
- ಬೊಮ್ಮಾಯಿ ʼಧಮ್ʼ ಬಗ್ಗೆ ಮಾತನಾಡಿದ್ದಾರೆ; ರಾಜ್ಯದಲ್ಲಿ ಬಿಜೆಪಿ ಧಮ್ ಇಳಿಯುತ್ತದೆ, ನಮ್ಮ ಧಮ್ ಏರುತ್ತದೆʼ
- ʼಭಾರತ ಐಕ್ಯತಾ ಯಾತ್ರೆ ಮೂಲಕ ದೇಶವನ್ನು ಒಗ್ಗೂಡಿಸಲು ಸೂಜಿಯಂತೆ ಕಾಂಗ್ರೆಸ್ ಪಕ್ಷ ಕೆಲಸ ಮಾಡಲಿದೆʼ
ಮುಖ್ಯಮಂತ್ರಿ ಬೊಮ್ಮಾಯಿ ಅವರು ಧಮ್ ವಿಚಾರ ಮಾತನಾಡಿದ್ದಾರೆ. ನಾನು ಅವರಿಗೆ ಅದೇ ಧಮ್ ನಿಂದ ಹೇಳುತ್ತಿದ್ದೇನೆ; ಬಿಜೆಪಿಯ ಕೊನೆಯ ದಿನಗಳು ಆರಂಭವಾಗಿವೆ. ಅವರ ಧಮ್ ಇಳಿಯುತ್ತದೆ, ನಮ್ಮ ಧಮ್ ಏರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಬಳ್ಳಾರಿಯಲ್ಲಿ ಭಾನುವಾರ ನಡೆದ ʼಭಾರತ ಜೋಡೋ ಯಾತ್ರೆʼ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿ, “ಬಿಜೆಪಿಯವರು ಈ ದೇಶವನ್ನು ಕತ್ತರಿಸುವ ಕತ್ತರಿಯಾದರೆ, ಕಾಂಗ್ರೆಸ್ ಪಕ್ಷ ಈ ದೇಶವನ್ನು ಒಗ್ಗೂಡಿಸುವ ಸೂಜಿಯಂತೆ ಕೆಲಸ ಮಾಡಲಿದೆ. ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ” ಎಂದರು.
ಪ್ರತಿ ಕ್ಷೇತ್ರದಲ್ಲಿ 25000 ಜನರನ್ನು ಸೇರಿಸಿ
“ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3510 ಕಿ.ಮೀ. ಪಾದಯಾತ್ರೆ ಮಾಡುತ್ತಿರುವುದನ್ನು ಕಂಡು ಬಿಜೆಪಿ ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅವರು ರಾಜ್ಯದಲ್ಲಿ ಬೇರೆ ಮಾರ್ಗವಾಗಿ ಪಾದಯಾತ್ರೆ ಮಾಡಬಹುದಿತ್ತು. ಆದರೆ ನನ್ನ ತಾಯಿಗೆ ರಾಜಕೀಯವಾಗಿ ಜೀವ ಕೊಟ್ಟ ಬಳ್ಳಾರಿ ಕ್ಷೇತ್ರದಲ್ಲಿ ನಾನು ಪಾದಯಾತ್ರೆ ಮಾಡಬೇಕು ಎಂದು ಅವರು ತೀರ್ಮಾನಿಸಿದ್ದಾರೆ” ಎಂದು ತಿಳಿಸಿದರು.
“ಬಳ್ಳಾರಿಯ ಪಾಲಿಕೆ ಸದಸ್ಯರು ಭಾರತ ಜೋಡೋ ಯಾತ್ರೆ ಕುರಿತು ಭಿತ್ತಿಪತ್ರಗಳನ್ನು ಮನೆ, ಮನೆಗೆ ತಲುಪಿಸಬೇಕು. ಪ್ರತಿ ಹಳ್ಳಿಯಲ್ಲಿ ಎಲ್ಲರೂ ಪ್ರವಾಸ ಮಾಡಿ ಈ ಕಾರ್ಯಕ್ರಮದ ಬಗ್ಗೆ ಪ್ರಚಾರ ಮಾಡಬೇಕು. ಈ ವಿಚಾರವಾಗಿ ಪಂಚಾಯತಿ ಮಟ್ಟದಲ್ಲಿ ಪೂರ್ವತಯಾರಿ ಸಭೆಗಳನ್ನು ನಡೆಸಬೇಕು. ಚುನಾವಣೆಯಲ್ಲಿ ಗೆದ್ದಿರುವವರು ಹಾಗೂ ಸೋತಿರುವವರು ನಾಯಕರಾಗಿ ಬೆಳೆದಿದ್ದೀರಿ. ಪ್ರತಿ ಕ್ಷೇತ್ರದಿಂದ 25 ಸಾವಿರ ಜನರನ್ನು ಪಾದಯಾತ್ರೆಗೆ ಕರೆತನ್ನಿ” ಎಂದರು.
ಈ ಸುದ್ದಿ ಓದಿದ್ದೀರಾ? 'ಧಮ್' ಎಂದರೆ 'ಧಮ್ ಬಿರಿಯಾನಿ' ಅನ್ಕೊಂಡಿದ್ದೀರಾ ಬೊಮ್ಮಾಯಿ ಅವರೇ? : ಸಿದ್ದರಾಮಯ್ಯ ವ್ಯಂಗ್ಯ
“ರಾಜ್ಯದ ರೈತರು ಹಾಗೂ ಕಾರ್ಮಿಕರ ಬದುಕನ್ನು ಹಸನು ಮಾಡಬೇಕಾಗಿದೆ. ರೈತರ ಬೆಳೆಗೆ ಬೆಂಬಲ ಬೆಲೆ ಸಿಗಬೇಕಿದೆ. ಹಾಲು ಉತ್ಪಾದಿಸುವ ರೈತರಿಗೂ ಸರಿಯಾದ ಬೆಲೆ ಸಿಗುತ್ತಿಲ್ಲ. ರೈತರು ಬಳಸುವ ರಸಗೊಬ್ಬರ, ಕೀಟನಾಶಕ, ಯಂತ್ರೋಪಕರಣಗಳ ಬೆಲೆ ಹೆಚ್ಚಾಗಿದೆ. ರಾಹುಲ್ ಗಾಂಧಿಯವರು ತಮಗೆ ಸಿಕ್ಕಿದ್ದ ಅಧಿಕಾರದ ಅವಕಾಶಗಳನ್ನು ತ್ಯಾಗ ಮಾಡಿ ಜನರಿಗಾಗಿ ಹೋರಾಟ ಮಾಡಲು ತೀರ್ಮಾನಿಸಿದ್ದಾರೆ” ಎಂದು ಹೇಳಿದರು.
“ಯಾತ್ರೆಗೆ ಹಣ ಕೊಟ್ಟು ಜನ ಕರೆದುಕೊಂಡು ಬರೋದು ಬೇಡ. ಪ್ರೀತಿ, ವಿಶ್ವಾಸ, ಅಭಿಮಾನದಿಂದ ದೇಶವನ್ನು ಒಗ್ಗೂಡಿಸಲು ಆಸಕ್ತಿ ಇರುವವರು ಈ ಯಾತ್ರೆಗೆ ಆಗಮಿಸಲಿ. ಬಿಜೆಪಿಯವರು ನಾವು ಹಿಂದುಗಳು, ನಾವು ಮುಂದು ಎಂದು ಹೇಳುತ್ತಾರೆ. ಆದರೆ ನಾವು ಹಿಂದು, ಕ್ರೈಸ್ತರು, ಸಿಖ್ಖರು, ಪರಿಶಿಷ್ಟರು, ಬ್ರಹ್ಮಣರು, ವೀರಶೈವ ಲಿಂಗಾಯತರು, ಒಕ್ಕಲಿಗರು ಎಲ್ಲರೂ ಒಂದು ಎಂದು ಹೇಳುತ್ತೇವೆ” ಎಂದರು.