
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಕರೆದ ಶಾಂತಿ ಸಭೆಯನ್ನು ಬಹಿಷ್ಕರಿಸಿರುವುದಾಗಿ ಮಂಗಳೂರು ಮುಸ್ಲಿಂ ಸೆಂಟ್ರಲ್ ಕಮಿಟಿ ಘೋಷಿಸಿದೆ. ಸಾವುಗಳ ವಿಚಾರದಲ್ಲೂ ತಾರತಮ್ಯ ತೋರಿಸಿದ ಸರ್ಕಾರದ ಧೋರಣೆಯ ವಿರುದ್ಧ ತಮ್ಮ ನಿಲುವನ್ನು ಈ ರೀತಿ ಮುಂದಿಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ವಾರದಲ್ಲಿ ಮೂರು ಸರಣಿ ಹತ್ಯೆಗಳು ನಡೆದಿವೆ. ಆ ಹಿನ್ನಲೆಯಲ್ಲಿ ಜಿಲ್ಲಾಡಳಿತವು ಎಲ್ಲ ಸಮುದಾಯಗಳನ್ನು ಒಳಗೊಂಡ ಶಾಂತಿ ಸಭೆ ಕರೆದಿದೆ. ಆದರೆ, ಪಕ್ಷಪಾತ ಧೋರಣೆ ತೋರಿದ ಸರ್ಕಾರದ ನಿಲುವನ್ನು ಖಂಡಿಸಿ ಭಾಗವಹಿಸುವುದಿಲ್ಲವೆಂದು ಮಂಗಳೂರು ಮುಸ್ಲಿಂ ಸೆಂಟ್ರಲ್ ಕಮಿಟಿಯು ನಿರ್ಧರಿಸಿದೆ.
"ಮುಖ್ಯಮಂತ್ರಿ ಬೊಮ್ಮಾಯಿ ಅವರು ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಅಲ್ಲದೆ, 25 ಲಕ್ಷ ರೂ. ಪರಿಹಾರವನ್ನೂ ಘೋಷಿಸಿದ್ದಾರೆ. ಆದರೆ, ಮಸೂದ್ ಅವರ ಕುಟುಂಬಸ್ಥರನ್ನು ಭೇಟಿಯಾಗಲಿಲ್ಲ" ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
"ಮಾತ್ರವಲ್ಲದೆ, ಬೊಮ್ಮಾಯಿ ಅವರು ಮಂಗಳೂರಿನಲ್ಲಿ ಇದ್ದಾಗಲೇ, ಸುರತ್ಕಲ್ನಲ್ಲಿ ಮುಹಮ್ಮದ್ ಫಾಝಿಲ್ ಹತ್ಯೆಯಾಯಿತು. ಫಾಝಿಲ್ ಹತ್ಯೆಯ ಬಗ್ಗೆ ಬೊಮ್ಮಾಯಿ ಅವರು ಸಂತಾಪವನ್ನೂ ಸೂಚಿಸಲಿಲ್ಲ. ಅವರ ಕುಟುಂಬಸ್ಥರನ್ನೂ ಭೇಟಿ ಮಾಡಲಿಲ್ಲ. ಹೀಗೆ ಪಕ್ಷಪಾತದ ಧೋರಣೆ ತಳೆದಿರುವ ಮುಖ್ಯಮಂತ್ರಿಗಳು ನಡೆಸುವ ಸಭೆಯಲ್ಲಿ ಭಾಗವಹಿಸುವುದಿಲ್ಲ" ಎಂದು ಮಂಗಳೂರು ಮುಸ್ಲಿಂ ಸಮಿತಿಯ ಮುಖಂಡರು ಹೇಳಿದ್ದಾರೆ.
"ರಾಜ್ಯದ ಮುಖ್ಯಮಂತ್ರಿಯಾಗಿ ಅವರು ಮೂವರ ಕುಟುಂಬಸ್ಥರನ್ನು ಭೇಟಿ ಮಾಡಬಹುದಿತ್ತು. ಆದರೆ, ಅವರು ಅದನ್ನು ಮಾಡಲಿಲ್ಲ. ಬದಲಾಗಿ ರಾಜ್ಯದಲ್ಲಿ ಯೋಗಿ ಮಾದರಿಯನ್ನು ಜಾರಿಗೆ ತರಲಾಗುವುದು ಎಂದಿದ್ದಾರೆ. ಹಾಗಾದರೆ ಈ ಶಾಂತಿ ಸಭೆಯ ಅರ್ಥವೇನು?" ಎಂದು ಸಮಿತಿಯ ಅಧ್ಯಕ್ಷ ಮಸೂದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.