ಅಕ್ರಮವಾಗಿ ಕೋವಿಡ್ ಟೆಸ್ಟ್ಗಳನ್ನು ಮಾಡಿ ನೂರಾರು ಕೋಟಿ ಅಕ್ರಮ ಅವ್ಯವಹಾರ ನಡೆಸಿರುವ ಬಗ್ಗೆ ಕಳೆದ ಕೆಲವು ದಿನಗಳ ಹಿಂದೆ ಆಮ್ ಆದ್ಮಿ ಪಕ್ಷ ನಡೆದ ಹಗರಣವನ್ನು ದಾಖಲೆಗಳ ಸಮೇತ ಬಿಡುಗಡೆ ಮಾಡಿತ್ತು. ಇದೀಗ ಬೃಹತ್ ಹಗರಣದ ರೂವಾರಿ ಹಾಗೂ ಪ್ರಮುಖ ಆರೋಪಿ ಮಾಜಿ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ. ಸುಧಾಕರ್, ಕಿದ್ವಾಯಿ ಗ್ರಂಥಿ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಸಿ.ರಾಮಚಂದ್ರ ಹಾಗೂ ಬಿಎಂಎಸ್ ಸಂಸ್ಥೆಯ ಮಾಲೀಕ ಎಸ್.ಪಿ.ರಕ್ಷಿತ್ ರವರ ಮೇಲೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಗೆ (ಐಸಿಎಂಆರ್) ದೂರನ್ನು ನೀಡಲಾಗಿದೆ ಎಂದು ಎಎಪಿ ತಿಳಿಸಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಸಂಘಟನಾ ಕಾರ್ಯದರ್ಶಿ ಬಿ.ಟಿ ನಾಗಣ್ಣ, “ಆಮ್ ಆದ್ಮಿ ಪಕ್ಷ ಕಳೆದ ಮೂರು ದಿವಸಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಯ ₹140 ಕೋಟಿ ಬೃಹತ್ ಹಗರಣವನ್ನು ಬಯಲಿಗೆಳೆದಿತ್ತು. ಈ ಸಂಬಂಧ 330 ಪುಟಗಳ ದಾಖಲೆಯನ್ನು ಸಹ ಬಹಿರಂಗಗೊಳಿಸಿತ್ತು. ಅಕ್ರಮ ಕೋವಿಡ್ ಟೆಸ್ಟ್ ಗಳನ್ನು ಮಾಡಿ ನೂರಾರು ಕೋಟಿ ಅಕ್ರಮ ಅವ್ಯವಹಾರಗಳನ್ನು ನಡೆಸಿದ ಹಗರಣವನ್ನು ಬಯಲು ಮಾಡಲಾಗಿತ್ತು” ಎಂದು ಹೇಳಿದರು.
“ಈ ಹಗರಣಕ್ಕೆ ಸಂಬಂಧಿಸಿದವರ ಮೇಲೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಗೆ (ಐಸಿಎಂಆರ್) ದೂರನ್ನು ನೀಡಲಾಗಿದೆ. ಈ ಕೂಡಲೇ ಕಿದ್ವಾಯಿ ಸ್ಮಾರಕ ಗ್ರಂಥಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ಆರೋಪಿತ ಬಿಎಂಎಸ್ ಸಂಸ್ಥೆಯ ನಡುವಿನ ಒಪ್ಪಂದ ಪತ್ರ (MOU) ರದ್ದುಗೊಳಿಸಬೇಕು. ಹಗರಣದಲ್ಲಿ ಪಾಲ್ಗೊಂಡಿದ್ದ ಎಲ್ಲ ಪ್ರಭಾವಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ತೆಗೆದುಕೊಳ್ಳಬೇಕು. ತಪ್ಪಿತಸ್ಥರ ಆಸ್ತಿ ಮುಟ್ಟುಗೋಲನ್ನು ಹಾಕಿಕೊಳ್ಳುವ ಮೂಲಕ ಅಕ್ರಮ ನೂರಾರು ಕೋಟಿ ರೂಪಾಯಿ ವಸೂಲು ಮಾಡಬೇಕೆಂದು ದೂರನ್ನು ನೀಡಲಾಗಿದೆ” ಎಂದು ಬಿ.ಟಿ ನಾಗಣ್ಣ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದೀಪಾವಳಿ ಹಬ್ಬ | ಬೆಂಗಳೂರು – ಭಗತ್ ಕಿ ಕೋಠಿ ನಡುವೆ ವಿಶೇಷ ರೈಲುಗಳ ಸಂಚಾರ
ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ಹಾಗೂ ಪಕ್ಷದ ಕಾನೂನು ಘಟಕದ ವಕೀಲರಾದ ಲೋಹಿತ್ ಜಿ. ಹನುಮಪುರ ಮಾತನಾಡಿ, “ರಾಜ್ಯದಲ್ಲಿನ ಎಲ್ಲ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಇಲಾಖೆಗಳ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ರೋಗ ತಪಾಸಣೆ ವಿಭಾಗವನ್ನು ಖಾಸಗಿ ಲ್ಯಾಬೋರೇಟರಿಗಳಿಗೆ ನೀಡಿ ಸಾವಿರಾರು ಕೋಟಿ ತೆರಿಗೆದಾರರ ಹಣವನ್ನು ಲೂಟಿ ಮಾಡುತ್ತಿರುವ ವ್ಯವಸ್ಥೆಯನ್ನು ಸಮಗ್ರವಾಗಿ ದಾಖಲೆಗಳ ಸಮೇತ ಮುಂಬರುವ ದಿವಸಗಳಲ್ಲಿ ಬಹಿರಂಗಗೊಳಿಸಲಾಗುವುದು. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಇಂತಹ ಖಾಸಗಿ ಲ್ಯಾಬೋರೇಟರಿಗಳ ಹಗಲು ದರೋಡೆ ನಿಲ್ಲಿಸಬೇಕು” ಎಂದು ಸರ್ಕಾರವನ್ನು ಒತ್ತಾಯಿಸಿದರು.