
- ವಾರದ ಕಾಲಾವಕಾಶ ಸಿಕ್ಕರೆ ಸಾಕು ರಸ್ತೆಗುಂಡಿ ಮುಚ್ಚಿಸುತ್ತೇವೆ
- ಮಳೆಯಿಂದಾಗಿ ಗುಂಡಿ ಮುಚ್ಚುವ ಕಾರ್ಯ ವಿಳಂಬವಾಗುತ್ತಿದೆ
ಬೆಂಗಳೂರು ನಗರ ಸೇರಿದಂತೆ ರಾಜ್ಯದಾದ್ಯಂತ ರಸ್ತೆಗುಂಡಿಗಳನ್ನು ಮುಚ್ಚುವ ಸಲುವಾಗಿ ಆರು ಸಾವಿರ ಕೋಟಿ ರೂ.ಗಳ ಅನುದಾನವನ್ನು ಸರ್ಕಾರ ನೀಡಿದೆ. ಆದರೆ ಕೆಲಸ ಮಾತ್ರ ಸಾಗುತ್ತಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್, ರಸ್ತೆಗುಂಡಿ ಮುಚ್ಚಲು ಸರ್ಕಾರ ಕೋಟಿಗಳ ಲೆಕ್ಕದಲ್ಲಿ ಅನುದಾನ ನೀಡಿದೆ. ಆದರೆ ಅಕಾಲಿಕ ಮಳೆಯಿಂದಾಗಿ ಈ ಕಾರ್ಯದ ಸಮರ್ಪಕ ಜಾರಿ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ರಸ್ತೆಗುಂಡಿಗಳ ಸಮಸ್ಯೆ ನಮಗೂ ಅರ್ಥವಾಗಿದೆ. ಆದರೆ ನಿರಂತರ ಮಳೆಯೂ ಆಗುತ್ತಿದೆ. ಮಳೆಯಿಂದ ಟಾರ್ ಹಾಕಿದರೂ ನೆನೆದು ಕಿತ್ತು ಹೋಗುತ್ತಿದೆ. ಹೀಗಾಗಿ ಟಾರ್ ಹಾಕಲು ಮಳೆ ಬಿಡುವು ಕೊಡುತ್ತಿಲ್ಲ. ಅದರ ಬದಲು ಟೆಂಪ್ರವರಿ ಮಿಕ್ಸ್ ಹಾಕುವ ಪ್ರಯತ್ನ ಮಾಡಿದ್ದೇವೆ, ಅದೂ ಹಾಕಿದ್ರೂ ಕಿತ್ತು ಬರುತ್ತಿದೆ. ಮಳೆ ವಾರ ಬಿಡುವು ಕೊಟ್ರೆ ಸಾಕು ಎಲ್ಲಾ ಕಡೆ ಟಾರ್ ಹಾಕ್ತೇವೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಕಮಿಷನರ್ ಜೊತೆ ಮುಖ್ಯಮಂತ್ರಿಗಳು ಹಾಗೂ ನಾನು ಚರ್ಚಿಸಿದ್ದೇನೆ ಎಂದು ಅಶೋಕ್ ಹೇಳಿದರು.
ಈ ಸುದ್ದಿ ಓದಿದ್ದೀರಾ? : ಬೆಂಗಳೂರು | ರಾಜಕಾಲುವೆ ಒತ್ತುವರಿ: 40 ಹೊಸ ಪ್ರಕರಣಗಳನ್ನು ಗುರುತಿಸಿದ ಬಿಬಿಎಂಪಿ
ಮುಲಾಜಿಲ್ಲದೆ ಒತ್ತುವರಿ ತೆರವು
ಇದೇ ವೇಳೆ ನಗರದಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಮಾತನಾಡಿದ ಕಂದಾಯ ಸಚಿವರು, ಒತ್ತುವರಿ ತೆರವುವನ್ನು ಮುಲಾಜಿಲ್ಲದೆ ಮಾಡುತ್ತೇವೆ. ಬಡವ, ಶ್ರೀಮಂತ ಯಾರದ್ದೇ ಆದರೂ ಒತ್ತುವರಿ ಬಿಡಲ್ಲ. ಈ ವಿಚಾರದಲ್ಲಿ ಯಾರೇ ಆದರೂ ಕ್ರಮ ಕೈಗೊಳ್ಳಿ ಎಂದು ಬಿಬಿಎಂಪಿ ಕಮೀಷನರ್ ಗೆ ಸೂಚಿಸಿದ್ದೇನೆ ಎಂದು ಅಶೋಕ್ ತಿಳಿಸಿದರು.