
- ನವೆಂಬರ್ 29 ರಂದು ನವದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ
- ಗಡಿ ವಿಚಾರದ ಬಗ್ಗೆ ಕಾನೂನು ಸಮರಕ್ಕೆ ರಾಜ್ಯ ಸರ್ಕಾರ ಸಿದ್ಧವಿದೆ
ಮಹಾರಾಷ್ಟ್ರದೊಂದಿಗಿನ ಗಡಿ ವಿವಾದ ಹಿನ್ನೆಲೆಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಕೇಂದ್ರ ಸಚಿವರನ್ನು ಭೇಟಿ ಮಾಡಲು ನವೆಂಬರ್ 29 ರಂದು ನವದೆಹಲಿಗೆ ತೆರಳಲಿದ್ದು, ಹಿರಿಯ ವಕೀಲರಾದ ಮುಕುಲ್ ರೋಹಟಗಿಯವರನ್ನು ಭೇಟಿಯಾಗಿಯಾಗುತ್ತೇನೆ" ಎಂದು ತಿಳಿಸಿದರು.
"ಇದನ್ನು ಹೊರತುಪಡಿಸಿದಂತೆ ಕೇಂದ್ರ ಕೈಗಾರಿಕಾ ಸಚಿವರು, ಜಲಸಂಪನ್ಮೂಲ ಸಚಿವರನ್ನೂ ಸಹ ಭೇಟಿಯಾಗಿ ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಲಾಗುವುದು" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

"ಮಹಾರಾಷ್ಟ್ರದೊಂದಿಗಿನ ಗಡಿ ವಿವಾದವಕ್ಕೆ ಸಂಬಂಧಪಟ್ಟಂತೆ ಇದೇ 30 ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಇದೆ. ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಮೂರ್ತಿಗಳಾದ ಶಿವರಾಜ ಪಾಟೀಲ್ ಅವರನ್ನು ನೇಮಿಸಲಾಗಿದ್ದು, ಅವರೊಂದಿಗೆ ಸಭೆ ನಡೆಸಲಾಗಿದೆ. ನವೆಂಬರ್ 30 ರಂದು ಗಡಿ ವಿಚಾರದ ಬಗ್ಗೆ ಕಾನೂನು ಸಮರಕ್ಕೆ ರಾಜ್ಯ ಸಿದ್ಧವಿದ್ದು, ರಾಜ್ಯದ ನಿಲುವು, ಕಾನೂನುಗಳ ಬಗ್ಗೆ ವಾದ ಮಂಡಿಸಲಾಗುವುದು" ಎಂದು ಬೊಮ್ಮಾಯಿ ಹೇಳಿದರು.
ಈ ಸುದ್ದಿ ಓದಿದ್ದೀರಾ? : ಜೆ ಪಿ ನಡ್ಡಾರನ್ನು ಭೇಟಿ ಮಾಡಲು ದೆಹಲಿಗೆ ಹೊರಟ ಸಿಎಂ ಬೊಮ್ಮಾಯಿ; ಸಂಪುಟ ವಿಸ್ತರಣೆ ಚರ್ಚೆ ಸಾಧ್ಯತೆ
ಇದೇ ವೇಳೆ ಮಹಾರಾಷ್ಟ್ರದ ಗಡಿಭಾಗದ ಗ್ರಾಮದ ಜನರು, ಕರ್ನಾಟಕಕ್ಕೆ ಸೇರುವುದಾಗಿ ಮಾಡಿರುವ ಮನವಿ ಸಂಬಂಧ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, "ಸದ್ಯಕ್ಕೆ ಈ ವಿಷಯ ನ್ಯಾಯಾಲಯದಲ್ಲಿರುವುದರಿಂದ ಈ ಕುರಿತು ಬಹಿರಂಗ ಚರ್ಚೆ ಸಲ್ಲದು" ಎಂದರು.
ಗಡಿ ವಿಚಾರ ಸಂಬಂಧ ಪ್ರತಿಪಕ್ಷಗಳ ಸಹಕಾರವನ್ನು ಕೊಂಡಾಡಿದ ಮುಖ್ಯಮಂತ್ರಿಗಳು "ರಾಜ್ಯ ಗಡಿ, ನೆಲ, ಜಲಗಳ ವಿಚಾರದಲ್ಲಿ ಪ್ರತಿಪಕ್ಷಗಳು ಉತ್ತಮ ಸಹಕಾರ ನೀಡುತ್ತಿವೆ" ಎಂದರು. ಬಳಿಕ ಮೈಸೂರಿನಿಂದ ನಂಜನಗೂಡಿಗೆ ತೆರಳಿದ ಮುಖ್ಯಮಂತ್ರಿಗಳು ಅಲ್ಲಿ ನಂಜುಡೇಶ್ವರನ ದರ್ಶನ ಪಡೆದರು.