
- ಹಿಂದೂ ಬೇರೆಯಲ್ಲ, ಮುಸ್ಲೀಮರು ಬೇರೆಯಲ್ಲ
- ಸಮಾಜ ಒಡೆಯುವವರನ್ನು ಸುಮ್ಮನೆ ಬಿಡಲ್ಲ
- ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ಗುಡುಗು
"ಹಿಂದೂ-ಮುಸ್ಲೀಮರನ್ನು ಎತ್ತಿಕಟ್ಟಿ ಸಮಾಜವನ್ನು ಒಡೆಯುವವರು ಯಾರೇ ಆಗಲಿ, ಯಾವುದೇ ಪಕ್ಷದವರಾಗಲಿ ಅವರನ್ನು ಬಲಿ ಹಾಕುತ್ತೇವೆ" ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಎಚ್ಚರಿಕೆ ನೀಡಿದ್ದಾರೆ.
ಹಿಂದೂಗಳು ಮುಸ್ಲೀಮರ ಮಳಿಗೆಗಳಲ್ಲಿ ವ್ಯಾಪಾರ ನಡೆಸಬಾರದು, ಮುಸ್ಲೀಮರಿಂದ ಎನನ್ನೂ ಖರೀದಿಸಬಾರದು ಮತ್ತು ಹಿಂದೂ ಜಾತ್ರೆಗಳಲ್ಲಿ ಅವರ ಮಳಿಗೆಗಳಿಗೆ ಅವಕಾಶ ನೀಡಬಾರದು ಎಂಬ ದ್ವೇಷದ ಅಭಿಯಾನ ಪ್ರಸ್ತುತ ರಾಜ್ಯಾದ್ಯಂತ ನಡೆಯುತ್ತಿದೆ.
ಈ ಬಗ್ಗೆ ಹಲವರು ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದ ಪ್ರಗತಿಪರ ಬರಹಗಾರರು ಮತ್ತು ಚಿಂತಕರು ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಪತ್ರ ಬರೆದಿದ್ದು, ಪರಿಸ್ಥಿತಿಯನ್ನು ಶೀಘ್ರದಲ್ಲಿ ತಿಳಿಗೊಳಿಸುವಂತೆ ಮನವಿ ಮಾಡಿದ್ದಾರೆ.
ಈ ನಡುವೆ ಹಾಸನದಲ್ಲಿ ಆ ಕುರಿತು ಮಾತನಾಡಿರುವ ಮಾಜಿ ಸಚಿವ ಎಚ್ ಡಿ ರೇವಣ್ಣ, "ಬಿಜೆಪಿ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸಮಾಜದಲ್ಲಿ ಸಹೋದರರಂತಿದ್ದ ಹಿಂದೂ-ಮುಸ್ಲೀಮರನ್ನು ಎತ್ತಿಕಟ್ಟಿ ತಮ್ಮ ರಾಜಕೀಯ ಲಾಭದ ಕನಸು ಕಾಣುತ್ತಿದ್ದಾರೆ. ಆದರೆ, ಸಮಾಜವನ್ನು ಹೀಗೆ ಒಡೆಯಲು ಯಾರೇ ಪ್ರಯತ್ನಿಸದರೂ ನಾವು ಅವರನ್ನು ಬಲಿ ಹಾಕುತ್ತೇವೆ" ಎಂದು ಗುಡುಗಿದ್ದಾರೆ.
"ನಾವೆಲ್ಲಾ ಭಾರತೀಯರು. ಸಮಾಜದ ಎಲ್ಲಾ ವರ್ಗದ ಜನ ಭಾರತೀಯರಾಗಿ ಒಗ್ಗಟ್ಟಾಗಿ ಸಾಮರಸ್ಯದಿಂದ ಬದುಕಬೇಕು. ಇಲ್ಲಿ ಹಿಂದೂ ಬೇರೆಯಲ್ಲ, ಮುಸ್ಲೀಮರು ಬೇರೆಯಲ್ಲ. ಆದರೆ, ಇವರನ್ನು ಒಡೆಯುವ ದೃಷ್ಟಿಯಿಂದ ಕೇಸರಿ ಶಾಲು ಹಾಕಿ ಬಂದವರನ್ನು ನಾವು ಕೇರ್ ಮಾಡಲ್ಲ" ಎಂದಿದ್ದಾರೆ.