
- ತಿರುವಣ್ಣಾಮಲೈ ಆಶ್ರಮದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ
- ಪೊಲೀಸರ ಸತತ 16 ದಿನಗಳ ಹುಡುಕಾಟಕ್ಕೆ ಕೊನೆಗೂ ತೆರೆ
ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಯುವತಿಯ ಮೇಲೆ ಆ್ಯಸಿಡ್ ಎರಚಿ ನಾಪತ್ತೆಯಾಗಿದ್ದ ಆರೋಪಿ ನಾಗೇಶ್ ನನ್ನು 16 ದಿನಗಳ ಬಳಿಕ ಬಂಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.
ಏಪ್ರಿಲ್ 28 ರಂದು ಬೆಂಗಳೂರಿನ ಸುಂಕದಕಟ್ಟೆಯಲ್ಲಿ ನಡೆದಿದ್ದ ಆ್ಯಸಿಡ್ ದಾಳಿ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಆದರೆ, ಪ್ರಕರಣದ ನಂತರ ಆರೋಪಿ ಕಾವಿ ಬಟ್ಟೆ ಧರಿಸಿ ತಮಿಳುನಾಡಿನಲ್ಲಿ ತಿರುವಣ್ಣಾಮಲೈ ಆಶ್ರಮದಲ್ಲಿ ತಲೆಮರೆಸಿಕೊಂಡಿದ್ದಾನೆ. ತಾನು ಸ್ವಾಮೀಜಿ ಎಂದು ಅಲ್ಲಿದ್ದವರಲ್ಲಿ ಹೇಳಿಕೊಂಡು ಆಶ್ರಮದಲ್ಲೇ ಉಳಿದುಕೊಂಡಿದ್ದಾನೆ.
ಈ ಬಗ್ಗೆ ನಿಖರ ಮಾಹಿತಿ ತಿಳಿದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಅಧಿಕಾರಿಗಳು ಶುಕ್ರವಾರ ಸಂಜೆ ಆಶ್ರಮಕ್ಕೆ ತೆರಳಿ ಸ್ವಾಮೀಜಿ ವೇಷದಲ್ಲಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

16 ದಿನಗಳ ನಂತರ ಬಂಧನ
ತಮಿಳುನಾಡು ಮೂಲದ ಆರೋಪಿ ನಾಗೇಶ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ನಂತರ ತಲೆಮರೆಸಿಕೊಂಡಿದ್ದ. ಆತನನ್ನು ಹುಡುಕುವುದೇ ಪೊಲೀಸರಿಗೆ ತಲೆನೋವಿನ ಸಂಗತಿಯಾಗಿತ್ತು. ಆದರೆ, ಆರೋಪಿ ವಿಪರೀತ ದೈವಭಕ್ತ ಎಂಬ ವಿಚಾರ ಪೊಲೀಸ್ ತನಿಖೆಯಿಂದ ತಿಳಿದುಬಂದಿತ್ತು.
ಈ ಸುದ್ದಿಯನ್ನು ಓದಿದ್ದೀರಾ?: ಆ್ಯಸಿಡ್ ದಾಳಿ ಪ್ರಕರಣ| ಸಂತ್ರಸ್ತೆ ಆರೋಗ್ಯದಲ್ಲಿ ಚೇತರಿಕೆ, ಪತ್ತೆಯಾಗದ ಆರೋಪಿ ನಾಗೇಶ್
ಹೀಗಾಗಿ ಆತನ ಪತ್ತೆಗೆ ಬೆಂಗಳೂರು ಪೊಲೀಸರು 10 ತಂಡಗಳನ್ನು ರಚಿಸಿ ದಕ್ಷಿಣ ಭಾರತದ ಎಲ್ಲ ಪುಣ್ಯಕ್ಷೇತ್ರಗಳಲ್ಲಿ ಹುಡುಕಾಟ ನಡೆಸಿದ್ದರು. ಕೊನೆಗೂ 16 ದಿನಗಳ ನಂತರ ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ರಮಣ ಮಹರ್ಷಿ ಆಶ್ರಮದಲ್ಲಿ ನಾಗೇಶನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ಶನಿವಾರ ಮುಂಜಾನೆ ಬೆಂಗಳೂರಿಗೆ ಕರೆತಂದು ನ್ಯಾಯಾಲಯದ ಎದುರು ಹಾಜರುಪಡಿಸಿ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.