
- ಗರಿಷ್ಠ 14 ದಿನ ಗಣೇಶ ಪ್ರತಿಷ್ಠಾಪಿಸಲು ಅವಕಾಶ
- ಗಣೇಶ ವಿಸರ್ಜಿಸುವ ವೇಳೆ ಪಟಾಕಿ ಸಿಡಿಸುವಂತಿಲ್ಲ
ಈ ಬಾರಿ ಬೀದಿ ಬದಿ ಗಣೇಶ ಮೂರ್ತಿ ಕೂರಿಸುವ ಮುನ್ನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 'ನಿರಪೇಕ್ಷಣಾ ಪತ್ರ' ಪಡೆಯಲು ಪಾಲಿಕೆಯು ಆದೇಶಿಸಿದೆ.
ಎರಡು ವರ್ಷಗಳ ನಂತರ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲು ಸಾರ್ವಜನಿಕರು ಸಜ್ಜಾಗಿದ್ದಾರೆ. ಹೀಗಾಗಿ, ಹಬ್ಬದ ಆಚರಣೆಯ ವೇಳೆ ಮತ್ತು ಮೂರ್ತಿಗಳ ವಿಸರ್ಜನೆಯ ಸಮಯದಲ್ಲಿ ನಡೆಯುವ ಅನಾಹುತಗಳನ್ನು ತಪ್ಪಿಸಲು ಪಾಲಿಕೆಯು ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಜಾರಿಗೆ ತಂದಿದೆ.
ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯಲು ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಪಾಲಿಕೆಯ 63 ಉಪ ವಿಭಾಗ ಕಚೇರಿಗಳಲ್ಲಿ ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಎಲ್ಲಾ ವಲಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಬಾರಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಗರಿಷ್ಠ 14 ದಿನಗಳವರೆಗೂ ಅವಕಾಶ ನೀಡಲಾಗಿದೆ.
ವಿಸರ್ಜನಾ ಕ್ರಮ
ಪ್ರತಿ ವರ್ಷದಂತೆ ಸ್ಯಾಂಕಿ, ಹಲಸೂರು, ಯಡಿಯೂರು, ಹೆಬ್ಬಾಳ ಸೇರಿ ಪ್ರಮುಖ ಕೆರೆ ಮತ್ತು ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಕೆಲ ಪ್ರದೇಶಗಳಲ್ಲಿ ಕೆರೆಗಳು, ನಿವಾಸಿಗಳ ಮನೆಗಳಿಂದ ದೂರವಿರುವ ಕಾರಣ ಇಂತಹ ಪ್ರದೇಶಗಳಲ್ಲಿ ವಾಸಿಸುವ ನಾಗರಿಕರಿಗಾಗಿ ವಾರ್ಡ್ವಾರು ಸಂಚಾರಿ ವಿಸರ್ಜನಾ ಘಟಕಗಳನ್ನು ಸ್ಥಾಪಿಸಲು ಸೂಚಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬಿಬಿಎಂಪಿ | 'ನಮ್ಮ ಕ್ಲಿನಿಕ್'ಗೆ ವೈದ್ಯರ ಮತ್ತು ಸ್ಥಳದ ಕೊರತೆ
ತೆಗೆದುಕೊಳ್ಳಬೇಕಾದ ಸುರಕ್ಷತೆ
ಯಾವುದೇ ಅವಘಡ ಸಂಭವಿಸದಂತೆ ಎಚ್ಚರಿಕೆ ವಹಿಸಲು, ಗಣೇಶ ಮೂರ್ತಿಗಳ ವಿಸರ್ಜನೆಗೆ ಗುರುತಿಸಿರುವ ಕೆರೆಗಳ ಸುತ್ತಮುತ್ತ ಮತ್ತು ಕಲ್ಯಾಣಿಗಳ ಆವರಣದಲ್ಲಿ ವ್ಯವಸ್ಥಿತವಾದ ಬ್ಯಾರಿಕೇಡ್ಗಳನ್ನು ಅಳವಡಿಸಬೇಕು.
ಪ್ರತಿ ವಿಸರ್ಜನಾ ಕೇಂದ್ರದಲ್ಲೂ ನುರಿತ 10 ಈಜುಗಾರರು ಮತ್ತು ಅಗತ್ಯ ಸಿಬ್ಬಂದಿ ನೇಮಿಸಬೇಕು. ಧ್ವನಿವರ್ಧಕ ಅಳವಡಿಸಿ ಜಾಗೃತಿ ಮೂಡಿಸಬೇಕು. ಕೆರೆಗಳ ಬಳಿ ವಿದ್ಯುತ್ ದ್ವೀಪಗಳ ವ್ಯವಸ್ಥೆ ಮಾಡಬೇಕು ಎಂದು ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ.
ವಿಸರ್ಜನಾ ಕೇಂದ್ರಗಳಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ಕಂಟೈನರ್ಗಳ ಮೂಲಕ ತೆರವುಗೊಳಿಸಬೇಕು. ಸ್ವಚ್ಛತಾ ಸಿಬ್ಬಂದಿ ಮತ್ತು ಕಸ ವಿಲೇವಾರಿ ಮಾಡುವ ಆಟೋ ಟಿಪ್ಪರ್ಗಳು ಪ್ರತಿ ದಿನ ಕಾರ್ಯನಿರತವಾಗಿರಬೇಕು. ವಿಸರ್ಜನೆಗೆ ದೋಣಿಗಳು, ನೀರೆತ್ತುವ ಪಂಪ್, ಕ್ರೇನ್ಗಳ ವ್ಯವಸ್ಥೆ ಕೂಡ ಸಿದ್ಧ ಇರಬೇಕು ಎಂದು ತಿಳಿಸಿದ್ದಾರೆ.
ಗಣೇಶ ಹಬ್ಬಕ್ಕೆ ಏನೆಲ್ಲ ನಿರ್ಬಂಧ
ಪಿಓಪಿ ಗಣೇಶ ಮೂರ್ತಿ ಪ್ರತಿಷ್ಠಾಪಿಸದೆ, ಪರಿಸರ ಪ್ರೇಮಿ ಗಣೇಶ ಪ್ರತಿಷ್ಠಾಪಿಸಲು ಸೂಚನೆ. ಬ್ಯಾರಿಕೇಡ್, ಫ್ಲೆಕ್ಸ್ ಅಳವಡಿಕೆ ನಿಷೇಧ. ಗಣೇಶ ವಿಸರ್ಜನಾ ವೇಳೆ ಪಟಾಕಿ ಸಿಡಿಸದೇ ಇರುವುದು ಸೇರಿದಂತೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ.