
- ಸುಲಿಗೆ ಪ್ರಕರಣದಲ್ಲಿ ಐದು ಸಲ ಜೈಲು ಸೇರಿದ್ದ ಮನೋಜ್
- 'ಪ್ಯಾಂಟ್' ದಾರ ಬಳಸಿ ಜೈಲಿನ ಶೌಚಾಲಯದಲ್ಲಿ ನೇಣಿಗೆ ಶರಣು
ವಿಚಾರಣಾಧೀನ ಕೈದಿಯೊಬ್ಬ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ಶರಣಾದ ಕೈದಿಯನ್ನು ಮನೋಜ್ ಅಲಿಯಾಸ್ ಹೂವು (23) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಳ್ಳತನ, ಸುಲಿಗೆ ಸೇರಿದಂತೆ ನಾನಾ ಅಪರಾಧ ಪ್ರಕರಣಗಳಲ್ಲಿ ಆಗಿಂದಾಗ್ಗೆ ಬಂಧನಕ್ಕೊಳಗಾಗುತ್ತಿದ್ದ ಮನೋಜ್ನನ್ನು ಚಾಮರಾಜಪೇಟೆ ಪೊಲೀಸರು, ಮೇ 1ರಂದು ಮತ್ತೆ ಬಂಧಿಸಿ ಕಾರಾಗೃಹಕ್ಕೆ ಬಿಟ್ಟಿದ್ದರು. ಆದರೆ, ಆತ ಜೈಲಿನ ಬ್ಯಾರಕ್ನಲ್ಲಿರುವ ಶೌಚಾಲಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮನೋಜ್ ಈವರೆಗೆ ಐದು ಸಲ ಜೈಲುವಾಸ ಅನುಭವಿಸಿದ್ದಾನೆ. ಈ ಐದು ಬಾರಿಯೂ ಸಂಬಂಧಿಕರು ಆತನಿಗೆ ಜಾಮೀನು ಕೊಡಿಸಿದ್ದಾರೆ. ಆದರೆ, ಈತ ಪದೇಪದೆ ಜೈಲು ಪಾಲಾಗಿದ್ದು ಸಂಬಂಧಿಕರಿಗೂ ಬೇಸರವಾಗಿದೆ. ಪರಿಣಾಮ ಮತ್ತೊಮ್ಮೆ ಜಾಮೀನು ನೀಡಲು ಮನಸ್ಸು ಮಾಡಿರಲಿಲ್ಲ. ಇದರಿಂದಲೇ ಮನನೊಂದ ಮನೋಜ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಕಾರಾಗೃಹ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದಿ ಓದಿದ್ದೀರಾ?: ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ ಕಮಲ್ ಪಂತ್ | ವರ್ಗಾವಣೆಗೆ ಕಾರಣಗಳೇನು?
'ಪ್ಯಾಂಟ್' ದಾರದಿಂದ ನೇಣು
ಕಾರಾಗೃಹದಲ್ಲಿ ಕೈದಿಗಳಿಗೆ ಜೈಲಿನ ಧಿರಿಸು ನೀಡಿದ್ದಾರೆ. ಮನೋಜ್ಗೂ ಸಹ ಅಂತಹ ಉಡುಗೆಯನ್ನು ನೀಡಲಾಗಿತ್ತು. ಆದರೆ, ಆ ಪ್ಯಾಂಟ್ನಲ್ಲಿರುವ ದಾರವನ್ನು ಬಳಸಿ ಆತ ಶೌಚಾಲಯದಲ್ಲಿ ನೇಣು ಬಿಗಿದುಕೊಂಡಿದ್ದಾನೆ. ಶೌಚಾಲಯಕ್ಕೆ ಹೋಗಿದ್ದ ಸಹ ಕೈದಿಗಳು, ಮನೋಜ್ನನ್ನು ನೋಡಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ ಎಂದೂ ಮೂಲಗಳು ತಿಳಿಸಿವೆ.