
- ಚಿಕ್ಕನಾಯಕನಹಳ್ಳಿಯಲ್ಲಿನ ಬಿಜೆಪಿ ಪೋಸ್ಟರ್ ಅಭಿಯಾನಕ್ಕೆ ಕಾಂಗ್ರೆಸ್ ನಾಯಕರ ಆಕ್ರೋಶ
- ಇದನ್ನು ನಾವು ಹಾಗೆಯೇ ಬಿಡುವುದಿಲ್ಲ, ಬಹಳ ಎಚ್ಚರಿಕೆಯಿಂದ ನಿರ್ಧಾರ ಮಾಡುತ್ತೇವೆ: ಪರಮೇಶ್ವರ್
ಚಿಕ್ಕನಾಯಕನಹಳ್ಳಿಯಲ್ಲಿನ ಬಿಜೆಪಿ ಪೋಸ್ಟರ್ ಅಭಿಯಾನಕ್ಕೆ ಕಾಂಗ್ರೆಸ್ ನಾಯಕರಾದ ಬಿ ಕೆ ಹರಿಪ್ರಸಾದ್ ಮತ್ತು ಜಿ ಪರಮೇಶ್ವರ್ ಕಿಡಿ ಕಾರಿದ್ದಾರೆ.
ಚಿಕ್ಕನಾಯಕನಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್, “ಹೆಣದ ಮೇಲೆ ಊಟ ಮಾಡುವ ಸಂಸ್ಕೃತಿ ಬಿಜೆಪಿಯವರದ್ದು” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕೋವಿಡ್ ಸಾವು, ಪರೇಶ್ ಮೇಸ್ತಾ ಪ್ರಕರಣ, ನಂದಿತ ಸಾವಿನ ಪ್ರಕರಣಗಳು ಬಿಜೆಪಿಯ ಹೆಣ ರಾಜಕೀಯಕ್ಕೆ ಸಾಕ್ಷಿಗಳು. ಪೋಸ್ಟರ್ ಅಂಟಿಸುವುದು ರಣಹೇಡಿಗಳು ಮಾಡುವ ಕೆಲಸ. ಇವರು ಇಂತಹ ನೀಚ ಕೆಲಸ ಮಾಡುತ್ತಾರೆ ಎಂಬುದು ನಮಗೆ ಮೊದಲೇ ಗೊತ್ತಿತ್ತು” ಎಂದರು.
“ಇಂತಹ ಪ್ರಕರಣದ ತನಿಖೆ ವಿಚಾರದಲ್ಲಿ ಬಿ ರಿಪೋರ್ಟ್ ಮಾಡುವಾಗ ಇವರು ಹೇಗೆ ರಾಜಕೀಯ ಮಾಡಿದ್ದಾರೆ ಗೊತ್ತಿದೆ” ಎಂದು ಹರಿಪ್ರಸಾದ್ ಬಿಜೆಪಿ ವಿರುದ್ಧ ಕುಟುಕಿದರು.
ಬಿಜೆಪಿಗೆ ತಕ್ಕ ಉತ್ತರ ಕೊಡುತ್ತೇವೆ: ಪರಮೇಶ್ವರ್
ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಉಪಮುಖ್ಯಮಂತ್ರಿ ಜಿ ಪರಮೇಶ್ವರ್, “ಇಡೀ ದೇಶದಲ್ಲಿ ಐಕ್ಯತಾ ಯಾತ್ರೆ ಯಶಸ್ವಿಯಾಗುವುದನ್ನು ಬಿಜೆಪಿ ನೋಡುತ್ತಿದೆ. ಕರ್ನಾಟಕದ ಮಟ್ಟಿಗೆ ಜನ ಯಾತ್ರೆ ನೋಡಿ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಇದನ್ನು ಸಹಿಸಲಾಗದೇ ಬಿಜೆಪಿಯವರು ಪೋಸ್ಟರ್ ಅಂಟಿಸುತ್ತಿದ್ದಾರೆ. ಬಿಜೆಪಿಯವರ ನಿರಾಸೆ, ಆತಂಕವನ್ನು ಇದು ತೋರಿಸುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಭಾರತ್ ಜೋಡೋ ಯಾತ್ರೆ | ಸಿದ್ದರಾಮಯ್ಯ ವಿರುದ್ಧ ಪೋಸ್ಟರ್ ಸಮರ ಸಾರಿದ ಬಿಜೆಪಿ
“ಯಾತ್ರೆ ಶಕ್ತಿ ನೋಡಿ ಭಯ ನಡುಕ ಹುಟ್ಟಿಕೊಂಡಿದ್ದಕ್ಕೆ ಬಿಜೆಪಿ ಹೀಗೆಲ್ಲ ನಡೆದುಕೊಳ್ಳುತ್ತಿದೆ. ಅದರ ಸಚಿವರು ಇಲ್ಲಸಲ್ಲದ ಮಾತುಗಳು ಆಡ್ತಿದ್ದಾರೆ. ಯಾತ್ರೆ ಬಗೆಗಿನ ಅವರ ಭಯದ ಸೂಚನೆ ಇದು” ಎಂದರು.
“ಈ ಬಗ್ಗೆ ನಾವು ಬಹಳ ಎಚ್ಚರಿಕೆಯಿಂದ ಸೂಕ್ತ ನಿರ್ಧಾರ ಮಾಡ್ತೇವೆ. ಇದನ್ನು ನಾವು ಹಾಗೆಯೇ ಬಿಡುವುದಿಲ್ಲ, ವಿಪಕ್ಷ ನಾಯಕರು ಹಾಗೂ ಕೆಪಿಸಿಸಿ ಅಧ್ಯಕ್ಷರು ಕೂತು ನಿರ್ಧಾರ ಮಾಡಿ ತಕ್ಕ ಉತ್ತರ ಕೊಡುತ್ತೇವೆ” ಎಂದು ಪರಮೇಶ್ವರ್ ಎಚ್ಚರಿಸಿದರು.