
- ಪರಿಷತ್ ಸದಸ್ಯರಾದ ಚಂದ್ರಶೇಖರ ಪಾಟೀಲ, ಭೀಮರಾವ ಪಾಟೀಲ ಸ್ಥಳಕ್ಕೆ ಭೇಟಿ
- ಸಧ್ಯದಲ್ಲೆ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ ಪೊಲೀಸರು
ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಬಳಿದು ಅಪಮಾನ ಮಾಡಿದ ದುಷ್ಕರ್ಮಿಗಳನ್ನು 24 ಗಂಟೆಗಳ ಒಳಗೆ ಪತ್ತೆಮಾಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ ಮತ್ತು ಭೀಮರಾವ ಪಾಟೀಲ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಹುಮನಾಬಾದ ತಾಲೂಕಿನ ಘಾಟಬೋರಳ ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಅವರು, “ಇಂತಹ ಘಟನೆಗಳು ಗ್ರಾಮಕ್ಕೆ ಅವಮಾನ ಉಂಟು ಮಾಡುತ್ತವೆ. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಈಗಾಗಲೇ ಪೊಲೀಸ್ ಅಧಿಕಾರಿಗಳಿಗೆ ಕೆಲ ಮಾಹಿತಿಗಳು ಲಭ್ಯವಾಗಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಲಿದ್ದಾರೆ. ಪೊಲೀಸರಿಗೆ ಗ್ರಾಮದ ಎಲ್ಲ ಜನರು ಸಹಕಾರ ನೀಡಬೇಕು” ಎಂದು ಮನವಿ ಮಾಡಿದರು.

“ಒಂದೇ ರಸ್ತೆಯಲ್ಲಿ ವಿವಿಧ ವೃತ್ತಗಳಿವೆ. ಮಹಾನುಭಾವರ ಭಾವಚಿತ್ರಕ್ಕೆ ಯಾವತ್ತು ಅವಮಾನ ಉಂಟಾಗುತ್ತಿಲ್ಲ. ಆದರೆ, ಅಂಬೇಡ್ಕರ್ ಭಾವಚಿತ್ರಕ್ಕೆ ಯಾಕೆ ಪದೇ ಪದೆ ಅವಮಾನ ಆಗುತ್ತಿದೆ. ಕೂಡಲೇ ಗ್ರಾಮ ಪಂಚಾಯಿತಿ ವತಿಯಿಂದ ಸಿಸಿಟಿವಿ ಅಳವಡಿಸುವ ಕೆಲಸ ಆಗಬೇಕು” ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
“ಗ್ರಾಮ ಪಂಚಾಯಿತಿ ವತಿಯಿಂದ ಕೂಡಲೇ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುವುದ. ಶಾಸಕರು ನೀಡಿರುವ 5 ಲಕ್ಷ ರೂ. ಅನುದಾನ ಬಳಸಿಕೊಂಡು ಕೂಡಲೆ ಕಾಮಗಾರಿ ಪೂರ್ಣಗೊಳಿಸಿ ಅಂಬೇಡ್ಕರ್ ವೃತ್ತ ಉದ್ಘಾಟನೆ ಮಾಡೋಣ” ಎಂದು ಗ್ರಾಮ ಪಂಚಾಯಿತಿ ಅಧಿಕಾರಿ ಭೀಮರಾವ ಪಾಟೀಲ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ಸುತ್ತೋಲೆ ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ
ಅಂಬೇಡ್ಕರ್ ವೃತ್ತದಲ್ಲಿ ನೂರಾರು ಮಹಿಳೆಯರು, ಗ್ರಾಮದ ಮುಖಂಡರು ಇದ್ದರು. ಸಿಪಿಐ ಶರಣಬಸಪ್ಪ ಕೋಡ್ಲಾ, ಪಿಎಸ್ಐ ಮಂಜನಗೌಡ್ ಪಾಟೀಲ, ತಹಶೀಲ್ದಾರ ಪ್ರದೀಪಕುಮಾರ ಹಾಗೂ ಇತರರು ಇದ್ದರು.