
- ಅರೇಬಿಕಾ ತಳಿಯ ಕಾಫಿ ತೋಟದಲ್ಲಿ ಬಿಳಿ ಕಾಂಡ ಕೊರಕ ರೋಗ ಉಲ್ಬಣ
- ಪರಿಹಾರ ಒದಗಿಸುವಂತೆ ಕಾಫಿ ಬೆಳೆಗಾರರಿಂದ ಸರ್ಕಾರಕ್ಕೆ ಒತ್ತಾಯ
ಮಳೆಯಿಂದ ಕಾಫಿ ಬೆಳೆ ಹಾನಿಯಾಗಿರುವ ಜಿಲ್ಲೆಗಳನ್ನು ಅತಿವೃಷ್ಟಿ ಪೀಡಿತ ಪ್ರದೇಶಗಳೆಂದು ಘೋಷಿಸಿ ಬೆಳೆಗಾರರಿಗೆ ಪರಿಹಾರ ನೀಡಬೇಕೆಂದು ಕಾಫಿ ಬೆಳೆಗಾರರು ಆಗ್ರಹಿಸಿದ್ದಾರೆ.
ಮಡಿಕೇರಿಯಲ್ಲಿ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಮತ್ತು ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಷನ್ ಆಫ್ ಸೌತ್ ಇಂಡಿಯಾ (ಯುಪಿಎಎಸ್ಐ) ಸಂಘಗಳು ಪತ್ರಿಕಾಗೋಷ್ಠಿ ನಡೆಸಿದ್ದು, "ಕಾಫಿ ಬೆಳೆಗಾರರಿಗೆ ಸಹಾಯಧನ, ಪೂರಕ ಯೋಜನೆಗಳಿಗೆ ಮರು ಚಾಲನೆ ನೀಡಿ. ಯೂರಿಯಾ, ಗೊಬ್ಬರ, ಔಷಧಿಗಳ ದರ ಹೆಚ್ಚಳಕ್ಕೆ ಕಡಿವಾಣ ಹಾಕಿ" ಎಂದು ಒತ್ತಾಯಿಸಿದ್ದಾರೆ.
"ರಾಜ್ಯದಲ್ಲಿ ಕಾಫಿ ಬೆಳೆಯುವ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಈ ಮೂರು ಜಿಲ್ಲೆಗಳ ತೋಟಗಳಲ್ಲಿ ಕಾಯಿಕೊರಕ ಮತ್ತು ಕಾಂಡ ಕೊಳೆ ರೋಗಗಳು ಅತಿಯಾಗಿ ಬಾಧಿಸುತ್ತಿವೆ. ಇದರಿಂದ ಕಾಫಿ ಬೀಜಗಳ ಉದುರುವಿಕೆ ಕೂಡ ಹೆಚ್ಚಾಗಿದ್ದು, ಹವಾಮಾನ ವೈಪರೀತ್ಯ, ಅಕಾಲಿಕ ಮಳೆಯಿಂದ ಬೆಳೆಹಾನಿಯಾಗಿ ಇನ್ನಷ್ಟು ಹೆಚ್ಚಿನ ನಷ್ಟ ಸಂಭವಿಸಿದೆ" ಎಂದು ಅವರು ಬೇಸರ ವ್ಯಕ್ತಪಡಿಸಿದರು.
''ಹವಾಮಾನ ಬದಲಾವಣೆ, ಮನುಷ್ಯ-ಪ್ರಾಣಿ ಸಂಘರ್ಷ, ರೋಗಗಳಿಂದ ಉತ್ಪಾದನೆ ಮತ್ತು ಇಳುವರಿ ಕುಸಿತ. ಉತ್ಪಾದನಾ ವೆಚ್ಚ, ರಸಗೊಬ್ಬರದ ವೆಚ್ಚ ಗಣನೀಯವಾಗಿ ಹೆಚ್ಚಳವಾಗಿದ್ದು, ಕಾಫಿ ಬೆಳೆಗಾರರಿಗೆ ಈ ಎಲ್ಲ ಸವಾಲುಗಳನ್ನು ಎದುರಿಸಿ ಬೆಳೆ ಉಳಿಸಿಕೊಳ್ಳುವುದೇ ಕಷ್ಟವಾಗಿದೆ ಎಂದು ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಅಸಮಾಧಾನ ಹೊರಹಾಕಿದರು.
ಈ ಸುದ್ದಿ ಓದಿದ್ದೀರಾ? ಅಡಿಕೆ ಆತಂಕ| ಎಲೆಚುಕ್ಕೆ ರೋಗಕ್ಕೆ ತೋಟ ನಾಶ: ರೈತರ ಮೂಗಿಗೆ ಅನುದಾನದ ತುಪ್ಪ ಸವರಿತೇ ಸರ್ಕಾರ?
"ಕಾಫಿ ಗಿಡದ ಕಾಂಡ ಕೊರೆಯುವ ರೋಗವು ಅರೇಬಿಕಾ ತಳಿಯ ಕಾಫಿ ತೋಟದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಕಾಫಿ ಉತ್ಪಾದನೆಯು ಶೇಕಡಾ 2.1ರಷ್ಟು ಕುಸಿದಿದೆ. ಕಾಫಿ ನಾಡಿಗೆ ನೆರವಾಗುವ ಮತ್ತು ಬೆಳೆಗಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಯೋಜನೆಗಳನ್ನು ಮರು ಪರಿಚಯಿಸಬೇಕು" ಎಂದು ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಎನ್ ರಾಮನಾಥನ್ ಒತ್ತಾಯಿಸಿದರು.
ಇಡೀ ರಾಜ್ಯದಲ್ಲಿ ಅತಿವೃಷ್ಟಿ ಸಂಭವಿಸಿದ ಸಂದರ್ಭದಲ್ಲಿ ಕೇಂದ್ರದಿಂದ ಬಂದಿದ್ದ ಅತಿವೃಷ್ಟಿ ವೀಕ್ಷಣಾ ತಂಡ ಕಾಫಿ ಬೆಳೆ ಹಾನಿಯನ್ನು ಪರಿಗಣಿಸಿರಲಿಲ್ಲ. ಅಲ್ಲದೆ, ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ವತಿಯಿಂದ ನೀಡುವ ಬೆಳೆ ಪರಿಹಾರದಲ್ಲಿ ಕಾಫಿ ಬೆಳೆಯನ್ನು ಸೇರಿಸಲಾಗಿಲ್ಲ. ಹಾಗಾಗಿ ಅದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಮೂರು ಜಿಲ್ಲೆಗಳ ಕಾಫಿ ಬೆಳೆಗಾರರು, ಮಳೆಯಿಂದಾದ ಕಾಫಿ ಬೆಳೆ ಹಾನಿಗೂ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದರು.