
- ರಾಜ್ಯದಲ್ಲಿ ದಾಖಲೆ ಮಟ್ಟದಲ್ಲಿ ಮುದ್ರಣವಾಗುತ್ತಿರುವ ಪುಸ್ತಕ
- ತಮಿಳು ಮತ್ತು ತೆಲುಗು ಭಾಷೆಯಲ್ಲೂ ಮುದ್ರಿಸಲು ಪ್ರಕಾಶಕರು ಸಿದ್ದ
ಕನ್ನಡದ ಖ್ಯಾತ ಸಾಹಿತಿ ದೇವನೂರು ಮಹಾದೇವ ಅವರು ಬರೆದ ‘ಆರ್ಎಸ್ಎಸ್ ಆಳ ಮತ್ತು ಅಗಲ’ ಪುಸ್ತಕ ಭಾರೀ ಪ್ರಮಾಣದಲ್ಲಿ ಮುದ್ರಣಗೊಳ್ಳುತ್ತಿದೆ. ಮಾತ್ರವಲ್ಲದೆ, ರಾಜ್ಯದೆಲ್ಲೆಡೆ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ, ಈ ಪುಸ್ತಕವನ್ನು ಅನ್ಯಭಾಷೆಯಲ್ಲಿಯೂ ಮುದ್ರಿಸಲು ಹಲವು ಪ್ರಕಾಶಕರು ಮುಂದೆ ಬಂದಿದ್ದಾರೆ.
ಆರ್ಎಸ್ಎಸ್ ಸಂಸ್ಥಾಪಕ ಕೆ.ಬಿ ಹೆಡ್ಗೆವಾರ್, ಆರ್ಎಸ್ಎಸ್ನ ಸ್ಥಾಪನೆ, ಅದರ ಇತಿಹಾಸ ಮತ್ತು ಪ್ರಸ್ತುತ ಕಾಲಘಟ್ಟದವರೆಗೆ ಆರ್ಎಸ್ಎಸ್ ಏನೆಲ್ಲಾ ಮಾಡಿದೆ ಎಂಬುದರ ಕುರಿತು ಪುಸ್ತಕದಲ್ಲಿ ವಿವರವಾಗಿ ತಿಳಿಸಲಾಗಿದೆ.
ಪುಸ್ತಕವನ್ನು ಇಂಗ್ಲಿಷ್, ಹಿಂದಿ, ತೆಲುಗು ಮತ್ತು ತಮಿಳು ಸೇರಿದಂತೆ ಇತರ ಭಾಷೆಗಳಲ್ಲಿ ಮುದ್ರಿಸಲು ಹೈದರಾಬಾದ್, ತಮಿಳುನಾಡು ಹಾಗೂ ಇತರ ಸ್ಥಳಗಳಿಂದ ಹಲವಾರು ಪ್ರಕಾಶಕರು ಮಂದೆ ಬಂದಿದ್ದಾರೆ. ಹೈದರಾಬಾದ್ ಮೂಲದ 'ಬುಕ್ ಟ್ರಸ್ಟ್' ಸಂಸ್ಥೆಯು ತೆಲುಗು ಆವೃತ್ತಿಯನ್ನು ಪ್ರಕಟಿಸಲು ಮುಂದಾಗಿದೆ.
ಈ ಸುದ್ದಿ ಓದಿದ್ದೀರಾ?:ಕರಾವಳಿಯಲ್ಲಿ ಮುಂದುವರೆದ ಮಳೆ ಅಬ್ಬರ: ಜುಲೈ 9 ರವರೆಗೆ ರೆಡ್ ಅಲರ್ಟ್ ಘೋಷಣೆ
ಅಭಿರುಚಿ ಪ್ರಕಾಶನ, ನಡೆ-ನುಡಿ, ಗೌರಿ ಮೀಡಿಯಾ ಟ್ರಸ್ಟ್, ಜನಸ್ಪಂದನ ಟ್ರಸ್ಟ್, ಮಾನವ ಬಂದುತ್ವ ವೇದಿಕೆ ಮತ್ತು ಭಾರತೀಯ ಪರಿವರ್ತನಾ ಸಂಘ, ನೀಲಿ ಹೆಜ್ಜೆ ಸೇರಿದಂತೆ ಹಲವಾರು ಪ್ರಕಾಶಕರು ಸೇರಿ 10,000ಕ್ಕೂ ಹೆಚ್ಚು ಪ್ರತಿಗಳನ್ನು ಮುದ್ರಿಸಿದ್ದಾರೆ. ಮೊದಲ ಬಾರಿಗೆ ಪುಸ್ತಕವನ್ನು ಜೂನ್ 30ರಂದು ಪ್ರಕಟಿಸಲಾಗಿದೆ.
ಪುಸ್ತಕಕ್ಕಿರುವ ಬೇಡಿಕೆಯ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಆಕೃತಿ ಬುಕ್ಸ್ ಸ್ಟೋರ್ ಮಾಲೀಕ ಗುರುಪ್ರಸಾದ್, “ಈಗಾಗಲೇ 6,000 ಪುಸ್ತಕ ಪ್ರತಿಗಳು ಬುಕ್ ಆಗಿವೆ. ಮುಂದಿನ ಎರಡು ಮೂರು ದಿನಗಳಲ್ಲಿ ಪ್ರತಿಗಳನ್ನು ಕಳುಹಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇನ್ನೂ ಹೆಚ್ಚಿನ ಬೇಡಿಕೆ ಇದೆ" ಎಂದು ಹೇಳಿದ್ದಾರೆ.
"ಇಂಗ್ಲೀಷ್ನಲ್ಲಿ ಪುಸ್ತಕವನ್ನು ಪ್ರಕಟಿಸಲು ಮೂರ್ನಾಲ್ಕು ಪ್ರಕಾಶಕರು ಪೈಪೋಟಿಯಲ್ಲಿದ್ದಾರೆ. ಪುಸ್ತಕ ಬೇರೆ ಭಾಷೆಯಲ್ಲಿ ಲಭ್ಯವಾದರೆ ಕನ್ನಡೇತರ ಓದುಗರಿಗೆ ಸಹಾಯವಾಗುತ್ತದೆ" ಎಂದು ಗುರುಪ್ರಸಾದ್ ಹೇಳಿದ್ದಾರೆ.
ಹೊಸದಾಗಿ ನೀಲಿಹೆಜ್ಜೆ ಪ್ರಕಾಶನ ಆರಂಭಿಸಿರುವ ಅನಿಲ್ ಮಾತನಾಡಿ, "ನಾವು 1,000 ಪ್ರತಿಗಳನ್ನು ಮುದ್ರಿಸುತ್ತಿದ್ದೇವೆ. ಪುಸ್ತಕ ಮುದ್ರಣಗೊಳ್ಳುವುದಕ್ಕೂ ಮುನ್ನವೇ ಎಲ್ಲ ಪ್ರತಿಗಳೂ ಬುಕ್ ಆಗಿವೆ. ಮೊದಲ ಮುದ್ರಣದ ಪುಸ್ತಕಗಳ ಖಾಲಿಯಾದ ಕೂಡಲೇ, ಎರಡನೇ ಮುದ್ರಣ ಮಾಡಿಸಲಾಗುತ್ತದೆ" ಎಂದು ಹೇಳಿದ್ದಾರೆ.