
- ಬಂಡಾಯ ಶಾಸಕರನ್ನು ದೇಶದ್ರೋಹಿಗಳು ಎಂದು ಕರೆದ ಜನರು
- ಪಕ್ಷದ ಸದಸ್ಯರಾಗಿ ಹೆಚ್ಚು ಜನರು ನೊಂದಾಯಿಸಿಕೊಳ್ಳುವಂತೆ ಮನವಿ
ಪಕ್ಷದ ಹಿಂದಿನ ಬಂಡಾಯಗಳಿಗೆ ಹೋಲಿಸಿದಲ್ಲಿ ಈ ಬಾರಿಯ ಬಂಡಾಯ ಭಿನ್ನವಾಗಿದ್ದು, ಶಿವಸೇನೆ ಮುಗಿಸುವ ಗುರಿ ಹೊಂದಿತ್ತು ಎಂದು ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.
ಮುಂಬೈನ ವಾರ್ಡ್ ಮಟ್ಟದ ಕಚೇರಿ ಉದ್ಘಾಟಿಸಿ ಮಾತನಾಡಿದ ಉದ್ಧವ್ ಠಾಕ್ರೆ “ಶಿವಸೇನೆಯು ಹಿಂದುತ್ವಕ್ಕಾಗಿ ರಾಜಕೀಯದಲ್ಲಿ ತೊಡಗಿದೆ ಆದರೆ ಬಿಜೆಪಿ ರಾಜಕೀಯ ಹಿತಾಸಕ್ತಿಗಳಿಗಾಗಿ ಹಿಂದುತ್ವವನ್ನು ಬಳಸಿಕೊಳ್ಳುತ್ತಿದೆ” ಎಂದು ಆರೋಪಿಸಿದ್ದಾರೆ.
ಕಳೆದ ತಿಂಗಳು, ಶಿವಸೇನಾ ಶಾಸಕ ಏಕನಾಥ್ ಶಿಂಧೆ ಮತ್ತು 39 ಇತರ ಶಾಸಕರು ಪಕ್ಷದ ನಾಯಕತ್ವದ ವಿರುದ್ಧ ಬಂಡಾಯವೆದ್ದು, ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಕ್ಕೆ ಕಾರಣವಾಗಿದ್ದರು.
"ಹಿಂದಿನ ಬಂಡಾಯಗಳಿಗಿಂತ ಭಿನ್ನವಾಗಿ, ಈ ದಂಗೆಯು ಶಿವಸೇನೆಯನ್ನು ಶಾಶ್ವತವಾಗಿ ಮುಗಿಸುವ ಗುರಿ ಹೊಂದಿತ್ತು. ಇದು ಹಣ ಮತ್ತು ನಿಷ್ಠೆಯ ನಡುವಿನ ಯುದ್ಧವಾಗಿದ್ದು, ಬಂಡಾಯ ಶಾಸಕರು ಮತ್ತು ಬಿಜೆಪಿಯು ನಮ್ಮನ್ನು ಎದುರಿಸಲು ವೃತ್ತಿಪರ ಏಜೆನ್ಸಿಗಳನ್ನು ನೇಮಿಸಿಕೊಂಡಿದ್ದಾರೆ" ಎಂದು ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.
ಜುಲೈ 27ರಂದು ಉದ್ಧವ್ ಠಾಕ್ರೆ ಅವರು 62ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಅವರ ಜನ್ಮದಿಂದು ಹೂಗುಚ್ಚ ನೀಡಬೇಡಿ ಎಂದು ಹೇಳಿರುವ ಅವರು, ಹೆಚ್ಚು ಹೆಚ್ಚು ಜನರು ಶಿವಸೇನೆ ಸದಸ್ಯರಾಗಿ ನೊಂದಾಯಿಸಿಕೊಳ್ಳುವಂತೆ ಕಾರ್ಯಕರ್ತರಿಂದ ಅಫಿಡವಿಟ್ ಕೇಳಿದರು.
"ಹೋರಾಟವನ್ನು ಈಗ ಭಾರತದ ಚುನಾವಣಾ ಆಯೋಗದ ಬಳಿಗೆ ತೆಗೆದುಕೊಂಡು ಹೋಗಲಾಗಿದೆ, ಬಂಡಾಯ ಶಾಸಕರು ಮೂಲ ಶಿವಸೇನೆ ಎಂದು ಹೇಳಿಕೊಳ್ಳುತ್ತಾರೆ. ನಮಗೆ ಹುರುಪು ಮಾತ್ರವಲ್ಲ ಜತೆಗೆ ಪಕ್ಷದ ಸದಸ್ಯರಾಗಿ ಜನತೆಯ ದೃಢವಾದ ಬೆಂಬಲ ಮತ್ತು ನೋಂದಣಿ ಅಗತ್ಯವಿದೆ" ಎಂದು ಠಾಕ್ರೆ ಹೇಳಿದರು.
ಈ ಸುದ್ದಿ ಓದಿದ್ದೀರಾ ? ಶಿವಸೇನಾ ಚಿಹ್ನೆಗಾಗಿ ಆಂತರಿಕ ತಿಕ್ಕಾಟ| ಬಹುಮತದ ಸಾಕ್ಷ್ಯ ನೀಡುವಂತೆ ಠಾಕ್ರೆ ಮತ್ತು ಶಿಂಧೆಗೆ ಚುನಾವಣಾ ಆಯೋಗ ಸೂಚನೆ
ಅಗತ್ಯವಿದ್ದರೆ 40 ಸೇನಾ ಬಂಡಾಯ ಶಾಸಕರನ್ನು ತಮ್ಮ ಪಕ್ಷಕ್ಕೆ ವಿಲೀನಗೊಳಿಸಲು ಅವಕಾಶ ನೀಡುವ ಬಗ್ಗೆ ಪರಿಗಣಿಸುವುದಾಗಿ ಹೇಳಿದ್ದಾರೆ ಎಂದು ಯಾವುದೇ ಹೆಸರನ್ನು ತೆಗೆದುಕೊಳ್ಳದೆ, ತಮ್ಮ ಸೋದರ ಸಂಬಂಧಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಗುರಿಯಾಗಿಸಿ ಉದ್ಧವ್ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದರು.
ಬಂಡಾಯ ಶಾಸಕರನ್ನು ಏನೆಂದು ಕರೆಯಬೇಕು ಎನ್ನುವುದು ತಿಳಿದಿಲ್ಲ ಎಂದು ಆಕ್ರೋಶ ಹೊರಹಾಕಿದಾಗ, ನೆರದಿದ್ದ ಜನಸಮೂಹ “ದೇಶದ್ರೊಹಿಗಳು” ಎಂದು ಕೂಗಿದರು.
"ಶಿವಸೇನೆ ಸಾಮಾನ್ಯ ಜನರನ್ನು ಅಸಾಮಾನ್ಯರನ್ನಾಗಿ ಮಾಡಿದೆ ಮತ್ತು ಈ 40 (ಬಂಡಾಯ) ಶಾಸಕರನ್ನು ಚುನಾವಣೆಯಲ್ಲಿ ಗೆಲ್ಲಿಸಿದೆ. ಈಗ ಶಿವಸೇನೆಯ ಹೊಸ ಕಾರ್ಯಕರ್ತರೊಂದಿಗೆ ಅದನ್ನು ಪುನರಾವರ್ತಿಸುವ ಸಮಯ ಬಂದಿದೆ” ಎಂದು ಅವರು ಹೇಳಿದ್ದಾರೆ.