ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಸುದೀಪ್ ಪ್ರಚಾರ
ಸರಣಿ ಟ್ವೀಟ್ ಮಾಡಿ ವಿರೋಧ ವ್ಯಕ್ತಪಡಿಸಿದ ಬಹುಭಾಷಾ ನಟ
ನಟ ಸುದೀಪ್ ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬೆಂಬಲಿಸುತ್ತಿರುವುದಕ್ಕೆ ಬಹುಭಾಷಾ ನಟ ಪ್ರಕಾಶ್ ರಾಜ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸುದೀಪ್ ನಡೆಯ ಬಗ್ಗೆ ಸರಣಿ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿರುವ ಪ್ರಕಾಶ್ ರಾಜ್, “ಸುದೀಪ್ ಒಬ್ಬ ಮೇರು ಕಲಾವಿದನಾಗಿ ಸಮಾಜದ ಎಲ್ಲ ವರ್ಗದ ಪ್ರೀತಿಯಿಂದ ಬೆಳೆದ ನೀವು ಜನ ಸಾಮಾನ್ಯನ ದನಿಯಾಗುವಿರಿ ಎಂದು ಆಶಿಸಿದ್ದೆ. ಆದರೆ, ತಾವು ಒಂದು ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದು ನಿರೀಕ್ಷಿಸಿರಲ್ಲ. ಇನ್ನು ಮುಂದೆ ನಿಮ್ಮನ್ನು, ನಿಮ್ಮ ಪಕ್ಷವನ್ನು ಪ್ರಶ್ನಿಸುವ ಜನ ದನಿಗೆ ತಯಾರಾಗಿರಿ” ಎಂದಿದ್ದಾರೆ.
ಬೊಮ್ಮಾಯಿ ಮಾಮ ನಾನು ಕಷ್ಟದಲ್ಲಿದ್ದಾಗ ನೆರವಾಗಿದ್ದರು. ಆ ಋಣ ತೀರಿಸಲು ಅವರ ಪರ ಪ್ರಚಾರ ಮಾಡತ್ತಿದ್ದೇನೆ ಎನ್ನುವ ಸುದೀಪ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರಕಾಶ್ ರಾಜ್,”ನೋಡ್ರಪ್ಪ ನಿಮ್ಮ ಮಾಮನೊ, ಅತ್ತೆಯೊ ನಿಮ್ಮ ಕಷ್ಟಕಾಲದಲ್ಲಿ ಸಹಾಯ ಮಾಡಿದ್ದರೆ, ನೀವು ದುಡಿದಿದ್ದರಲ್ಲಿ 10%, 20% ಇಲ್ಲ 30% ಕೊಡಿ, ಅದು ನಿಮ್ಮಿಷ್ಟ. ಆದರೆ, ಪ್ರಜೆಗಳ 30% ಕೊಳ್ಳೆ ಹೊಡೆಯೋಕೆ ಬಿಡಬೇಡಿ” ವ್ಯಂಗ್ಯವಾಡಿದ್ದಾರೆ.
ಜೊತೆಗೆ ಬಸವರಾಜ ಬೊಮ್ಮಾಯಿ ಮತ್ತು ಸುದೀಪ್ ಕುರಿತ ವ್ಯಂಗ್ಯಚಿತ್ರವನ್ನು ಹಂಚಿಕೊಂಡಿರುವ ಅವರು, “ನೀವು ಈಗ ಹೊರಲೇಬೇಕಾದ ಬೇರೆ ಬಣ್ಣದ ಲೋಕದ ಭಾರ” ಎಂದು ಸುದೀಪ್ ಅವರನ್ನು ಟ್ಬೀಟ್ನಲ್ಲೇ ತಿವಿದಿದ್ದಾರೆ.
ಈ ಹಿಂದೆ ಸುದೀಪ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡಿದ್ದಾಗ ಪ್ರತಿಕ್ರಿಯಿಸಿದ್ದ ಪ್ರಕಾಶ್ ರಾಜ್, “ಕರ್ನಾಟಕದಲ್ಲಿ ಸೋಲುವ ಭಯದಲ್ಲಿ ಭ್ರಷ್ಟ ಬಿಜೆಪಿ ಹರಡುತ್ತಿರುವ ಸುಳ್ಳು ಸುದ್ದಿ ಎಂದು ನಾನು ನಂಬುತ್ತೇನೆ. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ” ಎಂದಿದ್ದರು.