
- 60ನೇ 'ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ' ಸಭೆ
- 11 ಯೋಜನೆಗಳಿಗೆ ಅನುಮತಿ; 41,448 ಉದ್ಯೋಗ ಸೃಷ್ಟಿ ನಿರೀಕ್ಷೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 60ನೇ ಸಭೆಯಲ್ಲಿ ಬರೋಬ್ಬರಿ ₹1,74,381.44 ಕೋಟಿ ಮೌಲ್ಯದ 11 ಯೋಜನೆಗಳಿಗೆ ಒಪ್ಪಿಗೆ ದೊರೆತಿದೆ.
ಶನಿವಾರ ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ರಾಜ್ಯದಲ್ಲಿ ಭಾರಿ ಮೊತ್ತದ ಬಂಡವಾಳ ಹೂಡಿಕೆ ಪ್ರಸ್ತಾವನೆಗೆ ಅನುಮೋದನೆ ನೀಡಿರುವುದು ಇದೇ ಮೊದಲು ಎನ್ನಲಾಗಿದೆ.
ಗ್ರೀನ್ ಹೈಡ್ರೋಜನ್ ಉತ್ಪಾದಕ ಸಂಸ್ಥೆ ‘ಆಕ್ಮೆ ಕ್ಲೀನ್ ಟೆಕ್ ಸೆಲ್ಯೂಷನ್’ ಸೇರಿದಂತೆ 8 ಹೊಸ ಕೈಗಾರಿಕಾ ಪ್ರಸ್ತಾವನೆಗಳು ಹಾಗೂ 3 ಹೆಚ್ಚುವರಿ ಹೂಡಿಕೆ ಯೋಜನೆಗಳ ಪ್ರಸ್ತಾವನೆಗೆ ಅನುಮೋದನೆ ದೊರೆತಿದೆ. ಈ ಯೋಜನೆಗಳಿಂದ ರಾಜ್ಯದಲ್ಲಿ 41,448 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ವಿಶ್ಲೇಷಣೆ ಮಾಡಲಾಗುತ್ತಿದೆ.
ಯೋಜನೆಗಳಿಗೆ ಒಪ್ಪಿಗೆ ನೀಡಿದ ನಂತರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಹಸಿರು ಇಂಧನವೇ ಭವಿಷ್ಯ. 2026ರಿಂದ ಗ್ರೀನ್ ಹೈಡ್ರೋಜನ್ ರಫ್ತು ಆರಂಭವಾಗಲಿದ್ದು, ದೇಶದ ಒಟ್ಟು ಗ್ರೀನ್ ಹೈಡ್ರೋಜನ್ ರಫ್ತಿನಲ್ಲಿ ರಾಜ್ಯದ ಪಾಲು ಅಧಿಕವಾಗಿರಲಿದೆ" ಎಂದರು.
"ರಾಜ್ಯದಲ್ಲಿ ಗ್ರೀನ್ ಹೈಡ್ರೋಜನ್ ಉತ್ಪಾದನೆಗೆ ಮುಂದಾಗಿರುವ ಆಕ್ಮೆ ಕ್ಲೀನ್ ಟೆಕ್ ಸಲ್ಯೂಷನ್ ಪ್ರೈ. ಲಿ. ಜೆಎಸ್ಡಬ್ಲ್ಯು ಗ್ರೀನ್ ಹ್ರೈಡ್ರೋಜನ್ ಲಿ. ಅವದಾ ವೆಂಚರ್ಸ್ ಪ್ರೈ. ಲಿ. ಹಾಗೂ ರಿನ್ಯೂ ಇ-ಫ್ಯೂಯೆಲ್ಸ್ ಪ್ರೈವೇಟ್ ಲಿಮಿಟೆಡ್ನ ಪ್ರಸ್ತಾವನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಮೊದಲೇ ಇಷ್ಟು ದೊಡ್ಡ ಮೊತ್ತದ ಬಂಡವಾಳ ರಾಜ್ಯದಲ್ಲಿ ಹೂಡಿಕೆ ಆಗುತ್ತಿರುವುದು ವಿಶೇಷ. ಇದು ನಮ್ಮ ಉತ್ಸಾಹ ಮತ್ತು ನಿರೀಕ್ಷೆಯನ್ನು ಹೆಚ್ಚಿಸಿದೆ" ಎಂದು ಬೊಮ್ಮಾಯಿ ಹೇಳಿದರು.
"ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ₹1,74,381.44 ಕೋಟಿ ಮೊತ್ತದ 11 ಯೋಜನೆಗಳ ಬೃಹತ್ ಬಂಡವಾಳ ಹೂಡಿಕೆ ಪ್ರಸ್ತಾವನೆಗೆ, ಇಂದು ನಡೆದ 60ನೇ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಈ ಬೃಹತ್ ಯೋಜನೆಗಳ ಅನುಷ್ಠಾನದಿಂದ ರಾಜ್ಯದಲ್ಲಿ ಒಟ್ಟು 41,448 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
— CM of Karnataka (@CMofKarnataka) October 22, 2022
1/2
"ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕ ಮಂಚೂಣಿಯಲ್ಲಿದೆ. ರಾಜ್ಯ ಸರ್ಕಾರವು ಗ್ರೀನ್ ಹೈಡ್ರೋಜನ್ ನೀತಿ ರೂಪಿಸುತ್ತಿದೆ. ಕಬ್ಬು ಬೆಳೆಯುವ ರಾಜ್ಯಗಳ ಪೈಕಿ ದೇಶದಲ್ಲೇ 3ನೇ ಸ್ಥಾನದಲ್ಲಿರುವ ಕರ್ನಾಟಕ, ದೇಶದಲ್ಲೇ ಅತಿ ಹೆಚ್ಚು ಎಥನಾಲ್ ಉತ್ಪಾದಿಸುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಪೂರಕವಾಗಿ ಇಂದಿನ ಸಭೆಯಲ್ಲಿ ಹಸಿರು ಇಂಧನ ಉತ್ಪಾದನಾ ವಲಯದ ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ ದೊರೆತಿರುವುದು ಅತ್ಯಂತ ಸಂತಸದ ವಿಷಯ" ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕೃಷಿ ಸಚಿವ ಬಿ ಸಿ ಪಾಟೀಲ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಹಾಗೂ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಇದ್ದರು.
ಈ ಸುದ್ದಿ ಓದಿದ್ದೀರಾ? ಭಾರತ್ ಜೋಡೋ ಯಾತ್ರೆ | ನಮ್ಮ ಕುಟುಂಬಕ್ಕೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧ ಇದೆ: ರಾಹುಲ್ ಗಾಂಧಿ
ಅನುಮೋದನೆ ಪಡೆದ ಪ್ರಮುಖ ಯೋಜನೆಗಳು
ಆಕ್ಮೆ ಕ್ಲೀನ್ ಟೆಕ್ ಸಲ್ಯೂಷನ್ ಪ್ರೈ. ಲಿ. ಹೂಡಿಕೆ: ₹51, 865 ಕೋಟಿ
ಅವದಾ ವೆಂಚರ್ಸ್ ಪ್ರೈ. ಲಿ. ಹೂಡಿಕೆ: ₹45000 ಕೋಟಿ
ಜೆಎಸ್ಡಬ್ಲ್ಯು ಗ್ರೀನ್ ಹ್ರೈಡ್ರೋಜನ್ ಲಿ. ಹೂಡಿಕೆ: ₹40148 ಕೋಟಿ
ರಿನ್ಯೂ ಇ-ಫ್ಯೂಯೆಲ್ಸ್ ಪ್ರೈವೇಟ್ ಲಿಮಿಟೆಡ್, ಹೂಡಿಕೆ: ₹20,000 ಕೋಟಿ
ಏಟ್ರಿಯಾ ಪವರ್ ಹೋಲ್ಡಿಂಗ್ಸ್ ಹೂಡಿಕೆ: ₹9454 ಕೋಟಿ
ಕಿರ್ಲೋಸ್ಕರ್ ಫೆರೋಸ್ ಇಂಡಸ್ಟ್ರೀಸ್ ಲಿ. ಹೂಡಿಕೆ: ₹3025 ಕೋಟಿ
ಜೆಎಸ್ಡಬ್ಲ್ಯು ನಿಯೋ ಎನರ್ಜಿ ಲಿ. ಹೂಡಿಕೆ: ₹2579 ಕೋಟಿ
ಕಾಂಟಿನೆಂಟಲ್ ಆಟೋಮೇಟಿವ್ ಕಾಂಪೊನೆಂಟ್ಸ್ ಹೂಡಿಕೆ: ₹920 ಕೋಟಿ
ಹೆಚ್ಚುವರಿ ಹೂಡಿಕೆ ಪ್ರಸ್ತಾವನೆಗಳು
ಟೊಯೋಟ ಕಿರ್ಲೋಸ್ಕರ್ ಮೋಟಾರ್ ಪ್ರೈ ಲಿ. ಹೂಡಿಕೆ: ₹511 ಕೋಟಿ
ಜಿ.ಎಂ ಶುಗರ್ ಮತ್ತು ಎನರ್ಜಿ ಲಿ. ಹೂಡಿಕೆ: ₹49.44 ಕೋಟಿ
ರಿಸೋರ್ಸ್ಸ್ ಪೆಲ್ಲೆಟ್ಸ್ ಕಾನ್ಸನ್ಟ್ರೇಟ್ಸ್ ಪ್ರೈ. ಲಿ. ಹೂಡಿಕೆ: ₹830 ಕೋಟಿ