
- ಕೂಲಿ ಕೆಲಸ ಮಾಡುವ ವೃದ್ದ ತಂದೆ-ತಾಯಿ, ವಿಕಲಚೇತನ ಸಹೋದರ ಕಂಗಾಲು
- ಆದಿವಾಸಿ ಯುವಕನಿಗೆ ಸರ್ಕಾರಿ ಆಸ್ಪತ್ರೆಯಲ್ಲಿಯೂ ಸಿಗದ ಉಚಿತ ಚಿಕಿತ್ಸೆ
ಮನೆಯಲ್ಲಿ ಕೂಲಿ ಕೆಲಸ ಮಾಡುವ ವೃದ್ದ ತಂದೆ. ಅಂಗವಿಕಲ ಅಣ್ಣ ಹಾಗೂ ವೃದ್ದ ತಾಯಿ, ಇಡೀ ಕುಟುಂಬಕ್ಕೆ ಆಧಾರವಾಗಿದ್ದವರು ಶ್ರೀನಿವಾಸ್. ಮಲೆಕುಡಿಯ ಆದಿವಾಸಿ ಸಮುದಾಯದ ಈ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಶ್ರೀನಿವಾಸ್ ಬೆನ್ನು ಮೂಳೆ ಮುರಿದುಕೊಂಡು ಹಾಸಿಗೆ ಹಿಡಿದಿದ್ದು, ಈಗ ಇಡೀ ಕುಟುಂಬವನ್ನು ಮುನ್ನಡೆಸುವವರೇ ಇಲ್ಲದಂತಹಾ ಬಹಳ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ.
ಇದು ಶ್ರೀನಿವಾಸ್ ಗೌಡ್ಲು ಮಲೆಕುಡಿಯ ಎಂಬ ಆದಿವಾಸಿ ಯುವಕನೊಬ್ಬನ ದಾರುಣ ಕತೆ ಮಾತ್ರ ಅಲ್ಲ. ಆರೋಗ್ಯ ಕ್ಷೇತ್ರ ವ್ಯಾಪಾರೀಕರಣಗೊಂಡಿರುವ ಸಂದರ್ಭದಲ್ಲಿ ಬಡವರು, ಆರ್ಥಿಕವಾಗಿ ಸಬಲರಲ್ಲದ ಎಲ್ಲರ ವ್ಯಥೆಯೂ ಹೌದು.
ಶ್ರೀನಿವಾಸ ಗೌಡ್ಲು ಎಂಬ ಆದಿವಾಸಿ ಮಲೆಕುಡಿಯ ಸಮುದಾಯಕ್ಕೆ ಸೇರಿದ, ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಸಮೀಪದ ಹೊರನಾಡು ನಿವಾಸಿ ತೋಟಗಳಲ್ಲಿ ದುಡಿಯುವ ಕೂಲಿಯಾಳು. 34 ವರ್ಷದ ಇವರು ಕುಟುಂಬದ ಸಂಕಷ್ಟಗಳ ಕಾರಣಕ್ಕಾಗಿ ಇನ್ನೂ ಮದುವೆಯಾಗಿಲ್ಲ.
ಆಗಸ್ಟ್ 11 ರಂದು ಮನೆ ಸಮೀಪ ವಿದ್ಯುತ್ ತಂತಿಗಳಿಗೆ ತಾಗುತ್ತಿದ್ದ ಮರದ ಕೊಂಬೆಗಳನ್ನು ಕಡಿಯುವಾಗ ಮರದಿಂದ ಬಿದ್ದು ಸೊಂಟ, ಬೆನ್ನು ಮೂಳೆಗೆ ಗಂಭೀರ ಪೆಟ್ಟು ಬಿದ್ದಿದೆ. ದೊಡ್ಡ ಸರ್ಜರಿ ಅಗತ್ಯ ಬಿದ್ದಿದ್ದರಿಂದ ಮಂಗಳೂರಿನ ವೆನ್ ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಓಡಾಡಲು ಕುಟುಂಬದಲ್ಲಿ ಯಾರೂ ಇಲ್ಲದ ಇವರನ್ನು ಕಳೆದ ತಿಂಗಳು ಆಗಸ್ಟ್ 12 ರಂದು ನೆರೆಕರೆಯವರು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೊಂಟ ಮುರಿದು ಎದ್ದು ನಿಲ್ಲಲು ಅಸಾಧ್ಯವಾದ ಇವರನ್ನು ನೆರೆಕರೆಯ ಒಂದಿಬ್ಬರು ಹುಡುಗರು ಅಲ್ಲಿಂದ ಇಲ್ಲಿಯವರಗೆ ಪಾಳಿಯಲ್ಲಿ ನೋಡಿಕೊಳ್ಳುತ್ತಾ, ಮಾನವೀಯ ನೆರವು ನೀಡುತ್ತಿದ್ದಾರೆ.
ವೆನ್ ಲಾಕ್ ಆಸ್ಪತ್ರೆಯವರು ದೊಡ್ಡ ಸರ್ಜರಿ ಆಗಿರುವುದರಿಂದ ಉಚಿತ ಚಿಕಿತ್ಸೆಗಾಗಿ ಬಿಪಿಎಲ್ ರೇಷನ್ ಕಾರ್ಡ್ ಹಾಜರುಪಡಿಸಿ, ಇಲ್ಲದಿದ್ದರೆ ಸರ್ಜರಿಗೆ ಬೇಕಾಗುವ ವೈದ್ಯಕೀಯ ಪರಿಕರಗಳಿಗಾಗಿ ತಕ್ಷಣವೇ 40 ಸಾವಿರ ರೂ. ಪಾವತಿಸಿ, ಉಳಿದದ್ದನ್ನು ನಂತರ ಪಾವತಿಸಿ ಎಂದಿದ್ದಾರೆ. ಖಾಲಿ ಜೇಬಿನ ಆದಿವಾಸಿ ಕುಟುಂಬ ಇದರಿಂದ ಕಂಗಾಲಾಗಿದೆ. ಇವರ ದುರದೃಷ್ಟಕ್ಕೆ ಕುಟುಂಬದ ಬಿಪಿಎಲ್ ರೇಷನ್ ಕಾರ್ಡ್ ನಲ್ಲಿ ಯಾವುದೋ ತಾಂತ್ರಿಕ ಕಾರಣಕ್ಕೆ ಶ್ರೀನಿವಾಸ್ ಗೌಡ್ಲು ಹೆಸರು ಅಳಿಸಿ ಹೋಗಿತ್ತು.
ಕೊನೆಗೆ ಪರಿಚಿತರ ಮೂಲಕ ಶೃಂಗೇರಿಯ ಸಾಮಾಜಿಕ ಕಾರ್ಯಕರ್ತ ಮಣಿಶೇಖರ್ ಮಂಗಳೂರಿನ ಡಿವೈಎಫ್ಐ ಕಚೇರಿಯನ್ನು ಸಂಪರ್ಕಿಸಿದರು. ಅಷ್ಟೊತ್ತಿಗೆ ಶ್ರೀನಿವಾಸ್ ವೆನ್ ಲಾಕ್ ಆಸ್ಪತ್ರೆಯಲ್ಲಿ ಕೈಕಾಲು ಅಲುಗಾಡಿಸದೆ ಅಂಗಾತ ಮಲಗಿ ಐದಾರು ದಿನ ಕಳೆದು ಹೋಗಿತ್ತು.
ಡಿವೈಎಫ್ಐ ಕಾರ್ಯಕರ್ತರು ವೆನ್ ಲಾಕ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಬಿಪಿಎಲ್ ಇಲ್ಲದವರಿಗೆ ಆಪರೇಷನ್ ಗೆ ಬೇಕಾದ ಔಷಧಿಗಳನ್ನು ಹೊರಗಡೆಯಿಂದ ತರಿಸಬೇಕಾದ ನಿಯಮಗಳನ್ನು ವಿವರಿಸಿ 40 ಸಾವಿರ ರೂ. ಕಟ್ಟಲೇ ಬೇಕು. ಆ ನಂತರ ಯಾವುದೇ ಪಾವತಿ ಇರುವುದಿಲ್ಲ ಎಂಬುದನ್ನು ವಿವರಿಸಿದರು.
ಅದರಂತೆ ಬಿಡಿಗಾಸು ಇಲ್ಲದ ಶ್ರೀನಿವಾಸ್ ಗಾಗಿ 40 ಸಾವಿರ ಹೊಂದಿಸಲು ಅವರ ನೆರೆಕರೆಯವರು ಪ್ರಯತ್ನದಲ್ಲಿ ತೊಡಗಿದರು. ಇನ್ನೊಂದೆಡೆ ಕುಟುಂಬದ ಬಿಪಿಎಲ್ ಕಾರ್ಡ್ ನಲ್ಲಿ ಶ್ರೀನಿವಾಸ್ ಹೆಸರು ಸೇರಿಸುವ ಯತ್ನವನ್ನೂ ನಡೆಸತೊಡಗಿದರು.

ಕೊನೆಗೂ ಸೆಪ್ಟಂಬರ್ 1ರಂದು ಬಿಪಿಎಲ್ ಕಾರ್ಡ್ ಗೆ ಶ್ರೀನಿವಾಸ್ ಹೆಸರು ಸೇರ್ಪಡೆಗೊಂಡಿತು. ಆಯುಷ್ಮಾನ್ ಕಾರ್ಡ್ ರೆಡಿ ಆಯ್ತು. ಇನ್ನು ಉಚಿತವಾಗಿ ಸರ್ಜರಿ ನಡೆಸಿ ಎಂದು ಬಿಪಿಎಲ್ ಕಾರ್ಡ್ ಹಾಜರು ಪಡಿಸಿದರೆ, ಬಿಪಿಎಲ್ ಕಾರ್ಡ್ ನಲ್ಲಿ ಹೊಸತಾಗಿ ಹೆಸರು ಸೇರ್ಪಡೆಗೊಂಡಿರುವುದರಿಂದ ಅದು ಕಂಪ್ಯೂಟರ್ನಲ್ಲಿ ಸ್ವೀಕಾರಗೊಳ್ಳುತ್ತಿಲ್ಲ ಎಂದು ಆಸ್ಪತ್ರೆಯವರ ವಾದ. 40 ಸಾವಿರ ಹಣ ಕಟ್ಟಿ, ಇಲ್ಲವೆ ಮನೆಗೆ ಕರೆದು ಕೊಂಡು ಹೋಗಿ ಎಂಬ ಕಟ್ಟುನಿಟ್ಟಿನ ಸೂಚನೆ ಆಸ್ಪತ್ರೆಯ ವೈದ್ಯರ ಕಡೆಯಿಂದ ಶ್ರೀನಿವಾಸ್ ಜತೆಗಿದ್ದವರಿಗೆ ನೀಡಲಾಯಿತು.
ಕೊನೆಗೆ ಹೇಗೊ ದುಡ್ಡು ಹೊಂದಿಸಿದರೂ 20 ದಿನಗಳಿಂದ ಆಸ್ಪತ್ರೆಯ ವಾಟರ್ ಬೆಡ್ ನಲ್ಲಿ ಅಂಗಾತ ಮಲಗಿರುವ ಶ್ರೀನಿವಾಸ್ ನನ್ನು ಈಗ ಮನೆಗೆ ಕರೆದೊಯ್ಯಿರಿ, ಎರಡು ತಿಂಗಳು ಕಳೆದ ಮೇಲೆ ಕರೆದು ಕೊಂಡು ಬನ್ನಿ ಎಂದು ಹೇಳಲಾಯಿತೆಂಬ ಆರೋಪ ಕೇಳಿಬಂದಿದೆ.
ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ| ಚಿಕಿತ್ಸೆಗಾಗಿ ಬುಡಕಟ್ಟು ಮಹಿಳೆಯನ್ನು 6 ಕಿ.ಮೀ ಹೊತ್ತೊಯ್ದ ಸಂಬಂಧಿಕರು!
ವಿಷಯ ಮಂಗಳೂರಿನ ಡಿವೈಎಫ್ಐ ಅವರ ಗಮನಕ್ಕೆ ಬಂದಿದ್ದರಿಂದ ವೆನ್ ಲಾಕ್ ಆಸ್ಪತ್ರೆಯ ಅಧೀಕ್ಷಕರ ಜೊತೆ ಮಾತನಾಡಿದ ನಂತರ ಸರ್ಜರಿಗೆ ಬೇಕಾಗುವ ಹಣ ಕಟ್ಟುವಂತೆ ತಿಳಿಲಾಯಿತು. ನಂತರ ಒಂದೆರಡು ದಿನಗಳಲ್ಲಿ ಸರ್ಜರಿ ಮಾಡುವುದಾಗಿ ಮಾಹಿತಿ ಬಂದು, ಹಣ ಕಟ್ಟಲು ಸಿದ್ದತೆ ನಡೆದಿದೆ.
ಇಷ್ಟೆಲ್ಲ ಆಗುವಾಗ ಒಟ್ಟು 23 ದಿನಗಳು ಕಳೆದು ಹೋದವು. ಇನ್ನೆಷ್ಟು ದಿನ ಮುಂದುವರಿಯುತ್ತದೋ ಗೊತ್ತಿಲ್ಲ. ಸೊಂಟ ಮುರಿದು ಯಾರದೋ ಸಹಾಯದಿಂದ ಆಸ್ಪತ್ರೆಯಲ್ಲಿ ಅಲುಗಾಡದ ಸ್ಥಿತಿಯಲ್ಲಿ ಮಲಗಿದ ಆದಿವಾಸಿ ಸಮುದಾಯಕ್ಕೆ ಸೇರಿದ ತೀರಾ ಬಡ ಕುಟುಂಬದ ಶ್ರೀನಿವಾಸ ಎಂಬ ಯುವಕನ ದಾರುಣ ಕತೆ ಇದು.
‘ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆಗಾಗಿ ಧ್ವನಿ ಎತ್ತಬೇಕಿದೆ’
“ಶ್ರೀನಿವಾಸ ಗೌಡ್ಲು ಎಂಬ ಅದಿವಾಸಿ ಯುವಕನಿಗೆ ಉಚಿತ, ಉತ್ತಮ ಚಿಕಿತ್ಸೆಗಾಗಿ ನಾವೆಲ್ಲ ಧ್ವನಿ ಎತ್ತಬೇಕಿದೆ. ಜತೆಗೆ ಆರೋಗ್ಯ, ಆಸ್ಪತ್ರೆ ಕ್ಷೇತ್ರದ ಸುಧಾರಣೆಗಾಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆಗಾಗಿ ಧ್ವನಿ ಎತ್ತಬೇಕಿದೆ. ಅದಕ್ಕೆ ಇದು ಸಕಾಲ. ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ದೊರಕಬೇಕು. ವೆನ್ ಲಾಕ್ ಮಲ್ಟಿ ಸ್ಪೆಷಾಲಿಟಿ ಉಚಿತ ಚಿಕಿತ್ಸೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಬೇಕು. ಆರ್ಥಿಕವಾಗಿ ದುರ್ಬಲರಾದವರು ಎರಡನೇ ದರ್ಜೆಯ ಪ್ರಜೆಗಳೋ, ಪ್ರಾಣಿಗಳೋ ಅಲ್ಲ. ಅವರಿಗೂ ಸಮಾನ ಹಕ್ಕುಗಳಿವೆ” ಎಂದು ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.