
- ಹಲವು ಸಂಘಟನೆಗಳಿಂದ ಬೆಂಬಲ
- ‘ಯಾವುದೇ ಕಾರಣಕ್ಕೂ ಕಾನೂನು ಕೈತೆಗೆದುಕೊಳ್ಳವುದಿಲ್ಲ’
ಸುರತ್ಕಲ್ ಅಕ್ರಮ ಟೋಲ್’ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರ 15ನೇ ದಿನಕ್ಕೆ ಕಾಲಿಟ್ಟಿದೆ. ಅಡ್ಡೂರು ಮತ್ತು ಬಜ್ಪೆ ಗ್ರಾಮಸ್ಥರು ಹೋರಾಟವನ್ನು ಬೆಂಬಲಿಸಿದ್ದು, ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಹಾಲುಮತ (ಕುರುಬ) ಸಮಾಜದಿಂದಲೂ ಬೆಂಬಲ ವ್ಯಕ್ತವಾಗಿದ್ದು, ಟೋಲ್ಗೇಟ್ ಹೋರಾಟಕ್ಕೆ ಸಹಾಯಹಸ್ತ ನೀಡಿದ್ದಾರೆ. ಬಂಟ್ವಾಳದ ಸಮನ್ವಯ ಸಮಿತಿ ಸದಸ್ಯರೂ ಧರಣಿಯಲ್ಲಿ ಭಾಗವಹಿಸಿದ್ದಾರೆ.
ಧರಣಿ ಕುರಿತು ಈ ದಿನ.ಕಾಮ್ ಜೊತೆ ಮಾತನಾಡಿದ ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, “ಗೇಣಿದಾರರ ಹೋರಾಟದಿಂದ ಹಿಡಿದು ಕಾರ್ಮಿಕರ ಹೋರಾಟದವರೆಗೆ ಜನ ಹೋರಾಟದ ದೊಡ್ಡ ಪರಂಪರೆ ಇರುವ ನಾಡು ಕರ್ನಾಟಕ. ಕಳೆದ ಮೂರು ದಶಕಗಳಿಂದ ಇಂತಹ ಹೋರಾಟಗಳು ಮರೀಚಿಕೆಯಾಗಿವೆ. ಮತ್ತೆ ಟೋಲ್ಗೇಟ್ ಹೋರಾಟದ ಮೂಲಕ ಜನರ ಧ್ವನಿಗೆ ಬೆಲೆ ಬಂದಿದೆ. ಜನರ ಬದುಕಿನ ಪ್ರಶ್ನೆಗಳನ್ನು ಮುನ್ನೆಲೆಗೆ ತರುವುದಕ್ಕೆ ಟೋಲ್ಗೇಟ್ ಹೋರಾಟ ಮುನ್ನುಡಿ ಬರೆದಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?: ಕಲಬುರಗಿ | ಬಾಡಿಗೆ ಪಾವತಿ ವಿಳಂಬ; ಎಸ್ಟಿ/ಎಸ್ಸಿ ಹಾಸ್ಟೆಲ್ ಬಾಲಕಿಯರನ್ನು ಹೊರದಬ್ಬಿದ ಮಾಲೀಕ
“ಟೋಲ್ಗೇಟ್ ಮುತ್ತಿಗೆ ದಿನ ಸಾವಿರಾರು ಜನರು ಬೆಂಬಲ ನೀಡಿದ್ದರು. ನಾವು ಮನಸ್ಸು ಮಾಡಿದ್ದರೆ, ಆ ದಿನವೇ ಟೋಲ್ಗೇಟ್ನ್ನು ತೆರವು ಮಾಡಬಹುದಿತ್ತು. ಆದರೆ, ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂಬುದು ನಮ್ಮ ಆಶಯ” ಎಂದರು.

ಹಿರಿಯ ಕಾಂಗ್ರೆಸ್ ಮುಖಂಡ ಐವನ್ ಡಿಸೋಜ, ಸುರತ್ಕಲ್ ಮಾಜಿ ಶಾಸಕ ಮೊಯ್ದಿನ್ ಬಾವಾ ಸೇರಿದಂತೆ ಹಲವು ಸಂಘಟನೆಯ ನಾಯಕರು ಹೋರಾಟದಲ್ಲಿ ಭಾಗಿಯಾಗಿದ್ದರು.