
- ದ ಕ ಜಿಲ್ಲೆಯ ವಿಟ್ಲ ಸಮೀಪದ ಬೈರಿಕಟ್ಟೆಯಲ್ಲೊಂದು ಅಪರೂಪದ ಬೆಳವಣಿಗೆ
- ಮಸೀದಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿ ಭಾತೃತ್ವ ಮೆರೆದ ಮದುಮಗ ಚಂದ್ರಶೇಖರ
ಪ್ರಸಕ್ತ ಸಮಾಜದಲ್ಲಿ ಹಿಜಾಬ್, ಹಲಾಲ್, ಜಟ್ಕಾ ಕಟ್, ಅಝಾನ್, ಮುಸ್ಲಿಮರಿಗೆ ವ್ಯಾಪಾರ ಬಹಿಷ್ಕಾರ ಇತ್ಯಾದಿಯಾಗಿ ಧರ್ಮಗಳ ಮಧ್ಯೆ ದ್ವೇಷ ಹುಟ್ಟಿಸುವ ಕೃತ್ಯಗಳು ನಡೆಯುತ್ತಿದೆ. ಈ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೊಂದು ಅಪರೂಪದ ವಿದ್ಯಮಾನ ನಡೆದಿದೆ.
ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಬೈರಿಕಟ್ಟೆ ನಿವಾಸಿ ಚಂದ್ರಶೇಖರ ಜೆಡ್ಡು ಎಂಬವರು ತನ್ನ ವಿವಾಹದ ಪ್ರಯುಕ್ತ ಮುಸ್ಲಿಮರಿಗೆ ಮಸೀದಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿ ಆದರ್ಶ ಮೆರೆದಿದ್ದಾರೆ.

'ಬೈರಿಕಟ್ಟೆ ಗೆಳೆಯರ ಬಳಗದ ಸದಸ್ಯ'ರೂ ಆಗಿರುವ ಚಂದ್ರಶೇಖರ ಜೆಡ್ಡು ಅವರ ವಿವಾಹವು ಏಪ್ರಿಲ್ 24ರ ಭಾನುವಾರ ನೆರವೇರಿದೆ. ಆದರೆ ಮದುವೆಗೆ ಆಗಮಿಸಿದ ಮುಸ್ಲಿಂ ಗೆಳೆಯರಿಗೆ ರಂಝಾನ್ ಉಪವಾಸವಿದ್ದ ಕಾರಣ ಔತಣ ಸ್ವೀಕರಿಸಲು ಸಾಧ್ಯವಾಗದಿರುವುದು ಮದುಮಗ ಚಂದ್ರಶೇಖರರಿಗೆ ಬೇಸರವನ್ನುಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ತನ್ನ ಊರಿನ ಎಲ್ಲಾ ಮುಸ್ಲಿಮರಿಗೆ ಮದುವೆಯ ಹಿನ್ನೆಲೆಯಲ್ಲಿ ಬೈರಿಕಟ್ಟೆ ಜುಮಾ ಮಸೀದಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸುವ ಮೂಲಕ ಆದರ್ಶ ಮೆರೆದಿದ್ದಾರೆ.

ಇಫ್ತಾರ್ ಕೂಟವನ್ನು ಏರ್ಪಡಿಸಿದ ಚಂದ್ರಶೇಖರ್ ಅವರಿಗೆ ಜಲಾಲಿಯಾ ಜುಮಾ ಮಸೀದಿ ಮತ್ತು ಮವೂನತುಲ್ ಇಸ್ಲಾಂ ಯುವಜನ ಸಮಿತಿಯ ಪದಾಧಿಕಾರಿಗಳು, ಮಸೀದಿಯ ಧರ್ಮ ಗುರುಗಳು ಸನ್ಮಾನಿಸಿದರು. ಇಫ್ತಾರ್ ಕೂಟಕ್ಕೆ ಆಗಮಿಸಿದ ಊರಿನ ಬಾಂಧವರು ನಮ್ಮೂರ ಸೌಹಾರ್ದತೆ ಹೀಗೆಯೇ ಮುಂದುವರಿಯಲಿ ಎಂದು ನವ ದಂಪತಿಗೆ ಶುಭ ಹಾರೈಸಿದರು.