
- ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳ ಕಾಲಾವಕಾಶ
- 17 ಹಳ್ಳಿಗಳಲ್ಲಿ ನಿರ್ಮಾಣವಾಗಲಿದೆ ಕಾರಂತ ಬಡಾವಣೆ
ಬೆಂಗಳೂರಿನ ಡಾ. ಕೆ ಶಿವರಾಂ ಕಾರಂತ ಬಡಾವಣೆಯಲ್ಲಿ ನಿವೇಶನ ಹಂಚಿಕೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಶೀಘ್ರದಲ್ಲಿ ಆರಂಭಿಸಲಿದೆ.
ಈ ಕುರಿತಂತೆ ಸುಪ್ರೀಂಕೋರ್ಟ್ ಬಿಡಿಎಗೆ ಸೂಚನೆ ನೀಡುತ್ತಿದ್ದು, ಹಾಗಾಗಿ, ಬಿಡಿಎ ಟೆಂಡರ್ ಪ್ರಕ್ರಿಯೆ ಚುರುಕುಗೊಳಿಸಿದೆ.
ಬೆಂಗಳೂರಿನಲ್ಲಿ ಡಾ. ಶಿವರಾಂ ಕಾರಂತ ಬಡಾವಣೆಯನ್ನು ಒಟ್ಟು ಒಂಬತ್ತು ಸೆಕ್ಟರ್ಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದೀಗ ಕಾಮಗಾರಿ ಕೈಗೊಳ್ಳಲು ಗುತ್ತಿಗೆದಾರರನ್ನು ಅಂತಿಮ ಮಾಡಲಾಗಿದೆ. ಈ ಹಿಂದೆ ಈ ಕುರಿತಂತೆ ಬಿಡಿಎ ಟೆಂಡರ್ ಕರೆದಿತ್ತು. ಗುತ್ತಿಗೆದಾರರು ತಾಂತ್ರಿಕ ದಾಖಲೆ ಸಲ್ಲಿಸದ ಕಾರಣ ಐದು ಸೆಕ್ಟರ್ಗಳಲ್ಲಿ ಗುತ್ತಿಗೆದಾರರು ಅಂತಿಮಗೊಂಡಿಲ್ಲ. ಹಾಗಾಗಿ ಮರು ಟೆಂಡರ್ ಕರೆಯಲಾಗಿದೆ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.
ಬೆಂಗಳೂರಿನ ಡಾ. ಶಿವರಾಂ ಕಾರಂತ ಬಡಾವಣೆಯಲ್ಲಿ ನಿವೇಶನಗಳ ರಚನೆ, ರಸ್ತೆಗಳ ನಿರ್ಮಾಣ, ಚರಂಡಿ, ಅಡ್ಡ ಚರಂಡಿ ಕಾಮಗಾರಿ, ಮಳೆನೀರು ಚರಂಡಿ, ಮಳೆ ನೀರು ಕೊಯ್ಲು, ನೀರು ಪೂರೈಕೆ, ವಿದ್ಯುತ್ ಕಾಮಗಾರಿ ಸೇರಿದಂತೆ ಇತರೆ ರಕ್ಷಣೆ ಕಾಮಗಾರಿಗಳನ್ನು ಒಳಗೊಂಡಿದೆ. ಈ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ 18 ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದರು.
17 ಗ್ರಾಮಗಳ ಒಟ್ಟು 3,546 ಎಕರೆ ಭೂಮಿಯಲ್ಲಿ ಡಾ. ಶಿವರಾಂ ಕಾರಂತ ಬಡಾವಣೆ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಬಡಾವಣೆ ನಿರ್ಮಾಣಕ್ಕೆ ₹5,337 ಕೋಟಿ ಮೊತ್ತವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹೆಬ್ಬಾಳ ಮೇಲ್ಸೇತುವೆ ದಟ್ಟಣೆ; ವಿನ್ಯಾಸ ಬದಲಾವಣೆಯೊಂದಿಗೆ ದ್ವಿಪಥ ನಿರ್ಮಾಣಕ್ಕೆ ಶೀಘ್ರದಲ್ಲೇ ಚಾಲನೆ
ರೈತರಿಂದ ಪಡೆದ ಈ ಜಾಗದಲ್ಲಿ ಮೊದಲಿಗೆ ಜಾಗವನ್ನು ಅಭಿವೃದ್ಧಿಪಡಿಸಿ, ಬಳಿಕ 10 ಸಾವಿರ ನಿವೇಶನ ಹಂಚಿಕೆ ಮಾಡುವ ಉದ್ದೇಶವಿದೆ. ನಿವೇಶನ ಹಂಚಿಕೆಯಲ್ಲಿ ರೈತರಿಗೆ ಮೊದಲ ಆದ್ಯತೆ ನೀಡಲಾಗುವುದು. ಬಳಿಕ ಗ್ರಾಹಕರಿಗೆ ನಿವೇಶನವನ್ನು ನೀಡುವ ಉದ್ದೇಶವಿದೆ. ಈ ಬಡಾವಣೆಯಲ್ಲಿ ಒಟ್ಟು 28 ಸಾವಿರ ನಿವೇಶನ ಸಿದ್ಧಪಡಿಸುವ ಉದ್ದೇಶವಿದೆ. ದೊಡ್ಡಬಳ್ಳಾಪುರ ಮತ್ತು ಹೆಸರಘಟ್ಟ ನಡುವಿನ 17 ಹಳ್ಳಿಗಳಲ್ಲಿ ಕಾರಂತ ಬಡಾವಣೆ ನಿರ್ಮಾಣವಾಗಲಿದೆ ಎಂದು ತಿಳಿಸಿದರು.