Technical Issue

ಸರ್ಕಾರದ ಕಿಂಗ್‌ಪಿನ್‌ಗಳನ್ನು ಬಚಾವ್‌ ಮಾಡಿದ್ದಕ್ಕೆ ದಿವ್ಯಾ ಹಾಗರಗಿಗೆ ಸನ್ಮಾನವೇ?: ಬಿಜೆಪಿಗೆ ಕಾಂಗ್ರೆಸ್‌ ಪ್ರಶ್ನೆ

  • ಸರ್ಕಾರದ ಸಹಕಾರ, ಗೃಹ ಸಚಿವರ ಮುತುವರ್ಜಿಯಿಂದ ದಿವ್ಯಾಗೆ ಜಾಮೀನು
  • 56 ಸಾವಿರ ಯುವಕರ ಬದುಕು ಮುಳುಗಿಸಿದ್ದಕ್ಕಾ ಈ ಸಂಭ್ರಮಾಚರಣೆ?

ಪಿಎಸ್‌ಐ ಅಕ್ರಮ ನೇಮಕಾತಿ ಪರೀಕ್ಷೆಯಲ್ಲಿ ಭಾಗಿಯಾಗಿದ್ದ ಆರೋಪದಡಿ ಜೈಲು ಸೇರಿದ್ದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಶನಿವಾರ (ಜ.7) ಜೈಲಿನಿಂದ ಬಿಡುಗಡೆಯಾಗಿದ್ದಾರೆ. 

ಜೈಲಿನಿಂದ ಹೊರಬಂದ ದಿವ್ಯಾ ಹಾಗರಗಿಗೆ ಬೆಂಬಲಿಗರು, ಅಭಿಮಾನಿಗಳು ಹೂವಿನ ಹಾರ ಹಾಕಿ ಸನ್ಮಾನ ಮಾಡಿ, ಪಟಾಕಿ ಹೊಡೆದು ಸಂಭ್ರಮಿಸಿದ್ದಾರೆ.

ಈ ಕುರಿತು ಟ್ವಿಟರ್‌ನಲ್ಲಿ ವ್ಯಂಗ್ಯವಾಡಿರುವ ರಾಜ್ಯ ಕಾಂಗ್ರೆಸ್‌ ಘಟಕ, "ಸರ್ಕಾರದ ಸಹಕಾರ, ಗೃಹ ಸಚಿವರ ಮುತುವರ್ಜಿಯಿಂದ ಜಾಮೀನು ಪಡೆದು ಹೊರಬಂದ ಪಿಎಸ್‌ಐ ಅಕ್ರಮದ ಆರೋಪಿ, ಬಿಜೆಪಿ ನಾಯಕಿ ದಿವ್ಯ ಹಾಗರಗಿಯನ್ನು ಪಟಾಕಿ ಹಚ್ಚಿ ಸಂಭ್ರಮಿಸಿ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ. ಯಾಕೆ ಈ ಸಂಭ್ರಮ? 56 ಸಾವಿರ ಯುವಕರ ಬದುಕು ಮುಳುಗಿಸಿದ್ದಕ್ಕಾ? ಸರ್ಕಾರದ ಕಿಂಗ್‌ಪಿನ್‌ಗಳನ್ನು ಬಚಾವ್‌ ಮಾಡಿದ್ದಕ್ಕಾ?" ಎಂದು ರಾಜ್ಯ ಬಿಜೆಪಿಯನ್ನು ಪ್ರಶ್ನಿಸಿದೆ.

ಪಿಎಸ್‌ಐ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿ ಜೈಲಿನಲ್ಲಿ ಬಂಧಿಯಾಗಿದ್ದ 26 ಮಂದಿ ಆರೋಪಿಗಳಿಗೆ ಗುರುವಾರ (ಜ.5) ಕಲಬುರಗಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ ಬಿ ಪಾಟೀಲ್ ಅವರು ಜಾಮೀನು ಮಂಜೂರು ಮಾಡಿದ್ದರು.

ಈ ಸುದ್ದಿ ಓದಿದ್ದೀರಾ?: ವಿಧಾನಸಭಾ ಚುನಾವಣೆ 2023 | ಲೋಕಸಭಾವಾರು ವೀಕ್ಷಕರ ನೇಮಕ ಮಾಡಿದ ಕಾಂಗ್ರೆಸ್

ಪ್ರಕರಣದ ಕಿಂಗ್ ಪಿನ್ ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ, ಮಂಜುನಾಥ್‌ ಮೇಳಕುಂದಿ, ಕಾಶಿನಾಥ್ ಚಿಲ್, ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ ಸೇರಿ 26 ಜನರಿಗೆ ಜಾಮೀನು ಸಿಕ್ಕಿತ್ತು. ಜೈಲು ಸೇರಿ ಎಂಟು ತಿಂಗಳ ಬಳಿಕ ಜಾಮೀನು ಸಿಕ್ಕಿದ್ದು, ಶನಿವಾರ ಜೈಲಿನಿಂದ ಬಿಡುಗಡೆಯಾಗಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್