ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡಜನರ ಪರವಾಗಿವೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆ ಮಾಡಲು ರಾಜ್ಯದ ರೈತರು ಬೆಳೆದಿರುವ ಭತ್ತವನ್ನು ಖರೀದಿಸಬೇಕು. ಆಗ ಹೊರ ರಾಜ್ಯಗಳ ಮೇಲಿನ ಅವಲಂಬನೆ ತಪ್ಪುತ್ತದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಾಧ್ಯಕ್ಷ ಕುರುವ ಗಣೇಶ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ” ನರಗುಂದ-ನವಲಗುಂದ ಹೋರಾಟದಲ್ಲಿ ಹುತಾತ್ಮಕರಾದ ರೈತರ ನೆನಪಿನಲ್ಲಿ ಜುಲೈ 21ರಂದು 43ನೇ ವರ್ಷದ ಹುತಾತ್ಮರ ದಿನಾಚರಣೆ ಹಾಗೂ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ರೈತರ ಹಕ್ಕತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರ ಹಕ್ಕೊತ್ತಾಯ ಸಲ್ಲಿಸಲಾಗುತ್ತದೆ” ಎಂದು ಹೇಳಿದ್ದಾರೆ.
“ಅನ್ನಭಾಗ್ಯ ಯೋಜನೆಗೆ ಹೊರ ರಾಜ್ಯದಿಂದ ಅಕ್ಕಿ ಖರೀದಿ ಮಾಡುವುದರ ಬದಲುಮ ರಾಜ್ಯದ ರೈತರು ಬೆಳೆದ ಅಕ್ಕಿ ಖರೀದಿಸಬೇಕು. ಅದೂ ಸಾಕಾಗದಿದ್ದರೆ, ರಾಗಿ,ಜೋಳ ಖರೀದಿಸಿ ವಿತರಿಸಬೇಕು. ಇದರಿಂದ ರಾಜ್ಯದ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ” ಎಂದು ತಿಳಿಸಿದ್ದಾರೆ.
“ರೈತರ ಉತ್ಪಾದನಾ ವೆಚ್ಚದ ಜೊತೆಗೆ ಡಾ. ಸ್ವಾಮಿನಾಥನ್ ವರದಿಯಂತೆ ಶೇ.50 ರಷ್ಟು ಲಾಭಾಂಶ ಸೇರಿಸಿ ಬೆಲೆ ನಿಗದಿ ಮಾಡಬೇಕು. ಟನ್ ಕಬ್ಬಿಗೆ ಕನಿಷ್ಠ 4,500 ರೂ ಬೆಲೆ ನಿಗಧಿ ಮಾಡಬೇಕು. ಮಹದಾಯಿ ಕಳಸ ಬಂಡೂರಿ ಯೋಜನೆಯನ್ನು ಶೀಘ್ರದಲ್ಲೇ ಕಾರ್ಯಗತಗೊಳಿಸಬೇಕು. ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು” ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಷಣ್ಮುಖಪ್ಪ, ಹೊನ್ನೂರು ಮುನಿಯಪ್ಪ, ಬೀರಪ್ಪ,ಅಣ್ಣಪ್ಪ,ಅಭಿಲಾಷ್, ಮರುಳಸಿದ್ದಪ್ಪ ಹಾಜರಿದ್ದರು.