
- ಸಂಜಯ್ ರಾವುತ್ಗೆ ಇಡಿ ಎರಡನೆಯ ಸಮನ್ಸ್
- ಬಂಡಾಯ ಶಾಸಕರೊಂದಿಗೆ ಮುಂಬೈಗೆ ಶಿಂಧೆ
ಉಲ್ಬಣಗೊಳ್ಳುತ್ತಿರುವ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ನಡುವೆ ಬಂಡುಕೋರ ಶಾಸಕರ ನಾಯಕ ಏಕನಾಥ್ ಶಿಂಧೆ, "ನಾವು ಶೀಘ್ರದಲ್ಲೇ ಮುಂಬೈಗೆ ಹಿಂತಿರುಗುತ್ತೇವೆ. ನಾವಿನ್ನೂ ಶಿವಸೇನೆಯಲ್ಲಿದ್ದೇವೆ" ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ, ಬಿಜೆಪಿಯ ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನಾವೀಸ್ ಅವರು ಮಂಗಳವಾರ ಮಧ್ಯಾಹ್ನ ದೆಹಲಿಗೆ ತಲುಪಿದ್ದಾರೆ.
ಏಕನಾಥ್ ಶಿಂಧೆ ಹೇಳಿಕೆ ಮತ್ತು ದೇವೇಂದ್ರ ಫಡ್ನಾವೀಸ್ ದೆಹಲಿ ಪ್ರಯಾಣದ ನಡುವೆ, ಮಂಗಳವಾರ ಸಂಜೆ 5 ಗಂಟೆಗೆ ನಡೆಯುವ ಸಚಿವ ಸಂಪುಟ ಸಭೆಯ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಹಿಸಲಿದ್ದಾರೆ.
ಹೆಸರು ಬಹಿರಂಗಪಡಿಸುವಂತೆ ಸವಾಲು
"ಗುವಾಹಟಿಯಲ್ಲಿ 50 ಶಾಸಕರು ಇದ್ದಾರೆ. ಅವರು ತಮ್ಮ ಸ್ವಂತ ಇಚ್ಛೆಯಿಂದ ಮತ್ತು ಹಿಂದುತ್ವಕ್ಕಾಗಿ ನನ್ನೊಂದಿಗೆ ಬಂದವರು. ಇವರಲ್ಲಿ ಯಾರಾದರೂ ಸರ್ಕಾರದ ಜೊತೆಗೆ ಸಂಪರ್ಕದಲ್ಲಿದ್ದರೆ, ಹೆಸರು ಬಹಿರಂಗಪಡಿಸಲಿ" ಎಂದು ಏಕನಾಥ್ ಶಿಂಧೆ ಸವಾಲು ಹಾಕಿದ್ದಾರೆ.
“ಇಲ್ಲಿ ಯಾವ ಶಾಸಕರನ್ನು ಹತ್ತಿಕ್ಕಿಲ್ಲ, ಎಲ್ಲರೂ ನಮ್ಮೊಂದಿಗೆ ಖುಷಿಯಾಗಿದ್ದಾರೆ. ಇಲ್ಲಿರುವ ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಶಿವಸೇನೆ ಹೇಳಿಕೊಳ್ಳುತ್ತಿದೆ. ಹಾಗಿದ್ದರೆ, ಅವರ ಹೆಸರುಗಳನ್ನು ಬಹಿರಂಗಪಡಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ ? ಮಹಾ ಬಿಕ್ಕಟ್ಟು | ಶಿವಸೇನೆ ಶಾಸಕರನ್ನು ತನಿಖಾ ಸಂಸ್ಥೆಗಳು ನಿಯಂತ್ರಿಸುತ್ತಿವೆ ಎಂದ ಪ್ರಿಯಾಂಕ ಚತುರ್ವೇದಿ
ಸಂಜಯ್ ರಾವುತ್ಗೆ ಮತ್ತೊಂದು ಸಮನ್ಸ್
ಈ ನಡುವೆ ಪತ್ರಾ ಚಾವ್ಲ್ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 1ರಂದು ವಿಚಾರಣೆಗೆ ಹಾಜರಾಗುವಂತೆ ಸಂಜಯ್ ರಾವುತ್ ಅವರಿಗೆ ಇಡಿ ಎರಡನೇ ಸಮನ್ಸ್ ಕಳುಹಿಸಿದೆ.
ಸಮನ್ಸ್ಗೂ ಮುನ್ನ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ರಾವುತ್, “ಶಿವಸೇನೆ ಎರಡನೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡುತ್ತಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.