
- ಕಾಂಗ್ರೆಸ್ ಪಕ್ಷದ ಅವಧಿಯಲ್ಲೇ ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ನಡೆದಿದೆ
- ಪರಿಷ್ಕರಣೆ ವೇಳೆ ಗೌಡ ಎನ್ನುವ ಹೆಸರಿರುವವರ ಹೆಸರುಗಳನ್ನೇ ಡಿಲೀಟ್ ಮಾಡಲಾಗಿದೆ
ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ನಡೆದಿರುವ ಅಕ್ರಮದ ಬಗ್ಗೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಚುನಾವಣಾ ಆಯೋಗಕ್ಕೆ ಪ್ರತ್ಯೇಕವಾಗಿ ದೂರು ನೀಡಿವೆ.
ಬುಧವಾರ ಮಧ್ಯಾಹ್ನ ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣ ಸ್ವಾಮಿ ನೇತೃತ್ವದಲ್ಲಿ ಚುನಾವಣಾ ಆಯೋಗಕ್ಕೆ ತೆರಳಿದ ರಾಜ್ಯ ಬಿಜೆಪಿ ಸದಸ್ಯರು "ಕಾಂಗ್ರೆಸ್ ಕಾಲದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಅಕ್ರಮ ಎಸಗಲಾಗಿದೆ" ಎಂದು ಆರೋಪಿಸಿ ದೂರು ದಾಖಲಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಮುಖಂಡರು, "ಚಿಲುಮೆ ಸಂಸ್ಥೆ ವಿಚಾರ ಮುಂದಿಟುಕೊಂಡು ಬಿಜೆಪಿ ವಿರುದ್ಧ ಕಾಂಗ್ರೆಸ್ ಇಲ್ಲಸಲ್ಲದ ಆರೋಪ ಮಾಡುತ್ತಿದೆ. 'ಚಿಲುಮೆ' ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆ ಜವಾಬ್ದಾರಿ ಕೊಟ್ಟಿದ್ದೇ ಕಾಂಗ್ರೆಸ್ ಪಕ್ಷ. ಅವರ ಕಾಲದಲ್ಲೇ ಈ ಅಕ್ರಮ ನಡೆದಿದೆ. ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ ದೂರು ದಾಖಲಿಸಲಾಗಿದೆ" ಎಂದು ಹೇಳಿದರು.

ಮತ್ತೊಂದು ಕಡೆ ಇದೇ ವಿಚಾರದ ಹಿನ್ನೆಲೆಯಲ್ಲಿ ಚುನಾವಣಾ ಮುಖ್ಯಸ್ಥರಿಗೆ ಬಗ್ಗೆ ಜೆಡಿಎಸ್ ಪಕ್ಷವೂ ದೂರು ದಾಖಲಿಸಿತು. ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ನೇತೃತ್ವದಲ್ಲಿ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿತು. ಈ ವೇಳೆ ಮಾತನಾಡಿದ ಪರಿಷತ್ ಸದಸ್ಯ ಟಿ ಎ ಶರವಣ, ಬಿಜೆಪಿ ಚುನಾವಣೆ ಸೋಲಿನ ಭಯದಿಂದ ವಿಪಕ್ಷಗಳು ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಮತದಾರರ ಹೆಸರುನ್ನು ತೆಗೆಸಿಹಾಕುತ್ತಿದೆ. ಬಿಜೆಪಿಯ ಕೆಲ ಮಂತ್ರಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಇಂತಹ ಹಲವು ಅಕ್ರಮಗಳು ಈ ವಿಚಾರದಲ್ಲಿ ನಡೆದಿದೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿ ಆಯೋಗ ತನಿಖೆ ನಡೆಸಲು ಆಗ್ರಹಿಸಿ ದೂರು ದಾಖಲಿಸಿದ್ದಾಗಿ ತಿಳಿಸಿದರು.
ಇದಕ್ಕೂ ಮುನ್ನ ಜೆಡಿಎಸ್ ಪಕ್ಷದ ಸದಸ್ಯರು ನಗರದ ಸ್ವತಂತ್ರ ಉದ್ಯಾನವನದಲ್ಲಿ ವೋಟರ್ ಐಡಿ ಅಕ್ರಮ ಖಂಡಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ, "ವೋಟರ್ ಲಿಸ್ಟ್ನಲ್ಲಿ ಗೌಡ ಎಂದು ಹೆಸರಿರುವವರ ಹೆಸರುಗಳನ್ನು ಡಿಲೀಟ್ ಮಾಡಲಾಗುತ್ತಿದೆ. ಜೆಡಿಎಸ್ ಕಡೆ ಜನ ಒಲವು ತೋರುತ್ತಿರುವುದು ಬಿಜೆಪಿ ಹಾಗೂ ಕಾಂಗ್ರೆಸ್ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ, ಹೀಗಾಗಿ ವೊಟರ್ ಅಕ್ರಮ ನಡೆಸಲಾಗಿದೆ" ಎಂದರು.

ಈ ಸುದ್ದಿ ಓದಿದ್ದೀರಾ? : ಸರ್ಕಾರಕ್ಕೆ ಚುನಾವಣಾ ಅಕ್ರಮದ ಬಗ್ಗೆ ತನಿಖೆಗೆ ಆದೇಶಿಸುವ ಅಧಿಕಾರವಿಲ್ಲ: ಚುನಾವಣಾ ಆಯೋಗ
"ಮತದಾರರ ಪಟ್ಟಿಯಲ್ಲಿನ ಅಕ್ರಮಗಳನ್ನು ಸರಿ ಮಾಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ. ರಿಟರ್ನಿಂಗ್ ಆಫೀಸರ್ ಬಳಿ ಇರುವ ಪಟ್ಟಿ ಹಾಗೂ ನಮಗೆ ಕೊಡುವ ಮತದಾರರ ಪಟ್ಟಿ ಎರಡೂ ಒಂದೇ ಆಗಿರುವಂತೆ ಆಯೋಗ ಮಾಡಿಕೊಡಬೇಕು" ಎಂದು ಅವರು ಒತ್ತಾಯಿಸಿದರು.