
- ಚನ್ನರಾಯಪಟ್ಟಣ ಹೋಬಳಿ ಮಟ್ಟಬಾರಲು ಗ್ರಾಮದಲ್ಲಿ ಘಟನೆ
- ಎರಡನೇ ಹಂತದ ಭೂ ಸ್ವಾಧೀನಕ್ಕೆ ಸರ್ವೆ ಮಾಡಲು ಬಂದಿದ್ದರು
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಎರಡನೇ ಹಂತದ ಭೂ ಸ್ವಾಧೀನಕ್ಕಾಗಿ ಸರ್ವೆ ಮಾಡಲು ಬಂದಿದ್ದ ಅಧಿಕಾರಿಗಳನ್ನು ತಡೆದ ರೈತರು, ಘೆರಾವ್ ಮಾಡಿ ವಾಪಸ್ ಕಳುಹಿಸಿದ್ದಾರೆ.
ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರು ತಮ್ಮ ಫಲವತ್ತಾದ 1,777 ಎಕರೆ ಕೃಷಿ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ನೀಡುವುದಿಲ್ಲ ಎಂದು ಪಟ್ಟು ಹಿಡಿದು ಕಳೆದ 300 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ನಿರಂತರ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆ ಸರ್ವೆ ನಡೆಸಲು ರೈತರು ಅವಕಾಶ ನೀಡಿರಲಿಲ್ಲ.
ಆದರೆ, ಶನಿವಾರ ಬೆಳಿಗ್ಗೆ ಮಟ್ಟಬಾರ್ಲು ಗ್ರಾಮಕ್ಕೆ ಓಮ್ನಿ ಕಾರಿನಲ್ಲಿ ಬಂದ ಕೆಲವು ಅಧಿಕಾರಿಗಳು ಸರ್ವೆ ನಡೆಸಲು ಪ್ರಯತ್ನಿಸಿದ್ದಾರೆ. ಸರ್ವೆ ಮಾಡಲು ಬಂದವರನ್ನು ಸ್ಥಳೀಯ ರೈತರು ಪ್ರಶ್ನಿಸಿದ್ದಾರೆ. ಈ ವೇಳೆ ಪೈಪ್ ಲೈನ್ ಸರ್ವೆ, ರಸ್ತೆ ವಿಸ್ತರಣೆಗೆ ಸರ್ವೆ ಮಾಡುತ್ತಿದ್ದೇವೆ ಎಂದು ರೈತರ ದಾರಿ ತಪ್ಪಿಸಲು ಪ್ರಯತ್ನಿಸಿದ್ದಾರೆ. ಕೊನೆಯಲ್ಲಿ ನಾವು ಯಾವ ಉದ್ದೇಶಕ್ಕಾದರೂ ಸರ್ವೆ ಮಾಡುತ್ತೇವೆ, ಅದೆಲ್ಲ ನಿಮೆಗೇಕೆ? ಎಂದು ಉಡಾಫೆಯಿಂದ ವರ್ತಿಸಿದ್ದಾರೆ. ಬಳಿಕ ರೈತರೆಲ್ಲ ಸೇರಿಕೊಂಡು ಘೇರಾವ್ ಮಾಡಿದ್ದಾರೆ. ಬಳಿಕ ಅವರನ್ನು ರಸ್ತೆಯಲ್ಲಿ ತಡೆದು ರೈತರು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೆಐಎಡಿಬಿಗೆ ಎರಡನೇ ಹಂತದ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಪ್ರದೇಶಗಳ ಸರ್ವೆ ನಡೆಸಲು ಬಂದಿದ್ದವರನ್ನು ಹಿಂದೆ ಕಳುಹಿಸಲಾಗಿದೆ. ಕಳೆದ 300 ದಿನಗಳಿಂದ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ರೈತರಲ್ಲಿ ಬೇಸರ ತರಿಸಿದೆ ಎಂದು ರೈತ ಮುಖಂಡ ರಮೇಶ್ ಚೀಮಾಚನಹಳ್ಳಿ ಅವರು, ಈ ದಿನ.ಕಾಮ್ಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ ? ಈ ದಿನ ಬೆಂಬಲ | ಅನಿರ್ದಿಷ್ಟಾವಧಿ ಹೋರಾಟಕ್ಕೆ ಬಗ್ಗಿದ ಸರ್ಕಾರ ; ಸಾಗುವಳಿ ಭೂಮಿ ಸರ್ವೆಗೆ ಬಂದ ಅಧಿಕಾರಿ ವರ್ಗ
ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಕಳೆದ 300 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿದ್ದಾರೆ. ಚನ್ನರಾಯಪಟ್ಟಣ, ಹ್ಯಾಡ್ಯಾಳ, ಚೀಮಾಚನಹಳ್ಳಿ, ಹರಳೂರು, ನಲ್ಲಪ್ಪನಹಳ್ಳಿ, ಎಸ್ ತೆಲ್ಲೋಹಳ್ಳಿ, ಪೋಲನಹಳ್ಳಿ, ಗೋಕರೆಬಚ್ಚೇನಹಳ್ಳಿ, ಮಟ್ಟಬಾರ್ಲು, ಪಾಳ್ಯ ಹಾಗೂ ನಾಗನಾಯಕನಹಳ್ಳಿ ಸೇರಿದಂತೆ 13 ಹಳ್ಳಿಗಳ ರೈತರು ಈ ಹೋರಾಟದಲ್ಲಿ ಭಾಗವಹಿಸಿದ್ದಾರೆ.