
ಬ್ಯಾಂಕ್ಗಳಿಗೆ ಸ್ಥಳೀಯ ಭಾಷೆ ಮಾತನಾಡಬಲ್ಲ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಬ್ಯಾಂಕ್ಗಳಿಗೆ ಕರೆ ನೀಡಿದ್ದಾರೆ.
ಮುಂಬೈನಲ್ಲಿ ನಡೆದ ಭಾರತೀಯ ಬ್ಯಾಂಕ್ಗಳ ಸಂಘದ 75ನೇ ವಾರ್ಷಿಕ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು, “ನೀವು ವ್ಯಾಪಾರ ಮಾಡಲು ಅಲ್ಲಿದ್ದೀರಾ. ಜನರಲ್ಲಿ ಮೌಲ್ಯ ಬೆಳೆಸಲು ಅಲ್ಲ” ಎಂದು ಹೇಳಿರುವುದಾಗಿ ʼದಿ ಹಿಂದುʼ ವರದಿಯಲ್ಲಿ ಉಲ್ಲೇಖಿಸಲಾಗಿದೆ.
“ನೀವು ಶಾಖೆಯ ಮಟ್ಟದಲ್ಲಿ ಪ್ರಾದೇಶಿಕ ಭಾಷೆ ಮಾತನಾಡದ ಸಿಬ್ಬಂದಿಗಳನ್ನು ಮತ್ತು ʼಹೇ ನಿಮಗೆ ಹಿಂದಿ ಮಾತನಾಡಲು ಬರುವುದಿಲ್ಲ, ಬಹುಶಃ ನೀವು ಭಾರತೀಯರೇ ಅಲ್ಲ ಎಂದು ಹೇಳುವ ರಾಷ್ಟ್ರಭಕ್ತಿ ಹೊಂದಿರುವ ಸಿಬ್ಬಂದಿಗಳನ್ನು ಹೊಂದಿದ್ದೀರಿ. ಇದು ವ್ಯಾಪಾರ ಗುಣವಲ್ಲ” ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
“ಶಾಖೆಗಳಲ್ಲಿ ಸಾರ್ವಜನಿಕರೊಂದಿಗೆ ಸ್ಥಳೀಯ ಭಾಷೆ ಮಾತನಾಡಲು ಬಾರದವರಿಗೆ ಗ್ರಾಹಕರೊಂದಿಗೆ ವ್ಯವಹರಿಸುವ ಉದ್ಯೋಗ ನೀಡಬಾರದು. ಬ್ಯಾಂಕ್ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವಾಗ ವ್ಯವಹಾರ ಜ್ಞಾನ ಹೊಂದಿರಬೇಕು” ಎಂದು ಹೇಳಿದ್ದಾರೆ.
“ನಾವು ನಿಮಗೆ ಸೇವೆಗೆ ಸಿದ್ಧರಿದ್ದೇವೆ ಎನ್ನುವುದನ್ನು ಮೊದಲು ಗ್ರಾಹಕರಿಗೆ ಮನವರಿಕೆ ಮಾಡಿ. ಆಗ ಅವರು ಸುಲಭವಾಗಿ ನಿಮ್ಮೊಂದಿಗೆ ವ್ಯವಹರಿಸುತ್ತಾರೆ” ಎಂದು ಅವರು ಬ್ಯಾಂಕ್ಗಳಿಗೆ ಕಿವಿಮಾತು ಹೇಳಿದ್ದಾರೆ.