
- ಶಿವಲಿಂಗದ ಪೂಜೆಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ
- ಎರಡನೇ ಬಾರಿ ತೀರ್ಪು ಮುಂದೂಡಿದ ನ್ಯಾಯಾಲಯ
ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪತ್ತೆಯಾಗಿದೆ ಎನ್ನಲಾದ ʻಶಿವಲಿಂಗʼದ ಪೂಜೆಗೆ ಅನುಮತಿ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿರುವ ವಾರಾಣಸಿ ತ್ವರಿತ ನ್ಯಾಯಾಲಯವು ತೀರ್ಪನ್ನು ನ.17ಕ್ಕೆ ಮುಂದೂಡಿದೆ.
ಅ.27ರಂದು ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ಮಹೇಂದ್ರ ಪಾಂಡೆ ಅವರು ಎರಡೂ ಕಡೆಯವರ ವಾದ ಆಲಿಸಿ ನ.8ಕ್ಕೆ ತೀರ್ಪು ಕಾಯ್ದಿರಿಸಿದ್ದರು. ಬಳಿಕ ನ.14ಕ್ಕೆ ತೀರ್ಪು ಕಾಯ್ದಿರಿಸಿದ್ದರು. ಆದರೆ, ಇಂದು ನ.17ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿದ್ದಾರೆ.
2022ರ ಮೇ 24ರಂದು ʻವಿಶ್ವ ವೈದಿಕ ಸನಾತನ ಸಂಘʼದ ಪ್ರಧಾನ ಕಾರ್ಯದರ್ಶಿ ಕಿರಣ್ ಸಿಂಗ್ ಅವರು, "ಜ್ಞಾನವಾಪಿ ಮಸೀದಿಗೆ ಮುಸ್ಲಿಮರ ಪ್ರವೇಶವನ್ನು ನಿರ್ಬಂಧಿಸಬೇಕು. ಆ ಸಂಕೀರ್ಣವನ್ನು ಸನಾತನ ಸಂಘಕ್ಕೆ ಹಸ್ತಾಂತರಿಸಿ, ಶಿವಲಿಂಗ ಪೂಜೆಗೆ ಅನುಮತಿ ನೀಡಬೇಕು" ಎಂದು ಕೋರಿ ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಮೇ 25 ರಂದು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎ ಕೆ ವಿಶ್ವೇಶ್ ಅವರು ಪ್ರಕರಣವನ್ನು ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶಿಸಿದ್ದರು.
"ಜ್ಞಾನವಾಪಿ ಮಸೀದಿ ನಿರ್ವಹಿಸುವ ʻಅಂಜುಮನ್ ಇಂತೇಝಾಮಿಯಾ ಮಸೀದಿ ಸಮಿತಿʼ (ಎಐಎಂಸಿ)ಯು ಕಿರಣ್ ಸಿಂಗ್ ದಾವೆ ಪ್ರಶ್ನಿಸಿ ಅರ್ಜಿ ಸಲ್ಲಿಸಿತ್ತು. ಮಸೀದಿಯನ್ನು ವಕ್ಫ್ ಆಸ್ತಿಯನ್ನಾಗಿ ನೋಂದಾಯಿಸಲಾಗಿದೆ. ಸಿವಿಲ್ ನ್ಯಾಯಾಲಯವು ಕಿರಣ್ ಸಿಂಗ್ ಸಲ್ಲಿಸಿರುವ ಅರ್ಜಿ ಆಲಿಸುವ ಅಧಿಕಾರ ಹೊಂದಿಲ್ಲ. ವಕ್ಫ್ ನ್ಯಾಯಮಂಡಳಿಗೆ ಮಾತ್ರ ಈ ವಿಷಯವನ್ನು ಆಲಿಸುವ ಅಧಿಕಾರವಿದೆ" ಎಂದು ವಾದಿಸಿತ್ತು.
ಈ ಸುದ್ದಿ ಓದಿದ್ದೀರಾ?: ಜ್ಞಾನವಾಪಿ ವಿವಾದ | ʻಶಿವಲಿಂಗʼ ರಕ್ಷಣೆಗೆ ನೀಡಿದ್ದ ಮಧ್ಯಂತರ ಆದೇಶ ವಿಸ್ತರಿಸಿದ ಸುಪ್ರೀಂ ಕೋರ್ಟ್
ಈ ಮೊಕದ್ದಮೆಯಲ್ಲಿ ವಾರಾಣಸಿ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಜ್ಞಾನವಾಪಿ ಮಸೀದಿ ನಿರ್ವಹಿಸುತ್ತಿರುವ ಅಂಜುಮನ್ ಇಂತೇಜಾಮಿಯಾ ಸಮಿತಿ ಹಾಗೂ ವಿಶ್ವನಾಥ ದೇವಸ್ಥಾನ ಟ್ರಸ್ಟ್ ಅನ್ನು ಪ್ರತಿವಾದಿಗಳನ್ನಾಗಿಸಿದೆ.
ಇದಕ್ಕೂ ಮುನ್ನ ಐವರು ಮಹಿಳೆಯರು 'ಮಸೀದಿಯ ಒಂದು ಭಾಗದಲ್ಲಿ ಹಿಂದೂ ದೇವತೆಗಳ ವಿಗ್ರಹಗಳು ಪತ್ತೆಯಾಗಿವೆ. ಅವುಗಳ ಪೂಜೆಗೆ ಅನುಮತಿ ನೀಡಬೇಕು' ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.