
ಪರಿಶಿಷ್ಟ ಜಾತಿಗಳ ಉನ್ನತಿಗಾಗಿ ಮೀಸಲಾತಿಯನ್ನು ಶಿಫಾರಸ್ಸು ಮಾಡಿದ್ದ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಮಾದಿಗ ಮಹಾಸಭಾ ಒತ್ತಾಯಿಸಿದೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬರಗೂರು ಗ್ರಾಮದಲ್ಲಿ ಅಭಿನಂದನಾ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾದಿಗ ಸಮುದಾಯದ ಮುಖಂಡರು ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ.
ಮಾದಿಗ ಸಮುದಾಯಕ್ಕೆ ಶೇ 6, ಹೊಲೆಯ ಸಮುದಾಯಕ್ಕೆ ಶೇ 5, ಕೊರಮ, ಲಂಬಾಣಿ ಮತ್ತು ಬೋವಿ ಸಮುದಾಯಕ್ಕೆ ಶೇ 3, ಇತರೆ ಜಾತಿಗಳಿಗೆ ಶೇ 1ರಷ್ಟು ಮೀಸಲಾತಿ ನೀಡಬೇಕೆಂದು ಆಯೋಗವು ಶಿಫಾರಸು ಮಾಡಿದೆ. ಆಯೋಗದ ವರದಿಯನ್ನು ಸರ್ಕಾರ ಜಾರಿಗೆ ತರಬೇಕು ಎಂದು ಮಹಾಸಭಾ ಹೇಳಿದೆ.
ಪ್ರತಿಭಾ ಪುರಸ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಉನ್ನತ ಶಿಕ್ಷಣ ಪಡೆದ ಪ್ರತಿಭಾವಂತರು, ಕೇಂದ್ರ ಸಚಿವ ಎ ನಾರಾಯಣಸ್ವಾಮಿ, ಶಿರಾ ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಸನ್ಮಾನ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ, ಶಿರಾ ಶಾಸಕ ರಾಜೇಶ್ಗೌಡ, ಅಧಿಕಾರಿಗಳಾದ ಅನಿಲ್ಕುಮಾರ್, ಪಾವಗಡದ ಮಾಜಿ ಶಾಸಕ ಚೆನ್ನಿಗರಾಯಪ್ಪ, ಸಾಮಾಜಿಕ ಕಾರ್ಯಕರ್ತ ಶಿವರಾಮೇಗೌಡ, ಲೇಖಕರಾದ ಕಂಟಲಗೆರೆ ಗುರುಪ್ರಸಾದ್, ಹಿರಿಯ ಮುಖಂಡ ವೈ ಕೆ ಬಾಲಕೃಷ್ಣ, ನರಸಿಂಹಪ್ಪ ಇದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಲವು ಕಲಾವಿದರ ತಂಡಗಳು ತಮ್ಮ ಕಲೆ ಪ್ರದರ್ಶಿಸಿದರು. ಆದಿ ಜಾಂಬವ ಮಠದ ಶ್ರೀ ಷಡಕ್ಷರಿಮುನಿ ಸ್ವಾಮೀಜಿ ಇತರರು ಭಾಗಿಯಾಗಿದ್ದರು.
ಮಹಾಸಭಾದ ಬೇಡಿಕೆಗಳು
ಸದಾಶಿವ ಆಯೋಗ ಜಾರಿಯಾಗಬೇಕು. ಭದ್ರಾ ಮೇಲ್ದಂಡೆ ಯೋಜನೆ ಉಪಯೋಗಗಳು ಶಿರಾ ತಾಲೂಕಿಗೆ ಸಿಗುವಂತಾಗಬೇಕು. ಬಗರ್ ಹುಕುಂ ಸಾಗುವಳಿ ಜಮೀನುಗಳ ಭದ್ರತಾ ಚೀಟಿ ಕೊಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಎಂದು ಮಾದಿಗ ಮಹಾಸಭಾದ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕರ ಎದುರು ಮನವಿ ಮಾಡಿದ್ದಾರೆ.