- ಕರ್ನಾಟಕ, ಮಹಾರಾಷ್ಟ್ರದಲ್ಲಿ ಹೆಚ್ಚು ರೇಬೀಸ್ ಪ್ರಕರಣ ವರದಿ
- ನಿರಂತರ ಲಸಿಕೆಯಿಂದ ರೇಬೀಸ್ ಹತೋಟಿ
ಸುಮಾರು 130 ವರ್ಷಗಳ ಹಿಂದೆಯೇ ರೇಬೀಸ್ ನಿಯಂತ್ರಣ ಲಸಿಕೆ ಕಂಡುಹಿಡಿಯಲಾಗಿದೆ. ಆದರೂ ದೇಶದಲ್ಲಿ ಪ್ರತಿ ವರ್ಷ ಸುಮಾರು 20 ಸಾವಿರ ಜನ ರೇಬೀಸ್ಗೆ ತುತ್ತಾಗುತ್ತಿದ್ದಾರೆ. ಅವರಲ್ಲಿ ಶೇ. 40ರಷ್ಟು ಮಕ್ಕಳೇ ಇರುವುದು ತುಂಬಾ ಕಳವಳಕಾರಿಯಾಗಿದೆ ಎಂದು ‘ರೇಬೀಸ್ ಮಿಷನ್’ ಮುಖ್ಯಸ್ಥ ಡಾ. ಮುರುಗನ್ ಎ ಹೇಳಿದರು.
ಉತ್ತರ ಕನ್ನಡ ಜಿಲೆಯಲ್ಲಿ ‘ಬೆಟರ್ ಕಾರವಾರ’ ಸಂಘಟನೆ ಹಮ್ಮಿಕೊಂಡಿದ್ದ ‘ಬೀದಿನಾಯಿಗಳು, ಬೆಕ್ಕುಗಳು ಹಾಗೂ ಜಾನುವಾರು ಹಿತರಕ್ಷಣೆ’ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಾ. ಮುರುಗನ್ ಮಾತನಾಡಿದರು.
“ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ರೇಬೀಸ್ ಪ್ರಕರಣಗಳು ವರದಿಯಾಗುತ್ತಿವೆ. 130 ವರ್ಷಗಳಿಂದ ರೇಬೀಸ್ಗೆ ಲಸಿಕೆಯಿದ್ದರೂ ಸೋಂಕನ್ನು ನಿರ್ಮೂಲನೆ ಮಾಡಲು ಸಾಧ್ಯವಾಗದೇ ಇರುವುದು ನಿಜಕ್ಕೂ ನಾಚಿಕೆಯ ಸಂಗತಿಯಾಗಿದೆ. ನಾಯಿಗಳಿಗೆ ನಿರಂತರವಾಗಿ ಲಸಿಕೆ ಹಾಕುವುದರಿಂದ ಈ ಕಾಯಿಲೆಯನ್ನು ಹತೋಟಿಗೆ ತರಬಹುದು. ನಿರಂತರ ಲಸಿಕೆ ಹಾಕಿದ್ದರಿಂದ ನಾಲ್ಕು ವರ್ಷಗಳಿಂದ ಗೋವಾದಲ್ಲಿ ರೇಬೀಸ್ ಪ್ರಕರಣ ಶೂನ್ಯವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ?: ದಕ್ಷಿಣ ಕನ್ನಡ | ಮೂರು ದಿನಗಳಲ್ಲಿ ಟೋಲ್ಗೇಟ್ ತೆರವು ಆದೇಶ: ಜಿಲ್ಲಾಧಿಕಾರಿ ಭರವಸೆ
“ಯಾವ ರಾಜ್ಯದಿಂದ ರೇಬೀಸ್ ಹರಡುತ್ತಿದೆ ಎಂಬ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ನಾಯಿಗಳಿಗೆ ಕಡಿಮೆ ವೆಚ್ಚದಲ್ಲಿ ರೇಬೀಸ್ ಲಸಿಕೆ ನೀಡಬಹುದು. ಏಪ್ರಿಲ್ನಿಂದ ನಮ್ಮ ಸಂಘಟನೆಯಿಂದ ಲಸಿಕಾ ಕಾರ್ಯಕ್ರಮ ನಡೆಸಲಾಗುತ್ತದೆ. ಸಂಪೂರ್ಣ ಲಸಿಕೆ ನೀಡಿರುವ ಭಾಗವನ್ನು ರೇಬೀಸ್ ಮುಕ್ತ ಪ್ರದೇಶವೆಂದ ಘೋಷಿಸಲಾಗುತ್ತದೆ. ಬಹುಬೇಗನೆ ಕಾರವಾರಕ್ಕೂ ಈ ಹೆಗ್ಗಳಿಕೆ ಬರಲಿದೆ” ಎಂದರು.
ನಗರಸಭೆ ಆಯುಕ್ತ ಆರ್.ಪಿ ನಾಯ್ಕ ಮಾತನಾಡಿ, “ಕಾರವಾರದಲ್ಲಿ ಸುಮಾರು 11 ಸಾವಿರ ನಾಯಿಗಳಿವೆ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮತ್ತು ಲಸಿಕೆ ಹಾಕಲು ಪ್ರತಿ ನಾಯಿಗೆ 1,100 ರೂ. ನಿಗದಿ ಮಾಡಲಾಗಿದೆ” ಎಂದರು.
“ಕಳೆದ ಬಾರಿ 1,582 ನಾಯಿಗಳಿಗೆ ಲಸಿಕೆ ಹಾಗೂ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಬಾರಿ 270 ನಾಯಿಗಳಿಗೆ ಲಸಿಕೆ ನೀಡಲಾಗುತ್ತದೆ. ಇದರಿಂದ ಕ್ರಮೇಣವಾಗಿ ನಾಯಿಗಳ ಜನನ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ಮಿಷನ್ ರೇಬೀಸ್ ಜಿಲ್ಲಾ ಮಾಹಿತಿ ಅಧಿಕಾರಿ ಆಕಾಶ ನಾಯ್ಕ, ಪ್ರಾಣಿಪ್ರಿಯರಾದ ಅನ್ಮೋಲ್ ರೇವಣಕರ್, ನಿರ್ಮಲಾ ಅಲ್ಫಾನ್ಸೊ, ಜೇನೀ, ಅರಣ್ಯ ಇಲಾಖೆ ಸಿಬ್ಬಂದಿ ಗೋಪಾಲ ಬೆಟರ್ ಕಾರವಾರ ಸಂಘಟನೆಯ ಅಮನ್ ಭಾಗವಹಿಸಿದ್ದರು.