
ಕಳೆದ ಎರಡು ತಿಂಗಳಿನಿಂದ ವೇತನ ಪಾವತಿಸಿಲ್ಲ. ಕೂಡಲೇ ವೇತನ ನೀಡಬೇಕು ಎಂದು ಆಗ್ರಹಿಸಿ ಸಿಬ್ಬಂದಿ, ಮಂಗಳವಾರ ಬೆಂಗಳೂರಿನ ಆರೋಗ್ಯಸೌಧದ ಮುಂದೆ ಪ್ರತಿಭಟನೆ ನಡೆಸಿದ್ದರು.
ಜಿವಿಕೆ ಸಂಸ್ಥೆ ಆಂಬುಲೆನ್ಸ್ ನಿರ್ವಹಣೆಯ ಗುತ್ತಿಗೆ ಪಡೆದಿದ್ದು, ಕಳೆದ ಎರಡು ತಿಂಗಳ ವೇತನವನ್ನು ಸಿಬ್ಬಂದಿಗೆ ನೀಡಿಲ್ಲ. ಈ ಕುರಿತಂತೆ ಈಗಾಗಲೇ, ಆರೋಗ್ಯ ಇಲಾಖೆ ಆಯುಕ್ತ ಡಿ ರಂದೀಪ್ ಸಭೆ ನಡೆಸಿ, ಮೂರು ದಿನಗಳಲ್ಲಿ ವೇತನವನ್ನು ಪಾವತಿಸಬೇಕು ಇಲ್ಲದಿದ್ದರೆ, ಕಂಪನಿಯನ್ನು ಬ್ಲಾಕ್ಲಿಸ್ಟ್ಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಆದರೂ ಜಿವಿಕೆ ಸಂಸ್ಥೆ ವೇತನ ಬಿಡುಗಡೆ ಮಾಡಿಲ್ಲ. ಹಾಗಾಗಿ, ಸಿಬ್ಬಂದಿ ರಾಜ್ಯಾದ್ಯಂತ ಪ್ರತಿಭಟಿಸಲು ನಿರ್ಧರಿಸಿದ್ದಾರೆ.
ಆಂಬುಲೆನ್ಸ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಪರಮಶಿವಯ್ಯ ಮಾತನಾಡಿ, "ರಾಜ್ಯದಲ್ಲಿ ಆಂಬುಲೆನ್ಸ್ ಸೇವೆ ನೀಡುತ್ತಿರುವ ಸಿಬ್ಬಂದಿಗೆ ಜಿವಿಕೆ ಸಂಸ್ಥೆ ವೇತನ ಪಾವತಿಸದೆ ಬಾಕಿ ಉಳಿಸಿಕೊಂಡಿದೆ. ಈ ವೇತನವನ್ನು ನಂಬಿದ ಹಲವಾರು ಕುಟುಂಬಗಳು ಸಂಕಷ್ಟದಲ್ಲಿ ಮುಳುಗಿವೆ. ಈ ಕುರಿತಂತೆ ಜಿವಿಕೆ ಸಂಸ್ಥೆಯೊಂದಿಗೆ ವೇತನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಆದರೂ ನಮ್ಮ ಮನವಿಗೆ ಸಂಸ್ಥೆ ಸ್ಪಂದಿಸಿಲ್ಲ. ಗುರುವಾರ ಸಂಜೆಯೊಳಗೆ ವೇತನ ಪಾವತಿಸದಿದ್ದರೆ, ಆಂಬುಲೆನ್ಸ್ ಸೇವೆಯನ್ನು ಸ್ಥಗಿತಗೊಳಿಸುತ್ತೇವೆ" ಎಂದು ಎಚ್ಚರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ₹230.38 ಕೋಟಿ ವಿದ್ಯುತ್ ಶುಲ್ಕ ಬಾಕಿ; ಪೌರ ಸಂಸ್ಥೆಗಳಿಗೆ ಬೆಸ್ಕಾಂ ನೋಟಿಸ್
"ಗುರುವಾರ ಸಂಜೆಯೊಳಗೆ ವೇತನ ನೀಡಬೇಕು. ಇಲ್ಲದಿದ್ದರೆ, ಸೇವೆ ಸ್ಥಗಿತಗೊಳಿಸಲಾಗುವುದು. ಸೇವೆ ಸ್ಥಗಿತವಾದರೆ ಅದರಿಂದ ಉಂಟಾಗುವ ಅನಾಹುತಗಳಿಗೆ ಜಿವಿಕೆ ಸಂಸ್ಥೆಯೆ ನೇರ ಹೊಣೆಯಾಗುತ್ತದೆ. ಬಾಕಿ ಉಳಿದಿರುವ ವೇತನದ ಜೊತೆಗೆ ಸಿಬ್ಬಂದಿಗೆ ವೇತನ ಹೆಚ್ಚಿಸಬೇಕು" ಎಂದು ಹೇಳಿದರು.