
- ಈಜುಕೊಳದ ಬಳಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಶಂಕೆ
- ಆರು ದಿನದ ಈಜು ಸ್ಪರ್ಧೆಯಲ್ಲಿ ಭಾಗವಹಿಸಲು ಆಗಮಿಸಿದ್ದ
ಬೆಂಗಳೂರಿನ ಸಿಬಿಎಸ್ಇ ದಕ್ಷಿಣ ವಲಯ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಬಾಲಕನೊಬ್ಬ ಆಕಸ್ಮಿಕವಾಗಿ ಮೃತ ಪಟ್ಟ ಘಟನೆ ಮಂಗಳವಾರ ಆಗರದ ತಾತಗುಣಿ ಬಳಿ ಇರುವ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ನಡೆದಿದೆ.
ಮೃತ ಬಾಲಕ ರೋಷನ್ ರಶೀದ್, ಕೇರಳದ ತ್ರಿಶೋರ್ ಜಿಲ್ಲೆಯವರು. ಡಾ. ರಾಜು ಡೇವಿಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಬೆಂಗಳೂರಿನಲ್ಲಿ ನಡೆಯುತ್ತಿದ್ದ ಆರು ದಿನದ ಈಜು ಸ್ಪರ್ಧೆಯಲ್ಲಿ ಭಾಗವಹಿಸಲು ಬಂದಿದ್ದ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಟೊಯೋಟಾ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ಹೃದಯಘಾತದಿಂದ ನಿಧನ
ರೋಷನ್ ಮಂಗಳವಾರ, ಸ್ಪರ್ಧೆಯಲ್ಲಿ ಭಾಗವಹಿಸಿ ಈಜು ಕೊಳದಿಂದ ಹೊರಬಂದ ನಂತರ ತಲೆ ಸುತ್ತುತ್ತಿರುವ ಬಗ್ಗೆ ಶಿಕ್ಷಕರಿಗೆ ತಿಳಿಸಿದ್ದಾನೆ. ತಕ್ಷಣವೇ ಬಾಲಕನ್ನು ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿಗೆ ಸೇರಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಗ್ಗಲೀಪುರ ಪೊಲೀಸರು, "ರೋಷನ್ ಈಜುಕೊಳದಿಂದ ಹೊರ ಬಂದ ನಂತರ ಉಸಿರಾಟದಲ್ಲಿ ಏರಿಳಿತ ಕಂಡುಬಂದಿದೆ. ಈಜುಕೊಳದ ಬಳಿ ವಿದ್ಯುತ್ ತಂತಿ ಇರುವುದರಿಂದ ವಿದ್ಯುತ್ ತಗುಲಿ ಸಾವು ಸಂಭವಿಸಿರಬಹುದು. ಬುಧವಾರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಅದಾದ ನಂತರ ಬಾಲಕನ ಸಾವಿಗೆ ನಿಖರ ಮಾಹಿತಿ ದೊರೆಯಲಿದೆ" ಎಂದು ಹೇಳಿದ್ದಾರೆ.