
- ಪಿಟಿಸಿಎಲ್ ಕಾಯ್ದೆ ಅಡಿ 2016ರಲ್ಲಿ ದಲಿತ ಕುಟುಂಬದ ಪರ ಆದೇಶವಾಗಿತ್ತು
- ಶಾಸಕ ಎಂ ಕೃಷ್ಣಪ್ಪ ಮತ್ತು ಅವರ ಬೆಂಬಲಿಗರಿಂದ ದೌರ್ಜನ್ಯ,: ಆರೋಪ
ಎರಡು ಎಕರೆ ಜಮೀನಿನಲ್ಲಿ ಕಲ್ಯಾಣ ಮಂಟಪ ಮತ್ತು ಕಚೇರಿ ನಿರ್ಮಾಣಕ್ಕೆ ಜಾಗ ನೀಡಲು ನಿರಾಕರಿಸಿದ ಕಾರಣಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಎಂ ಕೃಷ್ಣಪ್ಪ ಮತ್ತು ಅವರ ಬೆಂಬಲಿಗರು ದೌರ್ಜನ್ಯ ನಡೆಸುತ್ತಿದ್ದಾರೆ ಮತ್ತು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ದಲಿತ ಕುಟುಂಬವೊಂದು ದಯಾಮರಣ ಕೊರಿ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಪತ್ರ ಬರೆದಿದೆ.
ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿಯ ಪಿಲ್ಲಗಾನಹಳ್ಳಿ ಗ್ರಾಮದ ದಿವಂಗತ ನಾರಾಯಣಪ್ಪ ಅವರ ಕುಟುಂಬ ಸದಸ್ಯರ ಪೈಕಿ ಎಸ್ ಮಂಜುಳ ದಯಾಮರಣ ನೀಡಬೇಕು ಎಂದು ಕೋರಿ ನವೆಂಬರ್ 19ರಂದು ಮನವಿ ಸಲ್ಲಿಸಿದ್ದಾರೆ.
“ನಮ್ಮ ಕುಟುಂಬದವರು ಮೂರು ತಲೆಮಾರುಗಳಿಂದ ಈ ಜಾಗದಲ್ಲಿ ವಾಸ ಮಾಡುತ್ತಿದ್ದೇವೆ. ಕಳೆದ ನಾಲ್ಕು ವರ್ಷಗಳಿಂದ ಶಾಸಕ ಎಂ ಕೃಷ್ಣಪ್ಪ ಮತ್ತು ಅವರ ಬೆಂಬಲಿಗರು, ಸ್ಥಳೀಯ ಭೂಗಳ್ಳರು, ಬೆಂಗಳೂರು ದಕ್ಷಿಣ ತಾಲೂಕು ತಹಶೀಲ್ದಾರ್ ರಾಮಲಕ್ಷ್ಮಣಯ್ಯ ಮತ್ತು ದಿನೇಶ್ ಇವರ ಕಿರುಕುಳ, ದೌರ್ಜನ್ಯ ಸಹಿಸಿಕೊಳ್ಳಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇವೆ. ಆದರೆ, ಅತ್ಮಹತ್ಯೆ ಮಾಡಿಕೊಳ್ಳುವುದು ಕಾನೂನಿಗೆ ವಿರುದ್ಧವೆಂದು ತಮಗೆ ಈ ಮೂಲಕ ದಯಾಮರಣಕ್ಕೆ ಮನವಿ ಸಲ್ಲಿಸುತ್ತಿದ್ದೇವೆ” ಎಂದು ಪತ್ರದಲ್ಲಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
“ವಾಸ ಮಾಡುತ್ತಿರುವ ಜಾಗದಲ್ಲಿ ಪೆಟ್ರೋಲ್ ಬಂಕ್, ಕಲ್ಯಾಣ ಮಂಟಪ ಮತ್ತು ಕಚೇರಿ ನಿರ್ಮಾಣ ಮಾಡಲು ಜಾಗ ನೀಡಬೇಕು ಎಂದು ಶಾಸಕ ಕೃಷ್ಣಪ್ಪ ಮತ್ತು ಅವರ ಬೆಂಬಲಿಗ ಸಂಪಂಗಿ ಎಂಬುವವರು ನಿರಂತರವಾಗಿ ಒತ್ತಾಯ ಮಾಡುತ್ತಿದ್ದಾರೆ” ಎಂದು ಎಸ್ ಮಂಜುಳ ದೂರಿದ್ದಾರೆ.
“ನಮ್ಮ ಆಸ್ತಿ ಕಬಳಿಸಿ ನಮ್ಮನ್ನು ಬೀದಿ ಪಾಲು ಮಾಡಲು ಪ್ರಯತ್ನಿಸುತ್ತಿದ್ದಾರೆ. ನಮಗೆ ಈ ಆಸ್ತಿ ಬಿಟ್ಟರೆ ಬೇರೆ ಯಾವುದೇ ಆಸ್ತಿ ಇಲ್ಲ. 10 ರಿಂದ 15 ವರ್ಷಗಳ ಕಾಲ ನ್ಯಾಯಾಲಯದಲ್ಲಿ ಕೇಸು ದಾಖಲಿಸಿ ಅಲೆಯತ್ತಿದ್ದೇವೆ. ಅದರ ಸಲುವಾಗಿ ಸಾಲ ಮಾಡಿಕೊಂಡು ಬಡ್ಡಿಯನ್ನೂ ಕಟ್ಟಲು ಸಾಧ್ಯವಾಗುತ್ತಿಲ್ಲ. ನ್ಯಾಯಾಲಯದ ಮೂಲಕ ಆಸ್ತಿಯನ್ನು ನಮ್ಮಂತೆ ಪಡೆದುಕೊಂಡಿರುತ್ತೇವೆ. ಇವರು ನಮ್ಮಂಥ ದಲಿತರನ್ನು ಬೆದರಿಸಿ ಆಸ್ತಿ ಕಿತ್ತುಕೊಂಡು ನಮಗೆ ಭೂಗಳ್ಳರು ಎಂದು ಪಟ್ಟ ಕಟ್ಟಿದ್ದಾರೆ” ಎಂದು ಆರೋಪಿಸಿದ್ದಾರೆ.
“ಕಳೆದ ಎರಡು ವರ್ಷಗಳಿಂದ ಸಿವಿಲ್ ನ್ಯಾಯಾಲಯಗಳಿಗೆ ಅಲೆದಾಡುತ್ತಿದ್ದೇವೆ. (ಪ್ರಕರಣಗಳು ಸಂಖ್ಯೆಗಳು 306/2021, 308/2021, 310/2021, 493/2021, 978/2021) ಈ ದಾವೆಗಳನ್ನು ಪರಿಗಣಿಸದೇ ಇವರು ನಮ್ಮ ಆಸ್ತಿ ಕಬಳಿಸುವ ಉದ್ದೇಶದಿಂದ ನೀಡುತ್ತಿರುವ ಕಿರುಕುಳದಿಂದ ಇಡೀ ಕುಟುಂಬ ಮನೆಯಿಂದ ಹೊರಗಡೆ ಬರಲು ಸಾಧ್ಯವಾಗದೇ ಮನೆಯೊಳಗೂ ಇರಲಾಗದೇ ನೋವಿನಿಂದ ಬೆಂದು ಹೋಗಿದ್ದೇವೆ. ನನಗೂ ಜೀವ ಬೆದರಿಕೆ ಇದೆ” ಎಂದು ವಿವರಿಸಿದ್ದಾರೆ.
“2020ರಲ್ಲಿ ಈ ಸ್ಥಳದಲ್ಲಿ ಪೆಟ್ರೋಲ್ ಬಂಕ್ ಮಾಡಲು ಜಾಗ ನೀಡಬೇಕು ಎಂದು ಶಾಸಕ ಕೃಷ್ಣಪ್ಪ ಅವರ ಬೆಂಬಲಿಗ ಸಂಪಂಗಿ ಕೇಳಿದ್ದನ್ನು ನಮ್ಮ ಕುಟುಂಬವು ನಿರಾಕರಿಸಿತ್ತು. ಕೋವಿಡ್ ನೆಪವಾಗಿರಿಸಿಕೊಂಡು ಸ್ಥಳೀಯ ಕಾರ್ಪೋರೇಟರ್ನೊಂದಿಗೆ ಸೇರಿ ಈ ಸ್ಥಳದಲ್ಲಿ ಮೂರು ದಿನ ತರಕಾರಿ ಮಾರುಕಟ್ಟೆ ಹಾಕಿಸಿ ಕುಟುಂಬದ ಸದಸ್ಯರನ್ನು ಹೆದರಿಸಲಾಗಿತ್ತು” ಎಂದು ದೂರಿದ್ದಾರೆ.
“ನಮ್ಮ ತಾತನಿಗೆ 1950ರಲ್ಲಿ ಎರಡು ಎಕರೆ ಜಮೀನು ಮಂಜರಾಗಿತ್ತು. ಈ ಜಾಗದಲ್ಲಿ 45 ವರ್ಷಗಳಿಂದ ವ್ಯವಸಾಯ ಮಾಡಲಾಗುತ್ತಿತ್ತು. ಕಾರಣಾಂತರಗಳಿಂದ ಈ ಆಸ್ತಿ 1992ರಲ್ಲಿ ಪರಮಾನಂದ ಹಾಗೂ ಗಜೇಂದ್ರನ್ ಎಂಬುವರಿಗೆ ವರ್ಗಾವಣೆಯಾಗಿದೆ. ಈ ವ್ಯಕ್ತಿಗಳಿಂದ 1995-96ರಲ್ಲಿ ಪುಟ್ಟರಾಜು ಮತ್ತು ಅಶೋಕ್ ಕುಮಾರ್ ಎಂಬುವವರಿಗೆ ತಲಾ 1 ಎಕರೆಯಂತೆ ವರ್ಗಾವಣೆಯಾಗಿತ್ತು. ಇದೇ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮತ್ತು ಪಿಲ್ಲಗಾನಹಳ್ಳಿ ಗ್ರಾಮದಲ್ಲಿ 1998-99ರಲ್ಲಿ ಕೆಐಎಡಿಬಿಗೆ ಕೆಲವು ಭೂಮಿಗಳು ಸ್ವಾಧೀನಕ್ಕೆ ಒಳಪಟ್ಟಿದ್ದವು” ಎಂದು ತಿಳಿಸಿದ್ದಾರೆ.

“ಸರ್ವೆ ನಂಬರ್ 2ರಲ್ಲಿ ಆಕಾರ್ ಬಂದಿನಂತೆ 32.19 ಎಕರೆ ಇದೆ. ಈ ಪೈಕಿ 28.19 ಎಕರೆ ಭೂ ಸ್ವಾಧೀನಕ್ಕೆ ಒಳಪಟ್ಟಿದೆ. ಇದರಲ್ಲಿ ನಮ್ಮ ಜಮೀನು ಸರ್ವೇ ನಂ. 2 ಹಿಸ್ಸಾ ನಂ. 15 ಇದ್ದು, ಇದು ಭೂ ಸ್ವಾಧೀನಕ್ಕೆ ಒಳಪಟ್ಟಿಲ್ಲ. ಸ್ಥಳ ಮತ್ತು ದಾಖಲೆಗಳನ್ನು ಪರಿಶೀಲಿಸಿ, ಬಳಿಕ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ 2005ರಲ್ಲಿ ಪಿಟಿಸಿಎಲ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು. 2016ರಲ್ಲಿ ನಮ್ಮ ಪರವಾಗಿ ಆದೇಶ ಹೊರಬಿದ್ದಿದೆ” ಎಂದು ಉಲ್ಲೇಖಿಸಿದ್ದಾರೆ.
“ಆದೇಶದ ನಂತರ 2 ಎಕರೆ ಜಮೀನಿಗೆ ಪಹಣಿ ಮಾಡದೇ ಅಧಿಕಾರಿಗಳು ಕೇವಲ ಒಂದು ಎಕರೆಗೆ ಮಾತ್ರ ಪಹಣಿ ಮಾಡಿಕೊಟ್ಟಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ನೀವು ಸುಪ್ರೀಂ ಕೋರ್ಟ್ಗೆ ಹೋಗಿ ಬಗೆಹರಿಸಿಕೊಳ್ಳಿ ಎಂಬ ಉತ್ತರ ನೀಡಿದ್ದಾರೆ. ಮತ್ತೆ ಕೋರ್ಟ್ಗೆ ಅಲೆಯುವ ಶಕ್ತಿ ಇಲ್ಲದ ಕಾರಣ ಕೋರ್ಟ್ ಆದೇಶದಂತೆ ಸರ್ವೇ ಮಾಡಿ ಪೋಡಿ ಮಾಡಿ ಸ್ವಾಧೀನಕ್ಕೆ ಬಿಟ್ಟುಕೊಡುವಂತೆ ಬೆಂಗಳೂರು ತಹಶೀಲ್ದಾರ್ ದಿನೇಶ್ ಅವರಿಗೆ ಅರ್ಜಿ ಸಲ್ಲಿಸಿದೆವು. ಆದರೆ ಅವರು ಒಂದು ತಿಂಗಳಿನಿಂದ ಸತಾಯಿಸುತ್ತಿದ್ದಾರೆ” ಎಂದು ವಿವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಹೆಗ್ಗೋಠಾರ ಅಸ್ಪೃಶ್ಯತೆ ಆಚರಣೆ ಪ್ರಕರಣ: ಆರೋಪಿಯ ಬಂಧನ
“ನಮ್ಮ ಸಮಾಧಿ ಮೇಲೆ ಅವರು ಮಂಟಪ ಕಟ್ಟಿಕೊಳ್ಳಲಿ”
ಈ ಕುರಿತು ಎಸ್ ಮಂಜುಳಾ, ಈ ದಿನ.ಕಾಮ್ ಜೊತೆಗೆ ಮಾತನಾಡಿ, “ದಯಾಮರಣ ಕೋರಿ ಮನವಿ ಸಲ್ಲಿಸಿ ಮೂರು ದಿನ ಕಳೆದಿದೆ. ಆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಸರ್ಕಾರಿ ಜಾಗ ಎಂದು ಮಾಡುವ ಪ್ರಕ್ತಿಯೆ ಮತ್ತಷ್ಟು ವೇಗವಾಗಿ ಮಾಡುತ್ತಿದ್ದಾರೆ. ಒಂದು ವೇಳೆ ಯಾರಾದರೂ ಬಂದು ಕೇಳಿದರೆ “ಅದು ಸರ್ಕಾರಿ ಗೋಮಾಳ. ಅದನ್ನು ಒತ್ತುವರಿ ಮಾಡಿದ್ದಾರೆ, ನಮ್ಮ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ, ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತೇವೆ” ಎಂದು ಹೇಳಲು ಶಾಸಕ ಎಂ ಕೃಷ್ಣಪ್ಪ ಹುನ್ನಾರ ನಡೆಸುತ್ತಿದ್ದಾರೆ” ಎಂದು ಆರೋಪಿಸಿದರು.
“ನಮಗೆ ಇರುವುದು ಅದೊಂದೇ ಜೀವನಾಧಾರ. ಪಿಟಿಸಿಎಲ್ ಆದೇಶವಾಗಿ ಒಂದು ಸಣ್ಣ ವಿವಾದದಿಂದಾಗಿ ಇಡೀ ಜಮೀನನ್ನೇ ಕಿತ್ತುಕೊಳ್ಳುತ್ತಾರೆ ಎಂದರೆ ನಾವು ಎಲ್ಲಿಗೆ ಹೋಗಬೇಕು. ನಮ್ಮ ಪರವಾಗಿ ಅದೇಶವಾದರೂ ಅಧಿಕಾರಿಗಳು ಕನಿಷ್ಠ ಗೌರವವನ್ನು ಕೊಡುವುದಿಲ್ಲ. ನಮಗೂ ಸಾಕಾಗಿ ಹೋಗಿದೆ, ಆ ಎಂಎಲ್ಎಗೆ ಜಮೀನು ಕೊಟ್ಟುಬಿಡಲಿ, ನಮ್ಮ ಸಮಾಧಿಗಳ ಮೇಲೆ ಅವರು ಮಂಟಪವನ್ನಾದರೂ ಕಟ್ಟಿಕೊಳ್ಳಲಿ, ಛತ್ರವನ್ನಾದರೂ ಕಟ್ಟಿಕೊಳ್ಳಲಿ. ಪಾಪ ಅವರಿಗೆ ಏನು ಗತಿ ಇಲ್ಲ. ಬಡವರು, ಇನ್ನೇನು ಮಾಡಲು ಆಗುತ್ತದೆ. ಮೊನ್ನೆ ದಯಾ ಮರಣಕ್ಕೆ ಕೋರಿ ಬರೆದಿದ್ದೇವೆ. ಮೂರು ದಿನ ಆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇನ್ನು ಎರಡು ದಿನ ನೋಡುತ್ತೇವೆ. ಬಳಿಕ ಯಾವುದೇ ಕೆರೆಯೋ ಬಾವಿಯೋ ನೋಡಿಕೊಳ್ಳುತ್ತೇವೆ” ಎಂದು ನೊಂದು ನುಡಿದರು.