
- ರಿಕ್ಟರ್ ಮಾಪನದಲ್ಲಿ 6.6 ತೀವ್ರತೆ ದಾಖಲು
- ಜನರ ರಕ್ಷಣೆಗೆ ನೇಪಾಳದ ಪ್ರಧಾನಿ ಸೂಚನೆ
ನೇಪಾಳದ ರಾಜಧಾನಿ ಕಠ್ಮಂಡು ಮತ್ತು ಸುತ್ತಲಿನ ಪ್ರದೇಶದಲ್ಲಿ ಭೂಕಂಪನವಾಗಿದ್ದು, ಆರು ಮಂದಿ ಮೃತಪಟ್ಟಿದ್ದಾರೆಂದು ವರದಿಯಾಗಿದೆ. ನೆರೆಯ ರಾಷ್ಟ್ರ ಭಾರತದ ಕೆಲವು ಭಾಗಗಳಲ್ಲಿಯೂ ಭೂಕಂಪನದ ಅನುಭವವಾಗಿದೆ.
"ಬುಧವಾರ ಬೆಳಗ್ಗೆ ನೇಪಾಳದ ಪಶ್ಚಿಮ ಭಾಗದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ. ಪರಿಣಾಮ ಮನೆಗಳು ಕುಸಿತದಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ. ಐವರು ಗಾಯಗೊಂಡಿದ್ದಾರೆ” ಎಂದು ದೋಟಿಯ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
“ಭೂಕಂಪ ಸಂಭವಿಸಿದ ಕೂಡಲೇ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಜನರು ಭಯಪಡಬೇಕಾಗಿಲ್ಲ” ಎಂದು ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಹೇಳಿದ್ದಾರೆ.
“ಫಾರ್ ವೆಸ್ಟ್ನ ಖಾಪ್ತದ್ ಪ್ರದೇಶದಲ್ಲಿ ಕೇಂದ್ರೀಕೃತವಾಗಿರುವ ಭೂಕಂಪದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸುತ್ತಿದ್ದೇನೆ. ಅಲ್ಲದೆ, ಭೂಕಂಪ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ. ಗಾಯಗೊಂಡಿರುವ ಸಂತ್ರಸ್ತರಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಿದ್ದೇನೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? : ಪ್ರಧಾನಿಗಳ ಚುನಾವಣಾ ಭಾಷಣಕ್ಕೆ ಶಾಲಾ ಮಕ್ಕಳ ದುರ್ಬಳಕೆ ಸಲ್ಲದು : 'ಆಪ್' ಕಿಡಿ
ಏಪ್ರಿಲ್ 2015ರಲ್ಲಿ ನೇಪಾಳದಲ್ಲಿ ಉಂಟಾಗಿದ್ದ ಭೂಕಂಪನದಲ್ಲಿ 7.8 ತೀವ್ರತೆ ದಾಖಲಾಗಿತ್ತು. ಆ ವೇಳೆ, ಅಂದಾಜು 9,000 ಜನರು ಸಾವನಪ್ಪಿದ್ದರು ಹಾಗೂ ಸುಮಾರು 22,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 8 ಲಕ್ಷಕ್ಕೂ ಹೆಚ್ಚು ಮನೆಗಳು ಮತ್ತು ಶಾಲಾ ಕಟ್ಟಡಗಳಿಗೆ ಹಾನಿಯಾಗಿತ್ತು.