
- ʼ40% ಸರ್ಕಾರಕ್ಕೆ ಭ್ರಷ್ಟಾಚಾರ ಮಾಡುವುದೇ ಗುರಿ, ರೈತರ ಹಿತ ಮುಖ್ಯವಲ್ಲʼ
- ʼಖುದ್ದು ಸಿಎಂ ಮೃತ ಯೋಧನ ಕುಟುಂಬವನ್ನು ಭೇಟಿಯಾಗಿ ಪರಿಹಾರ ನೀಡಲಿʼ
ಮಂಡ್ಯದಲ್ಲಿ ಕಬ್ಬು ಬೆಳೆಗಾರರು ನ್ಯಾಯಸಮ್ಮತ ದರ (ಎಫ್ಆರ್ಪಿ) ನಿಗದಿಗಾಗಿ ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ ಆಮ್ ಆದ್ಮಿ ಪಕ್ಷ ಬೆಂಬಲ ಸೂಚಿಸಿದೆ. ಆಪ್ನ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ರೈತರ ಹೋರಾಟದ ಸ್ಥಳಕ್ಕೆ ಬಂದು, ಪ್ರತಿಭಟನೆಯಲ್ಲಿ ಭಾಗವಹಿಸಿ, ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯ ರೈತರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದು, "ಪ್ರತಿ ಟನ್ ಕಬ್ಬಿಗೆ ₹4,500 ಕಬ್ಬಿಗೆ ನ್ಯಾಯೋಚಿತ ಹಾಗೂ ಲಾಭದಾಯಕ ದರ, ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ, ಪ್ರತಿ ಲೀಟರ್ ಹಾಲಿಗೆ ₹40 ಕನಿಷ್ಠ ಬೆಲೆ ನೀಡಬೇಕು" ಎಂಬಿವೇ ಮುಂತಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸುತ್ತಿದ್ದಾರೆ.
ಈ ವೇಳೆ ಮಾತನಾಡಿದ ಪೃಥ್ವಿ ರೆಡ್ಡಿ, "ರೈತರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಸ್ಪಂದಿಸದಿರುವುದು ಅತ್ಯಂತ ಬೇಸರ ತಂದಿದೆ. ಈ 40% ಸರ್ಕಾರಕ್ಕೆ ಭ್ರಷ್ಟಾಚಾರ ಮಾಡುವುದೇ ಗುರಿಯಾಗಿದ್ದು, ರೈತರ ಹಿತ ಮುಖ್ಯವಾಗಿಲ್ಲ. ಪಂಜಾಬ್ನಲ್ಲಿ ಆಮ್ ಆದ್ಮಿ ಪಾರ್ಟಿ ನೇತೃತ್ವದ ಸರ್ಕಾರ, ಕಬ್ಬಿನ ಎಫ್ಆರ್ಪಿಯನ್ನು ₹3,800 ಏರಿಕೆ ಮಾಡಿದೆ. ಅದೇ ರೀತಿ ರಾಜ್ಯ ಸರ್ಕಾರ ಕೂಡ ಎಫ್ಆರ್ಪಿ ಪರಿಷ್ಕರಣೆ ಮಾಡಿ ರೈತರಿಗೆ ನೆರವಾಗಬೇಕು” ಎಂದು ಆಗ್ರಹಿಸಿದರು.
“ರಾಜ್ಯದ ಬಹುತೇಕ ಸಕ್ಕರೆ ಕಾರ್ಖಾನೆಗಳು ಶಾಸಕರು ಹಾಗೂ ಸಚಿವರುಗಳಿಗೆ ಸೇರಿದ್ದಾಗಿವೆ. ಹಾಗಾಗಿ ರೈತರ ಮೇಲೆ ನಿರಂತರವಾಗಿ ದೌರ್ಜನ್ಯ ಮಾಡುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರೈತರ ಶ್ರಮಕ್ಕೆ ಬೆಲೆ ಸಿಗಬೇಕಾದರೆ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸರ್ಕಾರದ ಬದಲು ರೈತರ ಹಿತ ಬಯಸುವವರ ಸರ್ಕಾರ ಅಧಿಕಾರಕ್ಕೆ ಬರಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ಗುಂಡಿಗೆ ಬಲಿಯದ ಯೋಧನ ಮನೆಗೂ ಭೇಟಿ; ಸಾಂತ್ವನ
ರಸ್ತೆಗುಂಡಿಗೆ ಬಿದ್ದು ಸಾವನ್ನಪ್ಪಿದ ಮಂಡ್ಯದ ಮಾಜಿ ಯೋಧ ಎಸ್ ಎನ್ ಕುಮಾರ್ ಮನೆಗೆ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹಾಗೂ ಆಪ್ ಪಕ್ಷದ ಮುಖಂಡರುಗಳು ಭೇಟಿ ನೀಡಿದರು.

ಕಾರೆಮನೆ ಗೇಟ್ ಬಳಿ ರಸ್ತೆಗುಂಡಿ ತಪ್ಪಿಸಲು ಹೋಗಿ ಅಪಘಾತಗೊಂಡು ಮೃತಪಟ್ಟ ಸಾತನೂರು ಗ್ರಾಮದ ಬೀರೇಶ್ವರ ಬಡಾವಣೆಯ ನಿವೃತ್ತ ಯೋಧ ಮೃತಪಟ್ಟಿದ್ದರು.
ಕುಟುಂಬಕ್ಕೆ ಸಾಂತ್ವನ ಹೇಳಿದ ಆಪ್ ಮುಖಂಡರು, "ರಸ್ತೆಗುಂಡಿಯು ಕೇವಲ ಬೆಂಗಳೂರಿನ ಸಮಸ್ಯೆಯಲ್ಲ, ಇಡೀ ರಾಜ್ಯದ ಸಮಸ್ಯೆಯಾಗಿದೆ. ಮುಖ್ಯಮಂತ್ರಿಯವರಿಗೆ ಮಾಜಿ ಯೋಧರ ಬಗ್ಗೆ ಕಾಳಜಿಯಿದ್ದರೆ ಇಲ್ಲಿಗೆ ಬಂದು ಸೂಕ್ತ ಪರಿಹಾರ ನೀಡಲಿ” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಎಫ್ಆರ್ಪಿ ದರ ₹3050 ಸಾಕಾಗುವುದಿಲ್ಲ, ಹೆಚ್ಚುವರಿ ದರ ನಿಗದಿ ಮಾಡಿ: ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ
ಈ ವೇಳೆ ಎಎಪಿ ಮುಖಂಡರಾದ ಸಂಚಿತ್ ಸವ್ಹಾನಿ, ಮೋಹನ್ ದಾಸರಿ, ಜಗದೀಶ್ ವಿ ಸದಂ, ದರ್ಶನ್ ಜೈನ್, ಅಬ್ದುಲ್ ರಜಾಕ್ ಮಾರ್ಡಾಲ, ಮಂಡ್ಯದ ಸ್ಥಳೀಯ ನಾಯಕರಾದ ಮಹದೇವ ಸ್ವಾಮಿ, ವಕೀಲರಾದ ಬೊಮ್ಮಯ್ಯ ಸೇರಿದಂತೆ ಅನೇಕ ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು.