
- ಬಿಜೆಪಿ ಸರ್ಕಾರ ಮತದಾರರಿಗೆ ಸಂಬಂಧಿಸಿದ ಡೇಟಾವನ್ನು ಕಳ್ಳತನ ಮಾಡಿದೆ
- ಓಟರ್ ಐಡಿ ಹೆಸರಿನಲ್ಲಿ ಸೂಕ್ಷ್ಮ ಮಾಹಿತಿ ಸಂಗ್ರಹ ಕಾರ್ಯವನ್ನು ಮಾಡಿಲಾಗಿದೆ
"ಚುನಾವಣೆಗೂ ಮುನ್ನ ನಕಲಿ ಮತದಾರರ ಪಟ್ಟಿ ಪತ್ತೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಸಲುವಾಗಿ ಬಿಬಿಎಂಪಿ ಜವಾಬ್ದಾರಿ ಹೊರಿಸಿದ್ದ 'ಚಿಲುಮೆ' ಕಂಪನಿ ವಿರುದ್ಧ ಕಾಂಗ್ರೆಸ್ ಕಾನೂನು ಸಮರ ಸಾರಿದೆ.
"ಸಚಿವ ಅಶ್ವತ್ಥನಾರಾಯಣ ಅವರ ಸಹಯೋಗ ಹೊಂದಿರುವ 'ಹೊಂಬಾಳೆ' ಕಂಪನಿಯ ಒಡೆತನದಲ್ಲಿರುವ 'ಚಿಲುಮೆ' ಕಂಪನಿಗೆ ಈ ಜವಾಬ್ದಾರಿ ವಹಿಸುವ ಮೂಲಕ ಬಿಬಿಎಂಪಿ ಕಾನೂನು ಉಲ್ಲಂಘನೆ ಮಾಡಿದೆ" ಎಂದು ಆರೋಪಿಸಿ, ಅದರ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಲಿದೆ.
ಗುರುವಾರ ಮಧ್ಯಾಹ್ನ ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಲಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಮ್ ಅಹ್ಮದ್ ಮತದಾರರ ಪಟ್ಟಿ ಅಕ್ರಮ ಸಂಬಂಧ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಲಿದ್ದಾರೆ.
ಇದಕ್ಕೂ ಮುನ್ನ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಟಿ ನಡೆಸಿದ ಕಾಂಗ್ರೆಸ್ ಪ್ರಮುಖರು, ಮತದಾರರ ಪಟ್ಟಿ ವಿಚಾರದಲ್ಲಿ ಬಿಜೆಪಿಯ ಡಾಟಾ ಕಳ್ಳತನದ ಮಾಹಿತಿ ಬಿಡುಗಡೆ ಮಾಡಿದರು.
"ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮತದಾರರಿಗೆ ಸಂಬಂಧಿಸಿದ ಡೇಟಾವನ್ನು ಕಳ್ಳತನ ಮಾಡಿದೆ. ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಇದಕ್ಕೆ ಹೊಣೆಯಾಗಿದೆ" ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದರು.
'ಚಿಲುಮೆ' ಎನ್ನುವ ಖಾಸಗಿ ಸಂಸ್ಥೆ ಮತದಾರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಬಿಬಿಎಂಪಿ ಅನುಮತಿ ಪಡೆದುಕೊಂಡು ಮತದಾರರ ಸೂಕ್ಷ್ಮ ಮಾಹಿತಿ ಸಂಗ್ರಹ ಮಾಡಿದೆ. 'ಚಿಲುಮೆ' ಎನ್ಜಿಒ 'ಡಿಜಿಟಲ್ ಸಮೀಕ್ಷಾ' ಎಂಬ ಮತದಾರರ ಸಮೀಕ್ಷೆ ಆ್ಯಪ್ ಅನ್ನು ಸಹ ನಿರ್ವಹಿಸುತ್ತಿದೆ. ಚುನಾವಣಾ ಆಯೋಗದ ಮತದಾರರ ನೋಂದಣಿ ಅರ್ಜಿಗಳಾದ 'ಗರುಡ' ಮತ್ತು 'ಮತದಾರರ ಸಹಾಯವಾಣಿ'ಗಳ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ಬದಲು, ಈ ಸಂಸ್ಥೆ ತಮ್ಮ ಸಿಬ್ಬಂದಿ ಮೂಲಕ ಮತದಾರರ ಧರ್ಮ, ಜಾತಿ, ಮಾತೃ ಭಾಷೆ, ಶಿಕ್ಷಣ, ವೈವಾಹಿಕ ಸ್ಥಿತಿ ಮತ್ತು ರಾಜಕೀಯ ಕುಂದುಕೊರತೆಗಳು ಸೇರಿದಂತೆ 'ಡಿಜಿಟಲ್ ಸಮೀಕ್ಷಾʼದಲ್ಲಿ ವೈಯಕ್ತಿಕ ಮಾಹಿತಿಯನ್ನೂ ಸಂಗ್ರಹಿಸಿ ಅಪ್ಲೋಡ್ ಮಾಡಿದೆ ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? : ಹಣದುಬ್ಬರ ನಿಯಂತ್ರಿಸಲಾಗದ ಬಿಜೆಪಿ ಸರ್ಕಾರ ಜನರ ಪಾಲಿನ ಶಾಪ: ಸಿದ್ದರಾಮಯ್ಯ ಕಿಡಿ
"ಕೃಷ್ಣಪ್ಪ ರವಿಕುಮಾರ್ ಇದರ ಕಿಂಗ್ ಪಿನ್ ಆಗಿದ್ದಾರೆ. ಅವರು ಮಾಜಿ ಡಿಸಿಎಂ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಡಿಎಪಿ ಹೊಂಬಾಳೆ ಪ್ರೈ. ಲಿಮಿಟೆಡ್ ಕೂಡಾ ಇದರಲ್ಲಿ ಭಾಗಿಯಾಗಿದೆ" ಎಂದು ವಿವರಿಸಿದ ಕಾಂಗ್ರೆಸ್ ಮುಖಂಡರು, ಹೊಂಬಾಳೆ ಮಲ್ಲೇಶ್ವರಂನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದು ಅವರ ಕಾರ್ಯಚಟುವಟಿಕೆ ಬಗ್ಗೆ ಕಾಂಗ್ರೆಸ್ ನಾಯಕರು ಹಿಂದೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದರು.