‘ಪಕ್ಷವು ನನಗೆ ವಂಚಿಸಿದ ವ್ಯಕ್ತಿಗೆ ಬೆಂಬಲ ನೀಡುತ್ತಿದೆ’ ಎಂದು ನಟಿ, ರಾಜಕಾರಣಿ ಗೌತಮಿ ತಡಿಮಲ್ಲ ಅವರು ಆರೋಪಿಸಿ ಬಿಜೆಪಿಯೊಂದಿಗಿನ ತಮ್ಮ 25 ವರ್ಷಗಳ ಒಡನಾಟವನ್ನು ಕೊನೆಗೊಳಿಸುತ್ತಿರುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು,”ಅತ್ಯಂತ ಭಾರವಾದ ಹೃದಯದಿಂದ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ನಾನು 25 ವರ್ಷಗಳ ಹಿಂದೆ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಪಕ್ಷಕ್ಕೆ ಸೇರಿದ್ದೆ. ನನ್ನ ಜೀವನದಲ್ಲಿ ನಾನು ಎದುರಿಸಿದ ಎಲ್ಲ ಸವಾಲುಗಳ ಹೊರತಾಗಿಯೂ, ನಾನು ಆ ಬದ್ಧತೆಯನ್ನು ಗೌರವಿಸಿದ್ದೇನೆ. ಆದರೂ ಇಂದು ನಾನು ನನ್ನ ಜೀವನದಲ್ಲಿ ಊಹಿಸಲಾಗದ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಿಂತಿದ್ದೇನೆ. ಪಕ್ಷ ಮತ್ತು ಮುಖಂಡರಿಂದ ಯಾವುದೇ ರೀತಿಯ ಬೆಂಬಲ ಪಡೆಯಲು ಸಾಧ್ಯವಾಗಿಲ್ಲ” ಎಂದು ತಿಳಿಸಿದ್ದಾರೆ.
”ನನಗೆ ವಿಶ್ವಾಸದ್ರೋಹಗೈದು ವಂಚಿಸಿದ ವ್ಯಕ್ತಿಗೆ ಬಿಜೆಪಿ ನಾಯಕರು ಸಹಾಯ ಮಾಡುತ್ತಿರುವುದರಿಂದ ನನಗೆ ಅತೀವ ದುಃಖವಾಗಿದೆ. ಈ ಕಾರಣದಿಂದಾಗಿ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
”ನಾನು 17 ನೇ ವಯಸ್ಸಿನಿಂದ ಕೆಲಸ ಮಾಡುತ್ತಿದ್ದೇನೆ. ನನ್ನ ವೃತ್ತಿ ಜೀವನವು 37 ವರ್ಷಗಳ ಕಾಲ ಸಿನಿಮಾ, ದೂರದರ್ಶನ, ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ವ್ಯಾಪಿಸಿದೆ. ಈ ವಯಸ್ಸಿನಲ್ಲಿ ಆರ್ಥಿಕವಾಗಿ ಸುಭದ್ರವಾಗಿರಲು ಮತ್ತು ನನ್ನ ಮಗಳ ಭವಿಷ್ಯಕ್ಕಾಗಿ ನಾನು ನನ್ನ ಇಡೀ ಜೀವನ ಕೆಲಸ ಮಾಡಿದ್ದೇನೆ. ನಾನು ಮತ್ತು ನನ್ನ ಮಗಳು ಸ್ಥಿರವಾಗಿ ಮತ್ತು ಸುರಕ್ಷಿತವಾಗಿರಬೇಕಾದ ಸ್ಥಳದಲ್ಲಿ ನಾನು ಈಗ ನಿಂತಿದ್ದೇನೆ. ಆದರೆ, ಸಿ.ಅಳಗಪ್ಪನ್ ನನಗೆ ಮೋಸ ಮಾಡಿ ನನ್ನ ಹಣ, ಆಸ್ತಿ, ದಾಖಲೆಗಳನ್ನು ದೋಚಿದ್ದಾರೆ” ಎಂದು ಆರೋಪಿಸಿದ್ದಾರೆ.
”20 ವರ್ಷಗಳ ಹಿಂದೆ ನನ್ನ ದುರ್ಬಲತೆಯ ಲಾಭವನ್ನು ಸಿ.ಅಳಗಪ್ಪನ್ ಅವರು ಪಡೆದಿದ್ದರು. ನಾನು ಆಗಷ್ಟೇ ನನ್ನ ಹೆತ್ತವರನ್ನೂ ಕಳೆದುಕೊಂಡು ಅನಾಥೆಯಾಗಿದ್ದೆ. ಪುಟ್ಟ ಮಗುವೊಂದರ ಒಂಟಿ ತಾಯಿಯಾಗಿದ್ದ ಸಂದರ್ಭ ಅವರು ನನ್ನನ್ನು ನೋಡಿಕೊಳ್ಳುವ ಭರವಸೆಯೊಂದಿಗೆ ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ನನಗೆ ಹತ್ತಿರವಾಗಿಸಿದ್ದರು. ನನ್ನ ಹಲವು ಜಮೀನುಗಳ ದಾಖಲೆಯನ್ನು ಅವರಿಗೆ ನೀಡಿ ಅವುಗಳ ಮಾರಾಟದ ಜವಾಬ್ದಾರಿಯನ್ನು ಅವರಿಗೆ ನೀಡಿದ್ದೆ. ಆದರೆ, ಅವರ ವಂಚನೆ ಇತ್ತೀಚೆಗಷ್ಟೇ ನನ್ನ ಗಮನಕ್ಕೆ ಬಂತು. ಇಷ್ಟು ಸಮಯ ನನ್ನನ್ನು ಮತ್ತು ನನ್ನ ಮಗಳನ್ನು ಅವರ ಕುಟುಂಬದಂತೆ ಎಂದು ತೋರ್ಪಡಿಸುವ ಯತ್ನ ಮಾಡಿದ್ದರು” ಎಂದು ತಿಳಿಸಿದ್ದಾರೆ.
“2021ರ ವಿಧಾನಸಭೆ ಚುನಾವಣೆಯಲ್ಲಿ ತಮಗೆ ಟಿಕೆಟ್ ನೀಡುವುದಾಗಿ ಪಕ್ಷ ಭರವಸೆ ನೀಡಿತ್ತಾದರೂ, ಕೊನೆಯ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತ್ತು. ಇದರ ಹೊರತಾಗಿಯೂ ನಾನು ಪಕ್ಷಕ್ಕಾಗಿ ದುಡಿದಿದ್ದೇನೆ” ಎಂದು ವಿವರಿಸಿದ್ದಾರೆ.
A journey of 25 yrs comes to a conclusion today. My resignation letter. @JPNadda @annamalai_k @BJP4India @BJP4TamilNadu pic.twitter.com/NzHCkIzEfD
— Gautami Tadimalla (@gautamitads) October 23, 2023
“ನನಗೆ ಪಕ್ಷ ಮತ್ತು ನಾಯಕರಿಂದ ಯಾವುದೇ ಬೆಂಬಲ ಸಿಗುತ್ತಿಲ್ಲ. ನಿರ್ದಿಷ್ಟ ವ್ಯಕ್ತಿಯೊಬ್ಬರು ನನಗೆ ಹಣ, ಆಸ್ತಿ ಮತ್ತು ದಾಖಲೆಗಳನ್ನು ವಂಚಿಸಿದ್ದಾರೆ. ನಂಬಿಕೆಗೆ ದ್ರೋಹ ಮಾಡಿದ ಅವರಿಗೆ ಪಕ್ಷದ ನಾಯಕರು ಸಹಾಯ ಮಾಡುತ್ತಿದ್ದು, ಅವರನ್ನು ಬೆಂಬಲಿಸುತ್ತಿರುವುದು ನನಗೆ ತಿಳಿದಿದೆ” ಎಂದು ಹೇಳಿದ್ದಾರೆ.
ವಂಚನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ತನಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ಹೇಳಿಕೊಂಡಿದ್ದಾರೆ.
ತಮ್ಮ ಟ್ವೀಟ್ ಅನ್ನು ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹಾಗೂ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರನ್ನು ಟ್ಯಾಗ್ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಡಿಯೋ ವೈರಲ್ | ಹಿಮ್ಮುಖವಾಗಿ ಬಸ್ ಚಲಾಯಿಸಿದ ಚಾಲಕ; ಹಲವು ವಾಹನಗಳಿಗೆ ಢಿಕ್ಕಿ
“ತೀವ್ರ ನೋವು ಮತ್ತು ದುಃಖದಿಂದ ಬಿಜೆಪಿಗೆ ರಾಜೀನಾಮೆ ನೀಡಿದ್ದೇನೆ. ಆದರೆ, ಏಕಾಂಗಿ ಮಹಿಳೆ ಮತ್ತು ಒಂಟಿ ಪೋಷಕರಾಗಿ ನಾನು ನನ್ನ ಮಗಳ ಭವಿಷ್ಯಕ್ಕಾಗಿ ನ್ಯಾಯಕ್ಕಾಗಿ ಹೋರಾಡುತ್ತಿರುವುದರಿಂದ ದೃಢ ಸಂಕಲ್ಪದೊಂದಿಗೆ ರಾಜೀನಾಮೆ ನೀಡಿದ್ದೇನೆ” ಎಂದು ಹೇಳಿದ್ದಾರೆ.