- ನಂದಿನಿ ಹಾಲು ಮತ್ತು ಮೊಸರಿನ ದರ ಹೆಚ್ಚಳ ಅದೇಶ
- ನವೆಂಬರ್ 18ಕ್ಕೆ ಹೋಟೆಲ್ ಮಾಲೀಕರ ಸಂಘದ ಸಭೆ
ನಂದಿನಿ ಹಾಲು, ಮೊಸರು ದರ ಹೆಚ್ಚಿಸುವ ಸುದ್ದಿ ಬಂದ ಬೆನ್ನೆಲ್ಲೇ ಹೋಟೆಲ್ ಮಾಲೀಕರು ಕಾಫಿ-ಟೀ ದರ ಹೆಚ್ಚಿಸುವ ಬಗ್ಗೆ ಯೋಚಿಸಿವೆ. ಇದೀಗ, ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿದ ಹಿನ್ನೆಲೆ ಹೋಟೆಲ್ ಮಾಲೀಕರು ದರ ಏರಿಸುವ ಕುರಿತು ಸದ್ಯ ತಟಸ್ಥ ನಿಲುವು ತಳೆದಿದ್ದಾರೆ.
ನಂದಿನಿ ಹಾಲು ಮತ್ತು ಮೊಸರಿನ ದರ ಹೆಚ್ಚಿಸಿ ಕೆಎಂಎಫ್ ಸೋಮವಾರ ಆದೇಶ ಹೊರಡಿಸಿತ್ತು. ನ.15ರಿಂದ ಪರಿಷ್ಕೃತ ದರ ಜಾರಿಗೆ ಬರಲಿದ್ದು, ಪ್ರತಿ ಲೀಟರ್ ಹಾಲು ಮತ್ತು ಮೊಸರಿಗೆ 3 ರೂ. ದರ ಹೆಚ್ಚಿಸಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಿತ್ತು. ರೈತರಿಗೆ ಸಹಾಯಧನ ನೀಡಲು ದರ ಹೆಚ್ಚಿಸಲಾಗಿದೆ ಎಂದು ಸಮಾಜಾಯಿಷಿಯನ್ನೂ ನೀಡಿತ್ತು.
ಈ ಬೆನ್ನಲ್ಲೇ, ಕಾಫಿ-ಟೀ ಬೆಲೆಯಲ್ಲಿಯೂ ಮೂರು ರೂ. ಹೆಚ್ಚಿಸಲು ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರು ನಿರ್ಧರಿಸಿದ್ದರು. ಹಾಲು-ಮೊಸರಿನ ಬೆಲೆ ಹೆಚ್ಚಳದ ಪರಿಷ್ಕೃತ ದರ ನ.15ರಿಂದ ಜಾರಿಗೆ ಬರುವುದಿಲ್ಲ. ನ.20ರಿಂದ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದು, ಹೋಟೆಲ್ ಮಾಲೀಕರು ಕಾದುನೋಡಲು ಮುಂದಾಗಿದ್ದಾರೆ. ನ.18ರಂದು ಸಭೆ ಸೇರಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಗಾಂಧಿನಗರ ಹೋಟೆಲ್ ಮಾಲೀಕರ ಸಂಘದ ಸದಸ್ಯ ಸುಧಾಕರ್ ಶೆಟ್ಟಿ, ”ಹಾಲಿನ ದರ ಹೆಚ್ಚು ಮಾಡುತ್ತೇವೆ ಎಂದು ಸರ್ಕಾರ ಹೇಳಿದಾಗ ಕಾಫಿ ಹಾಗೂ ಟೀ ದರ ಏರಿಸುವ ಕುರಿತು ಸಂಘ ಚರ್ಚಿಸಿತ್ತು. ಈಗ ಬೆಲೆ ಏರಿಕೆಯಿಂದ ಸರ್ಕಾರ ಹಿಂದೆ ಸರಿದಿದೆ. ನವೆಂಬರ್ 18ರಂದು ಸಂಘದ ಸಭೆ ಕರೆದಿದ್ದು, ಮುಂದಿನ ನಡೆಯ ಬಗ್ಗೆ ಚರ್ಚಿಸಲಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ?: ನಂದಿನಿ ಹಾಲಿನ ದರ ಹೆಚ್ಚಳ | ರಾಜ್ಯದ ಜನರಿಗೆ ಮತ್ತೆ ಬೆಲೆ ಏರಿಕೆಯ ಬರೆ
”ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ಸಿಲಿಂಡರ್ ಬೆಲೆ ಏರಿಕೆ ಆದಾಗಲೂ ಎಷ್ಟೋ ಹೋಟೆಲ್ಗಳು ಗ್ರಾಹಕರ ಸ್ಥಿತಿಯನ್ನು ಅರ್ಥ ಮಾಡಿಕೊಂಡು ದರ ಏರಿಸಿರಲಿಲ್ಲ. ಈಗ ಮತ್ತೆ ಬೆಲೆ ಏರಿಕೆ ಬಿಸಿ ಮುಟ್ಟಿದೆ. ಆದ್ದರಿಂದ ಎಲ್ಲ ಕಾಫಿ, ಟೀ ಬೆಲೆ ಏರಿಸುವ ಚರ್ಚೆಯಾಗುತ್ತಿದೆ” ಎಂದರು.
“ಕೆಎಂಎಫ್ ದರ ಏರಿಕೆ ಮಾಡುವುದರ ಕುರಿತು ಯಾವುದೇ ನಿಲುವನ್ನು ತಾಳಿಲ್ಲ. ಆದ್ದರಿಂದ ಸದ್ಯಕ್ಕೆ ಕಾಫಿ, ಟೀ ಬೆಲೆ ಏರಿಕೆ ಮಾಡಿಲ್ಲ. ಒಂದು ವೇಳೆ ಮಾಡಿದರೆ ಏನು ಮಾಡುವುದು? ಎಂಬುವುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ” ಎಂದರು.