
- ಪೂರ್ವ ಸಿದ್ಧತೆಗಳಿಲ್ಲದೆ ತರಾತುರಿಯಲ್ಲಿ ಉದ್ಘಾಟನೆಗೆ ಸಿದ್ಧತೆ; ಆರೋಪ
- ಅಂಬೇಡ್ಕರ್ ಭವನದಲ್ಲಿ ಇನ್ನೂ ಪೀಠೋಪಕರಣಗಳೇ ಇಲ್ಲ
ಸಕಲೇಶಪುರ ಪಟ್ಟಣದ ಕುಶಾಲನಗರದಲ್ಲಿ ನಿರ್ಮಾಣವಾಗಿರುವ ಡಾ. ಬಿ ಆರ್ ಅಂಬೇಡ್ಕರ್ ಭವನವು ಬರೋಬ್ಬರಿ 18 ವರ್ಷಗಳ ಬಳಿಕ ಉದ್ಘಾಟನೆಯಾಗುತ್ತಿದೆ.
2004ರಲ್ಲಿ ಪ್ರಾರಂಭಗೊಂಡ ಅಂಬೇಡ್ಕರ್ ಭವನ ಕಟ್ಟಡ ನಿರ್ಮಾಣ ಕಾಮಗಾರಿ 18 ವರ್ಷ ಕಳೆದರೂ ಪೂರ್ಣಗೊಂಡಿರಲಿಲ್ಲ. ಈ ವಿಚಾರವಾಗಿ ದಲಿತ ಸಂಘಟನೆಗಳು ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದರೂ, ಪ್ರಯೋಜನವಾಗಿರಲಿಲ್ಲ.
ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಅಂಬೇಡ್ಕರ್ ಭವನವನ್ನು ನವೆಂಬರ್ 17ರಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಶಾಸಕ ಎಚ್ ಕೆ ಕುಮಾರಸ್ವಾಮಿ ಸೇರಿದಂತೆ ಇನ್ನಿತರ ಗಣ್ಯರು ಆಗಮಿಸಲಿದ್ದಾರೆ.
ಉದ್ಘಾಟನೆಗೆ ಸಿದ್ಧವಾಗಿರುವ ಅಂಬೇಡ್ಕರ್ ಭವನಕ್ಕೆ ಸೋಮವಾರ ಶಾಸಕ ಎಚ್ ಕೆ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸಕಲೇಶಪುರ ಪುರಸಭೆ ಅಧ್ಯಕ್ಷ ಕಾಡಪ್ಪ, ದಲಿತ ಮುಖಂಡರಾದ ಜೈಭೀಮ್ ಮಂಜು, ಹೆತ್ತೂರು ದೊಡ್ಡಯ್ಯ ಹಾಗೂ ಇತರರು ಇದ್ದರು.

ತರಾತುರಿಯಲ್ಲಿ ಉದ್ಘಾಟನೆಗೆ ಮುಂದಾದ ಶಾಸಕ : ಮುಖಂಡರ ಅಸಮಾಧಾನ
2004ರಿಂದ ಪ್ರಾರಂಭವಾದ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ 18 ವರ್ಷಗಳ ಬಳಿಕ ಮುಕ್ತಾಯವಾಗಿದೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳದೆ ಮತ್ತು ದಲಿತ ಮುಖಂಡರ ಪೂರ್ವಭಾವಿ ಸಭೆಗಳನ್ನು ಕರೆಯದೆ ಸಕಲೇಶಪುರ ಕ್ಷೇತ್ರದ ಶಾಸಕ ಎಚ್ ಕೆ ಕುಮಾರಸ್ವಾಮಿ ಅವರು ತರಾತುರಿಯಲ್ಲಿ ಅಂಬೇಡ್ಕರ್ ಭವನ ಉದ್ಘಾಟನೆಗೆ ಮುಂದಾಗಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಕಲೇಶಪುರ | ಕಾಡಾನೆ ಸ್ಥಳಾಂತರಕ್ಕೆ ಆಗ್ರಹ; ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ನವೆಂಬರ್ 17ರಂದು ಉದ್ಘಾಟನೆಗೆ ಸಿದ್ಧವಾಗಿರುವ ಅಂಬೇಡ್ಕರ್ ಭವನದಲ್ಲಿ ಇನ್ನೂ ಪೀಠೋಪಕರಣಗಳಿಲ್ಲ. ಪ್ರಸ್ತುತ ಕೇವಲ ಆರು ಶೌಚಾಲಯ ಇದ್ದು, ಹೆಚ್ಚುವರಿಯಾಗಿ ಶೌಚಾಲಯ ನಿರ್ಮಿಸಬೇಕಿದೆ. ಕುರ್ಚಿಗಳಿಲ್ಲ, ಜೊತೆಗೆ ಅಡುಗೆಯ ಪಾತ್ರೆಗಳು ಇಲ್ಲ ಎಂಬುದು ದಲಿತ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.