
- ಮೃತರ ಕುಟುಂಬಸ್ಥರು ಸಿವಿಲ್ ನ್ಯಾಯಾಲಯಗಳಲ್ಲಿ ದಾವೆ ಹೂಡಬಹುದು
- ಲಸಿಕೆಯಿಂದ ಸಂಭವಿಸುವ ಸಾವಿಗೆ ಸರ್ಕಾರವನ್ನು ಹೊಣೆ ಮಾಡುವಂತಿಲ್ಲ
ಕೋವಿಡ್ ಲಸಿಕೆಯಿಂದ ಉಂಟಾಗುವ ದುಷ್ಪರಿಣಾಮಗಳಿಗೆ ಸರ್ಕಾರವನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಉಲ್ಲೇಖಿಸಿದೆ.
ಕೋವಿಡ್ ಲಸಿಕೆಗಳನ್ನು ಖಾಸಗಿ ಕಂಪನಿಗಳು ಉತ್ಪಾದಿಸುತ್ತಿವೆ. ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ತಿಳಿದ ಬಳಿಕವೇ ಅವುಗಳನ್ನು ಬಳಸಲಾಗಿದೆ. ಅಲ್ಲದೆ, ಈ ಲಸಿಕೆಗಳನ್ನು ತೆಗೆದುಕೊಳ್ಳಲೇಬೇಕು ಎಂದು ಸಾರ್ವಜನಿಕರಿಗೆ ಯಾವುದೇ ಕಾನೂನಿನ ಒತ್ತಡವಿಲ್ಲ ಎಂದೂ ಉಲ್ಲೇಖಿಸಿದೆ.
"ಕೋವಿಡ್ ಲಸಿಕೆಯಿಂದ ಸಾವು ಸಂಭವಿಸಿದರೆ, ಮೃತರ ಕುಟುಂಬಸ್ಥರು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿ ಪರಿಹಾರ ಪಡೆಯಬಹುದು" ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕಳೆದ ವರ್ಷ ಕೋವಿಡ್ ಲಸಿಕೆ ಹಾಕಿಸಿಕೊಂಡ ಬಳಿಕ ಇಬ್ಬರು ಯುವತಿಯರು ಮೃತಪಟ್ಟಿದ್ದರು. ಮೃತರ ಪೋಷಕರು ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದ್ದರು. ಈ ಅರ್ಜಿಗೆ ಪ್ರತಿಯಾಗಿ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದ್ದು, "ಕೋವಿಡ್ ಲಸಿಕೆ ಸಂಬಂಧಿತ ಸಾವುಗಳಿಗೆ ಕೇಂದ್ರ ಸರ್ಕಾರ ಜವಾಬ್ದಾರಿಯಲ್ಲ" ಎಂದು ತಿಳಿಸಿದೆ.
"ಕಾನೂನಿನ ಪ್ರಕಾರ, ಕೋವಿಡ್ ಲಸಿಕೆಗಳ ಬಳಕೆಯಿಂದ ಸಂಭವಿಸುವ ಸಾವುಗಳಿಗೆ ಪರಿಹಾರ ನೀಡಲು ಸರ್ಕಾರಗಳನ್ನು ಹೊಣೆಗಾರರನ್ನಾಗಿಸುವುದು ಸರಿಯಲ್ಲ. ಸಂವಿಧಾನದ 32ನೇ ವಿಧಿ ಪ್ರಕಾರ ಪರಿಹಾರ ಪಡೆಯಲು ಹಾಗೂ ಕೋವಿಡ್ ಲಸಿಕೆಯಿಂದ ಸಂಭವಿಸಿದ ಸಾವುಗಳಿಗೆ ಸರ್ಕಾರವನ್ನು ಹೊಣೆಗಾರರನ್ನಾಗಿಸುವುದಕ್ಕೆ ಯಾವುದೇ ರೀತಿಯ ಸಮಂಜಸವಾದ ಕಾರಣಗಳಿಲ್ಲ" ಎಂದು ಕೇಂದ್ರ ಸರ್ಕಾರ ತನ್ನ ಅಫಿಡವಿಟ್ನಲ್ಲಿ ಉಲ್ಲೇಖಿಸಿದೆ.
"ಖಾಸಗಿ ಕಂಪನಿಗಳು ಉತ್ಪಾದಿಸಿದ ಲಸಿಕೆಗಳನ್ನು ಪ್ರಯೋಗ ಮಾಡಿಯೇ ಬಳಸಲಾಗಿದೆ. ಅವುಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ತಿಳಿದ ಬಳಿಕವೇ ಭಾರತ ಸೇರಿ ಜಗತ್ತಿನ ಹಲವಾರು ದೇಶಗಳು ಈ ಲಸಿಕೆಗಳನ್ನು ಬಳಸಿವೆ" ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಿಳಿಸಿದೆ.
"ದೇಶದಲ್ಲಿ 2022ರ ನ.19ರವರೆಗೆ 219.86 ಕೋಟಿ ಲಸಿಕಾ ಡೋಸ್ಗಳನ್ನು ನೀಡಲಾಗಿದೆ. ಆ ಪೈಕಿ, 92,114 ಪ್ರಕರಣಗಳಲ್ಲಿ ಪ್ರತಿರಕ್ಷಣೆ ನಂತರದ ಪ್ರತಿಕೂಲ ಪರಿಣಾಮಗಳು (ಎಇಎಫ್ಐ) ವರದಿಯಾಗಿವೆ" ಎಂದು ಸಚಿವಾಲಯ ಹೇಳಿದೆ.
ಈ ಸುದ್ದಿ ಓದಿದ್ದೀರಾ?: ಧಾರ್ಮಿಕ ಸ್ವಾತಂತ್ರ್ಯ ನಿರ್ದಿಷ್ಟ ಧರ್ಮಕ್ಕೆ ಪರಿವರ್ತಿಸುವ ಹಕ್ಕನ್ನು ಒಳಗೊಂಡಿಲ್ಲ: ಸುಪ್ರೀಂಗೆ ಕೇಂದ್ರ ಅಫಿಡವಿಟ್
ಅರ್ಜಿದಾರರಾದ ರಚನಾ ಗಂಗೂ ಅವರ ಮಗಳು 2021ರ ಮೇ 29ರಂದು ಕೋವಿಶೀಲ್ಡ್ನ ಮೊದಲ ಡೋಸ್ ಪಡೆದಿದ್ದರು. ಲಸಿಕೆ ಪಡೆದ 20 ದಿನಗಳಲ್ಲಿಯೇ ಅಂದರೆ, 2021ರ ಜೂನ್ 19ರಂದು ಮೃತಪಟ್ಟಿದ್ದರು.
ಮತ್ತೊಬ್ಬ ಅರ್ಜಿದಾರರಾದ ವೇಣುಗೋಪಾಲನ್ ಗೋವಿಂದನ್ ಅವರ ಮಗಳು ಎಂಎಸ್ಸಿ ವಿದ್ಯಾರ್ಥಿನಿಯಾಗಿದ್ದು, 2021ರ ಜೂನ್ 18ರಂದು ಕೋವಿಶೀಲ್ಡ್ನ ಮೊದಲ ಡೋಸ್ ಪಡೆದಿದ್ದರು. ಲಸಿಕೆ ಪಡೆದ 22 ದಿನಗಳಲ್ಲಿ ಅಂದರೆ, ಜುಲೈ 10ರಂದು ಮೃತಪಟ್ಟಿದ್ದರು.