
- 'ಹಿಂದು ಪದದ ಅರ್ಥ ಹೇಳಿದ್ದಾರೆ ವಿನಃ, ಅವಮಾನಿಸಿಲ್ಲ'
- 'ದಲಿತ ನಾಯಕನನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ'
ಹಿಂದು ಪದದ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ. ಹಿಂದುತ್ವ ಕೋಮುವಾದಿ ಸಂಘಟನೆಗಳು ಜಾರಕಿಹೊಳಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ, ದಲಿತ ಸಂಘಟನೆಗಳು ಜಾರಕಿಹೊಳಿ ಅವರನ್ನು ಬೆಂಬಲಿಸಿವೆ.
ಸತೀಶ್ ಜಾರಕಿಹೊಳಿ ಅವರನ್ನು ಬೆಂಬಲಿಸಿ ದಲಿತ ಪರ ಸಂಘಟನೆಗಳು ಅಥಣಿಯ ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದ್ದು, ಹಿಂದು ಪದದ ಕುರಿತ ಜಾರಕಿಹೊಳಿ ಹೇಳಿಕೆಯನ್ನು ಹಿಂದುತ್ವ ಕೋಮುವಾದಿ ಸಂಘಟನೆಗಳು ಮತ್ತು ಮಾಧ್ಯಮಗಳು ತಿರುಚಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ದಲಿತ ಮುಖಂಡ ಸಿದ್ಧಾರ್ಥ ಸಿಂಗೆ ಮಾತನಾಡಿ, “ಸತೀಶ್ ಜಾರಕಿಹೊಳಿ ಅವರು ಈಗಾಗಲೇ ಮುದ್ರಣಗೊಂಡು ಪ್ರಕಟವಾಗಿದ್ದ ಪುಸ್ತಕದಲ್ಲಿದ್ದ ‘ಹಿಂದು’ ಎಂಬ ಪದದ ಅರ್ಥವನ್ನು ವಿವರಿಸಿದ್ದಾರೆಯೇ ವಿನಃ, ತಾವೇ ಸ್ವತಃ ಹಿಂದು ಪದಕ್ಕೆ ಅರ್ಥ ಕೊಟ್ಟು ಅವಮಾನ ಮಾಡಿಲ್ಲ” ಎಂದರು.
“ಕೆಲವು ಮಾಧ್ಯಮಗಳು ಹಾಗೂ ಮನುವಾದಿಗಳು ಅವರ ಹೇಳಿಕೆಯನ್ನು ತಿರುಚಿ, ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಒಡಕನ್ನು ಉಂಟುಮಾಡಿ, ಸತ್ಯವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ಹಿಂದೂ ಅವಹೇಳನ | ಸತೀಶ್ ಜಾರಕಿಹೊಳಿ ವಿರುದ್ಧ ಖಾಸಗಿ ದೂರು ದಾಖಲು; ನ.18ಕ್ಕೆ ವಿಚಾರಣೆ
ದಲಿತ ಮುಖಂಡ ಸಂಜೀವ ಕಾಂಬ್ಲೆ ಮಾತನಾಡಿ, “ದಲಿತ ನಾಯಕ ಸತೀಶ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಕೆಳಗಿಳಿಸಲು ಮನುವಾದಿಗಳು ಮತ್ತು ಮಾಧ್ಯಮದವರು ಪ್ರಯತ್ನ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ಸತೀಶ್ ಜಾರಕಿಹೊಳಿ ಅವರು ತಾವು ನೀಡಿದ ಹೇಳಿಕೆಗೆ ಬದ್ದವಾಗಿದ್ದು, ನನ್ನ ಹೇಳಿಕೆ ಬಗ್ಗೆ ಯಾರಿಗಾದರೂ ಅನುಮಾನವಿದ್ದರೆ ಚರ್ಚೆಗೆ ಬನ್ನಿ ಎಂದು ಬಹಿರಂಗವಾಗಿ ಕರೆಯುತ್ತಿದ್ದಾರೆ. ಆದರೆ, ಯಾರೂ ಕೂಡ ಚರ್ಚೆಗೆ ಹೋಗದೇ, ಸುಖಾ ಸುಮ್ಮನೇ ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಸಂಜೀವ ಕಾಂಬ್ಲೆ, ಚಿದಾನಂದ ತಳಕೇರಿ ಸೇರಿದಂತೆ ನೂರಾರು ಜನ ಸತೀಶ್ ಜಾರಕಿಹೊಳಿ ಬೆಂಬಲಿಗರು ಹಾಗೂ ದಲಿತ ಸಂಘಟನೆಯ ಕಾರ್ಯಕರ್ತರು ಹಾಜರಿದ್ದರು.