
ವಾತಾವರಣದಲ್ಲಾಗಿರುವ ತಾಪಮಾನದ ಹೆಚ್ಚಳದಿಂದ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಶೇಕಡ 55ರಷ್ಟು ಹೆಚ್ಚಳವಾಗಿದೆ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಆರೋಗ್ಯ ಮತ್ತು ಹವಾಮಾನ ಬದಲಾವಣೆಯ ಪರಿಣಾಮ ಕುರಿತು ಪ್ರಕಟವಾಗಿರುವ 'ಲ್ಯಾನ್ಸೆಟ್ ಕೌಂಟ್ಡೌನ್ 2022' ವರದಿಯ ಪ್ರಕಾರ, ಭಾರತದಲ್ಲಿ ಶಾಖದಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಏರಿಕೆಯಾಗಿದೆ. ಈ ಪೈಕಿ 65 ವರ್ಷ ವಯಸ್ಸು ಮೇಲ್ಪಟ್ಟವರು ಮತ್ತು ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹೆಚ್ಚು ಬಲಿಯಾಗುತ್ತಿದ್ದಾರೆ. 2021ರಲ್ಲಿ 3.7 ಶತಕೋಟಿ ಜನ ಬಿಸಿಯ ವಾತಾವರಣಕ್ಕೆ ಒಡ್ಡಿಕೊಂಡಿದ್ದರು. 2000ದಿಂದ 2004 ಮತ್ತು 2017ರಿಂದ 2021ರ ನಡುವೆ ತಾಪಮಾನಕ್ಕೆ ಬಲಿಯಾದವರ ಪ್ರಮಾಣ ಶೇಕಡ 68ರಷ್ಟು ದಾಖಲಾಗಿದೆ.
“2022ರ ಮಾರ್ಚ್ನಿಂದ ಏಪ್ರಿಲ್ ಅವಧಿಯಲ್ಲಿ ಬದಲಾದ ಹವಾಮಾನದಿಂದ 30 ಪಟ್ಟು ಹೆಚ್ಚಿನ ತಾಪಮಾನವನ್ನು ಜನ ಅನುಭವಿಸಿದ್ದರು. ಇದರಿಂದಾಗಿ 2021ರಲ್ಲಿ ಭಾರತದ 167.2 ಶತಕೋಟಿ ಕಾರ್ಮಿಕರ ಸಮಯ ವ್ಯರ್ಥವಾಗಿದೆ. ಇದು ರಾಷ್ಟ್ರೀಯ ತಲಾ ಆದಾಯದ ಶೇಕಡ 5.4ರಷ್ಟು ನಷ್ಟಕ್ಕೂ ಕಾರಣವಾಗಿದೆ. 103 ದೇಶಗಳನ್ನು ವಿಶ್ಲೇಷಣೆಗೊಳಪಡಿಸಿದಾಗ, ತಾಪಮಾನ ಏರಿಕೆ 2020ರಲ್ಲಿ ವಾರ್ಷಿಕವಾಗಿ 98 ದಶಲಕ್ಷ ಜನರು ತೀವ್ರ ಆಹಾರ ಅಭದ್ರತೆ ಎದುರಿಸಲು ಕಾರಣವಾಗಿದೆ,” ಎನ್ನುತ್ತದೆ ವರದಿ.
ಭೂಮಿಯ ಮೇಲ್ಮೈ ಬಿಸಿ 1.1 ಡಿಗ್ರಿ ಸೆಲ್ಸಿಯಸ್ ಬದಲಾದರೂ, ಮನುಷ್ಯರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಉಂಟುಮಾಡುತ್ತದೆ. ಹವಾಮಾನ ಬದಲಾವಣೆ ಶಾಖ ಸಂಬಂಧಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಸಾಂಕ್ರಾಮಿಕ ರೋಗ ಹರಡುವಿಕೆಯ ವಿಧ ಬದಲಾಗಬಹುದು. ಆಹಾರ ಮತ್ತು ನೀರಿನ ಭದ್ರತೆಯ ಮೇಲೆ ವಿವಿಧ ರೀತಿಯ ಪರಿಣಾಮ ಬೀರುತ್ತದೆ.
"2,100ರ ವೇಳೆಗೆ ಪ್ರಪಂಚವು 2.4ರಿಂದ 3.5 ಡಿಗ್ರಿ ಸೆಲ್ಸಿಯಸ್ನಷ್ಟು ಬಿಸಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಬಿಸಿ ಪ್ರಪಂಚವನ್ನು ವಿನಾಶಕ್ಕೆ ತಳ್ಳುವುದು ನಿಶ್ಚಿತ. ಹಾಗಾಗಿ, ಶಾಖ ತಗ್ಗಿಸಲು ತುರ್ತು ಕ್ರಮದ ಅಗತ್ಯವಿದೆ," ಎನ್ನುತ್ತದೆ ವರದಿ.
ಆಸ್ಟ್ರೇಲಿಯಾ, ಪಶ್ಚಿಮ ಯುರೋಪ್, ದಕ್ಷಿಣ ಆಫ್ರಿಕಾ ಹಾಗೂ ಅಮೆರಿಕದ ಕೆಲವು ಭಾಗಗಳು ಶಾಖದ ತೀವ್ರತೆಯನ್ನು ಅನುಭವಿಸುತ್ತಿವೆ.