
- ಸಂಚಾರ ನಿಯಮ ಉಲ್ಲಂಘಿಸಿದರೇ ಸಾರಿಗೆ ಸಚಿವ ಶ್ರೀರಾಮುಲು?
- ಸಂಚಾರ ನಿಯಮ ಉಲ್ಲಂಘನೆ ಶಿಕ್ಷಾರ್ಹ ಅಪರಾಧ ಎಂದ ಸಾರಿಗೆ ಅಧಿಕಾರಿ
ಸಂಚಾರ ನಿಯಮ ಪಾಲಿಸಬೇಕಾದದ್ದು ಎಲ್ಲರ ಕರ್ತವ್ಯ. ಕಾನೂನು ಪಾಲನೆ ಸಾಮಾನ್ಯ ನಾಗರಿಕರಿಗೂ, ಜನನಾಯಕರಿಗೂ ಒಂದೇ. ಆದರೆ, ಕಾನೂನನ್ನು ರೂಪಿಸಿ ಪಾಲನೆ ಮಾಡಿಸಬೇಕಾದವರೇ ಆ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದರೆ ಅದಕ್ಕಿಂತ ದೊಡ್ಡ ಪ್ರಮಾದ ಇನ್ನೇನು ಇರಲು ಸಾಧ್ಯ?
ಹೌದು. ಇಂತಹದ್ದೊಂದು ಪ್ರಮಾದ ಸಾರಿಗೆ ಸಚಿವ ಶ್ರೀರಾಮುಲುರಿಂದ ಭಾನುವಾರ ನಡೆದಿದೆ. ಬಳ್ಳಾರಿಯಲ್ಲಿ ನಡೆದ ಬಿಜೆಪಿ ಎಸ್ಟಿ ಸಮಾವೇಶದ ಬಳಿಕ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಲು ಮುಂದಾದ ಸಚಿವ ಶ್ರೀರಾಮುಲು, ರಸ್ತೆ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.
ನವಶಕ್ತಿ ಸಮಾವೇಶದ ಬಳಿಕ ಸಚಿವ ಶ್ರೀರಾಮುಲು ಸಮಾವೇಶ ನಡೆದ ಮೈದಾನದಿಂದ ಹೊರತೆರಳುವ ವೇಳೆ ತಮಗೆದುರಾದ ಅಭಿಮಾನಿ ವರ್ಗಕ್ಕೆ ಅಭಿನಂದನೆ ಸಲ್ಲಿಸಲು ಮುಂದಾದರು. ಇದಕ್ಕಾಗಿ ತಮ್ಮ ಸರ್ಕಾರಿ ವಾಹನದ ಟಾಪ್ ಏರಿದ ಶ್ರೀರಾಮುಲು, ಅದರ ಮೇಲೆ ನಿಂತು ಜನಸಮೂಹದತ್ತ ಕೈ ಬೀಸಿದರು.
ಸಮಾವೇಶದ ನಂತರ ಅಭಿಮಾನಿಗಳು, ಕಾರ್ಯಕರ್ತರ ಒತ್ತಾಸೆಯಂತೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಆಗಮಿಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹಾದು ಬರುವ ವೇಳೆ ನನ್ನ ಸಹೋದರ, ಸಹೋದರಿಯರು, ಹಿರಿಯರು, ಸೇರಿದಂತೆ ಪ್ರತಿಯೊಬ್ಬರೂ ತೋರಿದ ಪ್ರೀತಿ, ಮಮತೆ, ವಾತ್ಸಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. pic.twitter.com/tXklosjcNk
— B Sriramulu (@sriramulubjp) November 20, 2022
ಹೀಗೆ ಒಂದಷ್ಟು ದೂರು ಚಲಿಸುತ್ತಿದ್ದ ವಾಹನದ ಮೇಲೆ ನಿಂತಿದ್ದ ಶ್ರೀರಾಮುಲು ಜನರಿಗೆ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ರಾಮುಲು ಅವರ ಭದ್ರತಾ ಸಿಬ್ಬಂದಿ ಶ್ರೀರಾಮುಲು ಅವರ ಸುರಕ್ಷತೆಗಾಗಿ ಪಟ್ಟಪಾಡು ನೋಡುಗರ ಕಣ್ಣಿಗೆ ಕಟ್ಟಿದಂತೆ ಕಾಣುತ್ತಿತ್ತು. ಈ ರೀತಿ ಸಮುದಾಯಕ್ಕೆ ಅಭಿನಂದನೆ ಸಲ್ಲಿಸುವ ಭರದಲ್ಲಿ ಸಚಿವ ಶ್ರೀರಾಮುಲು ಏಕಕಾಲದಲ್ಲೇ ಎರಡು ನಿಯಮ ಗಾಳಿಗೆ ತೂರಿದರು.
ನಿಯಮ 1: ಸರ್ಕಾರಿ ವಾಹನ ದುರ್ಬಳಕೆ
ಸಚಿವ ಶ್ರೀರಾಮುಲು ಬಿಜೆಪಿ ಪಕ್ಷದ ಕಾರ್ಯಕ್ರಮಕ್ಕೆ ಸರ್ಕಾರಿ ವಾಹನ ಬಳಸಿಕೊಂಡು ಕಾನೂನು ಉಲ್ಲಂಘನೆ ಮಾಡಿದರು. ಇಲಾಖೆ ನಿಯಮಗಳ ಪ್ರಕಾರ ಸರ್ಕಾರಿ ಕಾರ್ಯಕ್ರಮ ಹೊರತುಪಡಿಸಿದ ಇತರ ಕಾರ್ಯಕ್ರಮಗಳಿಗೆ ಸರ್ಕಾರಿ ವಾಹನ ಬಳಕೆ ನಿಷಿದ್ಧ.
ನಿಯಮ 2: ಚಲಿಸುವ ವಾಹನದ ಮೇಲ್ಭಾಗದಲ್ಲಿ ಪ್ರಯಾಣ
ಸರ್ಕಾರಿ ವಾಹನವನ್ನು ಪ್ರಚಾರ ಕಾರ್ಯಕ್ಕೆ ಬಳಸಿಕೊಂಡಿದ್ದೂ ಅಲ್ಲದೆ, ಅದರ ಮೇಲೇರಿ ಪ್ರಯಾಣ ಮಾಡಿದ್ದು ಸಚಿವ ಶ್ರೀರಾಮುಲು ಮಾಡಿದ ಎರಡನೇ ಪ್ರಮಾದ.
ಸಾರಿಗೆ ನಿಯಮದ ಪ್ರಕಾರ, ಮೇಲ್ಮೈ ಮುಚ್ಚಿದ ವಾಹನ ನಿಧಾನಗತಿಯಲ್ಲಿ ಸಾಗುತ್ತಿರುವಾಗಲೂ ಅದರ ಮೇಲೆ ನಿಂತು, ಕೂತು ಪ್ರಯಾಣ ಮಾಡುವುದು ಶಿಕ್ಷಾರ್ಹ ಅಪರಾಧ. ಹೊಸ ಮಾದರಿಯ ಸನ್ ರೂಫ್ (ಓಪನ್ ರೂಫ್/ಟಾಫ್) ಒಳಗೊಂಡ ವಾಹನಗಳಿಗೆ ಈ ನಿಯಮದಲ್ಲಿ ಕೊಂಚ ರಿಯಾಯ್ತಿ ನೀಡಲಾಗಿದ್ದು, ಸೊಂಟ ಮಟ್ಟಕ್ಕೆ ನಿಂತು ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಪ್ರಚಾರ ಕಾರ್ಯಕ್ಕೆ ಎಂದಾದರೆ ಅಂತಹ ವಾಹನಗಳು ಸಾರಿಗೆ ಹಾಗೂ ಪೊಲೀಸ್ ಇಲಾಖೆಗಳಿಂದ ಅನುಮತಿ ಪಡೆಯುವುದು ಕಡ್ಡಾಯ.
ಹೀಗೆ ಸಚಿವ ಶ್ರೀರಾಮುಲು ಈಗ ತಮ್ಮದೇ ಇಲಾಖೆಯ ನಿಯಮ ಮುರಿದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಇದೇ ವಿಚಾರಕ್ಕೆ ಈ ದಿನ.ಕಾಮ್ಗೆ ಪ್ರತಿಕ್ರಿಯೆ ನೀಡಿದ ಹೆಸರು ಹೇಳಲು ಇಚ್ಛಿಸದ ಸಾರಿಗೆ ಇಲಾಖೆ ಹಿರಿಯ ಅಧಿಕಾರಿಯೋರ್ವರು, “ಸಚಿವರ ಇಂದಿನ ಪ್ರಚಾರ ಪ್ರಕ್ರಿಯೆಯು, ಸಾರಿಗೆ ನಿಯಮದ ಸ್ಪಷ್ಟ ಉಲ್ಲಂಘನೆ ಮತ್ತು ಶಿಕ್ಷಾರ್ಹ ಅಪರಾಧ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? : ಕಾರಿನ ಮೇಲೆ ಪವನ್ ಕಲ್ಯಾಣ್ | ಮೋಟಾರು ವಾಹನ ಕಾಯಿದೆಯಡಿ ಪ್ರಕರಣ ದಾಖಲು
ಕೆಲದಿನಗಳ ಹಿಂದೆ ನಟ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಗುಂಟೂರಿನಲ್ಲಿ ಪಕ್ಷದ ಪ್ರಚಾರದ ವೇಳೆ ಕಾರಿನ ಮೇಲೆ ಕುಳಿತು ಪ್ರಚಾರ ನಡೆಸಿದ್ದರು. ಅವರ ಈ ಓಡಾಟವನ್ನು ಗಮನಿಸಿದ್ದ ಸಾರಿಗೆ ಇಲಾಖೆ ಐಪಿಸಿ ಸೆಕ್ಷನ್ 336, 279 ಹಾಗೂ ಮೋಟಾರು ವಾಹನ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಈಗ ಇದೇ ಮಾದರಿಯಲ್ಲಿ ಸಚಿವ ಶ್ರೀರಾಮುಲು ಸರ್ಕಾರಿ ವಾಹನದ ಮೇಲೆ ನಿಂತು ಪ್ರಯಾಣ ಮಾಡಿ ನಿಯಮ ಮೀರಿ ನಿಂತಿದ್ದಾರೆ. ತಮ್ಮದೇ ಸಚಿವರ ಕಾನೂನು ಉಲ್ಲಂಘನೆ ವಿಚಾರದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳ ಯಾವ ರೀತಿ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಸದ್ಯದ ಪ್ರಶ್ನೆ.