
- ಹಿಜಾಬ್ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸುತ್ತೇವೆ
- ಹಿಜಾಬ್ ವಿವಾದದ ಬಳಿಕ ಶಾಲೆಯಿಂದ ಹೊರಗುಳಿದ 17,000 ಹೆಣ್ಣುಮಕ್ಕಳು
"ಬಡ ಅಲ್ವಸಂಖ್ಯಾತರ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಹುನ್ನಾರದಿಂದಲೇ ಬಿಜೆಪಿ ಹಿಜಾಬ್ ವಿವಾದವನ್ನು ಶುರುಮಾಡಿದೆ. ಇದು ಯಾರ ಒಳಿತಿಗಾಗಿಯೂ ಅಲ್ಲ" ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಹಿಜಾಬ್ ವಿವಾದದ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ ಮುಸ್ಲಿಮರ ಮೊದಲ ಜನರೇಷನ್ ಹೆಣ್ಣುಮಕ್ಕಳು ಶಿಕ್ಷಣ ಕ್ಷೇತ್ರದಿಂದ ಹೊರಹೋಗುವಂತೆ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಹಿಜಾಬ್ ವಿವಾದ ಶುರವಾದ ಬಳಿಕ ರಾಷ್ಟ್ರದಲ್ಲಿ ಅಂದಾಜು 17,000 ಹೆಣ್ಣುಮಕ್ಕಳು ಶಾಲೆಯಿಂದ ಹೊರಬಂದಿದ್ದಾರೆ. ಅವರ ತಂದೆ ತಾಯಿ ಬಹಳ ಕಷ್ಟಪಟ್ಟು ಅವರನ್ನು ಶಾಲೆಗೆ ಕಳಿಸಿದ್ದರು. ಇದು ಅಲ್ಪಸಂಖ್ಯಾತ ಹೆಣ್ಣುಮಕ್ಕಳಿಗೆ ಶಿಕ್ಷಣ ವಂಚಿಸುವ ಹುನ್ನಾರ” ಎಂದು ಕಿಡಿಕಾರಿದ್ದಾರೆ.
“ಧರ್ಮ ಮತ್ತು ಸರ್ಕಾರ ಎರಡು ಮಿಶ್ರಣ ಆಗಬಾರದು ಎಂದು ನೆಹರೂ ಅವರು ಹೇಳುತ್ತಿದ್ದರು. ಹಲವು ಧರ್ಮ, ಜಾತಿ ಬಹುತ್ವ ಇರುವ ಭಾರತದಲ್ಲಿ ಬಿಜೆಪಿಯವರು ಈ ರೀತಿಯ ರಾಜಕೀಯ ಮಾಡುತ್ತಿರುವುದು ಸರಿಯಲ್ಲ" ಎಂದು ಹೇಳಿದ್ದಾರೆ.
ಆರ್ಎಸ್ಎಸ್ ದೇಶದ ಆಗುಹೋಗುಗಳನ್ನು ನಿರ್ಣಯಿಸುತ್ತಿದೆ: ಸತೀಶ್ ಜಾರಕಿಹೊಳಿ
ಮೊಳಕಾಲ್ಮೂರಿನಲ್ಲಿ ಶಾಸಕ ಸತೀಶ್ ಜಾರಕಿಹೊಳಿ ಸುದ್ದಿಗಾರರೊಂದಿಗೆ ಮಾತನಾಡಿ, “ಹಿಜಾಬ್ ಬಗ್ಗೆ ಇಬ್ಬರು ನ್ಯಾಯಧೀಶರು ಬೇರೆ ಬೇರೆ ನಿರ್ಣಯ ಕೊಟ್ಟಿರುವುದರಿಂದ ಪ್ರತಿಕ್ರಿಯೆ ನೀಡುವುದು ಕಷ್ಟ. ಒಬ್ಬರು ಪರ ಕೊಟ್ಟಿದ್ದಾರೆ, ಇನ್ನೊಬ್ಬರು ಸಲಹೆ ನೀಡಿದ್ದಾರೆ. 11 ಅಂಶಗಳ ಬಗ್ಗೆ ಕಾನೂನು ತರಬಹುದು ಎಂದು ಹೇಳಿದ್ದಾರೆ. ಅಂತಿಮ ತೀರ್ಪು ಬಂದ ನಂತರ ವೈಯಕ್ತಿಕವಾಗಿ ಹೇಳುವುದಕ್ಕೆ ಪ್ರಯತ್ನ ಮಾಡುತ್ತೇನೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಿಜಾಬ್ ವಿವಾದ | ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ : ಶಿಕ್ಷಣ ಸಚಿವ ಬಿ ಸಿ ನಾಗೇಶ್
ಮುಸ್ಲಿಮರ ಮೀಸಲಾತಿ ಕಡಿತ ವಿಚಾರಕ್ಕೆ ಪ್ರತಿಕ್ರಿಯಿಸಿ, “ಅದರ ಬಗ್ಗೆ ಬಹಳಷ್ಟು ಚರ್ಚೆ ಆಗುತ್ತಿದೆ. ಆರ್ಎಸ್ಎಸ್, ಈ ದೇಶದ ಆಗುಹೋಗುಗಳನ್ನು ಚರ್ಚೆ ಮಾಡುತ್ತಿದೆ. ಆ ಚರ್ಚೆಯನ್ನು ಬಿಜೆಪಿಯ ಮೂಲಕ ಅನುಷ್ಟಾನ ಮಾಡಲಾಗುತ್ತಿದೆ. ಕೆಲವೊಂದು ವಿಚಾರಗಳಿಗೆ ಕಾಲ ಬಂದಾಗ ಪ್ರತಿಕ್ರಿಯೆ ನೀಡುತ್ತೇನೆ. ಯಥಾಸ್ಥಿತಿ ಮುಂದುವರಿಯಬೇಕು ಎಂದು ಕಾಂಗ್ರೆಸ್ ಪ್ರತಿಪಾದನೆ ಮಾಡುತ್ತದೆ” ಎಂದು ಹೇಳಿದರು.