
- ಚಿತ್ರದುರ್ಗದಲ್ಲಿ ಭಾರತ್ ಜೋಡೋ ಬೆಂಬಲಿಸಿ ಸಾಹಿತಿಗಳು, ರೈತರು, ಕಾರ್ಮಿಕರಿಂದ ಸುದ್ದಿಗೋಷ್ಠಿ
- ಭಾರತ ಜೋಡೋಗೆ ನಾವು ಬೆಂಬಲ ನೀಡಿದ್ದೇವೆ ಹೊರತು ಕಾಂಗ್ರೆಸ್ ಪಕ್ಷಕ್ಕೆ ಅಲ್ಲ: ಪ್ರಕಾಶ್ ಕಮ್ಮರಡಿ
ದೇಶದ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಭಾವೈಕ್ಯತೆಗೆ ಧಕ್ಕೆ ಬಂದಿದ್ದು, ಇಂತಹ ಆಪತ್ತಿನ ವೇಳೆ ಕಣ್ಣು, ಕಿವಿ, ಬಾಯಿ ಮುಚ್ಚಿ ಕೂತರೆ ಮುಂದಿನ ಪೀಳಿಗೆಗೆ ನಾವು ತಪ್ಪಿತಸ್ಥರಾಗುತ್ತೇವೆ ಎಂದು ಹಿರಿಯ ಸಾಹಿತಿ ಎಸ್ ಜಿ ಸಿದ್ದರಾಮಯ್ಯ ಹೇಳಿದರು.
ಚಿತ್ರದುರ್ಗದಲ್ಲಿ ಭಾರತ್ ಜೋಡೋ ಯಾತ್ರೆ ಬೆಂಬಲಿಸಿ ಸಾಹಿತಿಗಳು, ರೈತರು ಹಾಗೂ ಕಾರ್ಮಿಕ ಮುಖಂಡರಿಂದ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
“ಭಾರತದಲ್ಲಿ ಹಿಂದೆ ನಡೆದ ರಥ ಯಾತ್ರೆಗೆ ಕೋಮುಸಂಘರ್ಷದ ಲೇಪವಿದೆ. ಭಾರತ್ ಜೋಡೋ ಯಾತ್ರೆಗೆ ಬಹುತ್ವ ಭಾರತದ ಲೇಪವಿದೆ. ಮೋದಿ ಸರ್ಕಾರ ನಿರುದ್ಯೋಗ ನಿವಾರಣೆ ಮಾಡುತ್ತೇವೆ ಎಂದು ಸುಳ್ಳು ಹೇಳಿ, ಯುವಕರಿಗೆ ಉದ್ಯೋಗ ಸೃಷ್ಟಿಯೇ ಮಾಡಲಿಲ್ಲ” ಎಂದು ಹರಿಹಾಯ್ದರು.
“ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆಯಿಂದ ಬಡವರು ಬದುಕಲು ಸಾಧ್ಯವೇ? ಕೋಮುವಾದಿ ಪಕ್ಷ ಕಿತ್ತೊಗೆಯದ ಹೊರತು ದೇಶಕ್ಕೆ ಭವಿಷ್ಯವಿಲ್ಲ. ಮನುವಾದ ತಂದು ಸಮಾಜ ಕೆಡಿಸುವ ಕುಕೃತ್ಯ ನಡೆದಿದೆ. ದೇಶ ಒಡೆಯುವ ಪಕ್ಷವನ್ನು ವಿರೋಧಿಸುವುದು ನಿಜ ದೇಶಪ್ರೇಮ” ಎಂದರು.
ಈ ಸುದ್ದಿ ಓದಿದ್ದೀರಾ? ಭಾರತ್ ಜೋಡೋ | ಮೂರೂವರೆ ಸಾವಿರ ಕಿ.ಮೀ. ಉದ್ದದ ಯಾತ್ರೆಗೆ ಹೀಗಿತ್ತು ರಾಹುಲ್ ಗಾಂಧಿ ತಯಾರಿ
“ನೂರಾರು ಕೋಟಿ ಮೋಸ ಮಾಡಿ ವಿದೇಶಕ್ಕೆ ಓಡಿ ಹೋದವರನ್ನು ಈಗಿನ ಸರ್ಕಾರಗಳು ಬೆಂಬಲಿಸುತ್ತಿವೆ. ರಾಹುಲ್ ಗಾಂಧಿ ಯುವಕರ ಮನ ಅರ್ಥ ಮಾಡಿಕೊಂಡು ಬೆಳೆಯುತ್ತಿರುವ ರಾಜಕಾರಣಿ ಎಂಬುದು ಗೊತ್ತಾಗುತ್ತಿದೆ. ಹೀಗಾಗಿ ರಾಹುಲ್ ಗಾಂಧಿಯನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ಯಾತ್ರೆ ವೇಳೆ ರಾಹುಲ್ ನಡೆದುಕೊಳ್ಳುವ ರೀತಿ ನಿಜಕ್ಕೂ ಬೆರಗು ಮೂಡಿಸಿದೆ. ʼರಾಹಿಲ್ ಈಸ್ ಡೌನ್ ಟು ಅರ್ಥ್ʼ ಎಂಬಂದು ಮನವರಿಕೆ ಆಗಿದೆ” ಎಂದರು.
“ದೇಶದಲ್ಲಿ ಜನತಂತ್ರ ವ್ಯವಸ್ಥೆ ಸರಿದಾರಿಯಲ್ಲಿ ಸಾಗುತ್ತಿಲ್ಲ. ಒಂದು ಮನೆಗೆ ಬೆಂಕಿ ಬಿದ್ದಿದೆ, ಅದನ್ನು ನಂದಿಸಬೇಕು. ಕಾಂಗ್ರೆಸ್ ಪಕ್ಷದಿಂದ ಭಾರತ್ ಜೋಡೋ ಮೂಲಕ ಬೆಂಕಿ ನಂದಿಸುವ ಕೆಲಸವಾಗುತ್ತಿದೆ. ಭಾರತ ಜೋಡೋ ಯಾತ್ರೆಗೆ ನಾವು ಬೆಂಬಲ ನೀಡಿದ್ದೇವೆ ಹೊರತು ಕಾಂಗ್ರೆಸ್ ಪಕ್ಷಕ್ಕೆ ಅಲ್ಲ” ಎಂದು ನಿವೃತ್ತ ಕೃಷಿ ವಿಜ್ಞಾನಿ ಪ್ರಕಾಶ ಕಮ್ಮರಡಿ ತಿಳಿಸಿದರು.