
- ಹಣ ಮತ್ತು ಕೆಲಸದ ಆಮಿಷವೊಡ್ಡಿ ಬಲವಂತದ ಮತಾಂತರ ಆರೋಪ
- ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು
ಹಿಂದೂ ಯುವತಿಯನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದು ಆರೋಪಿಸಿ ಮಂಗಳೂರಿನ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲಾಗಿದೆ.
ಪ್ರಕರಣ ಸಂಬಂಧ ಮಂಗಳೂರಿನ ಡಾ ಜಮೀಲಾ, ಕುಲಶೇಖರದ ಖಲೀಲ್ ಹಾಗೂ ಭದ್ರಾವತಿಯ ಇಮಾಮ್ ಎಂಬುವರ ವಿರುದ್ಧ ಯುವತಿ ಮತಾಂತರದ ಆರೋಪ ಹೊರಿಸಿ ದೂರು ನೀಡಿದ್ದಾರೆ.
ಕುರಾನ್ ಓದಲು ಹೇಳಿ ನಮಾಜ್ ಮಾಡಿಸಿ, ಯುವತಿಯನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡಿ ಆಕೆಗೆ ಆಯೇಷಾ ಎಂದು ಹೆಸರು ಬದಲಿಸಲಾಗಿದೆ. ಅಲ್ಲದೆ, ಯುವತಿಗೆ ಲೈಂಗಿಕ ಕಿರುಕುಳವನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದ್ದು, ವಿಶ್ವ ಹಿಂದೂ ಪರಿಷತ್ ಸಹಾಯದಿಂದ ಯುವತಿ ದೂರು ದಾಖಲಿಸಿದ್ದಾರೆ.
"ಆರೋಪಿ ಖಲೀಲ್ ಮೊಬೈಲ್ ಅಂಗಡಿಗೆ ಹೋದಾಗ ಯುವತಿಗೆ ಪರಿಚಯವಾಗಿದ್ದಾನೆ. 2021ರ ಜ.14ರಂದು ಕಲ್ಲಾಪುವಿನ ಆತನ ಸಂಬಂಧಿಕರ ಮನೆಯಲ್ಲಿ ಕೆಲಸಕ್ಕೆ ಸೇರಿಸಿದ್ದ. ಅಲ್ಲಿ ಯುವತಿಯನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡಿ ಕುರಾನ್ ಓದಿಸಿ ನಮಾಜ್ ಮಾಡಿಸಲಾಗಿದೆ. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೆಲಸದಿಂದ ತೆಗೆಸುವುದಾಗಿ ಖಲೀಲ್ ಬೆದರಿಸಿದ್ದ. ಅಲ್ಲದೆ, ಬುರ್ಖಾ ತಂದುಕೊಟ್ಟು ಧರಿಸುವಂತೆ ಒತ್ತಡ ಹಾಕುತ್ತಿದ್ದ" ಎಂದು ಯುವತಿಯ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್ ಶಾಸಕನ ಮೇಲಿನ ಲೋಕಾಯುಕ್ತ ದೂರು ವಾಪಸ್; ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ಗೆ ಹೊಸ ಸಂಕಷ್ಟ!
"ಸಂಬಂಧಿಕರ ಮನೆಯಿಂದ ಯುವತಿಯನ್ನು ಡಾ ಜಮೀಲಾರ ಮನೆಗೆ ಸ್ಥಳಾಂತರಿಸಿದ ಖಲೀಲ್, ಯುವತಿಯನ್ನು ಕೆಲಸಕ್ಕೆ ಸೇರಿಸಿದ್ದಾನೆ. ನಂತರ ಅಲ್ಲಿಯೂ ದೌರ್ಜನ್ಯ ಮಾಡಲಾಗಿದ್ದು, ಹಣ ಮತ್ತು ಕೆಲಸದ ಆಮಿಷ ತೋರಿಸಿ ಬಲವಂತದ ಮತಾಂತರ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ" ಎಂದು ಸಂತ್ರಸ್ತ ಯುವತಿ ದೂರು ನೀಡಿದ್ದಾರೆ.
ಈ ಕುರಿತು ಮಂಗಳೂರು ಕಮೀಷನರ್ ಈ ದಿನ.ಕಾಮ್ಗೆ ಪ್ರತಿಕ್ರಿಯಿಸಿದ್ದು, "ಬಲವಂತದ ಮತಾಂತರ ಮಾಡಿರುವ ಕುರಿತು ಶನಿವಾರ ದೂರು ದಾಖಲಾಗಿದೆ. ಪ್ರಕರಣ ಸಂಬಂಧ ಇದುವರೆಗೂ ಯಾರನ್ನು ಬಂಧಿಸಿಲ್ಲ" ಎಂದು ಮಾಹಿತಿ ನೀಡಿದ್ದಾರೆ.