ಆಧುನಿಕ ವೈದ್ಯಕೀಯ ಪದ್ಧತಿಗಳ ವಿರುದ್ಧ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸುವ ಪತಂಜಲಿ ಆಯುರ್ವೇದ ಸಂಸ್ಥೆ ಹಾಗೂ ಸಂಸ್ಥೆಯ ಸಹ-ಸಂಸ್ಥಾಪಕ, ಯೋಗ ಗುರು ರಾಮ್ ದೇವ್ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಸಮನ್ಸ್ ನೀಡಿದೆ. ಇದಾದ ಬೆನ್ನಲ್ಲೇ ಸುಪ್ರೀಂ ಕೋರ್ಟ್ನಲ್ಲಿ ಪತಂಜಲಿ ಕ್ಷಮೆಯಾಚಿಸಿದೆ.
ದಾರಿತಪ್ಪಿಸುವ ಜಾಹೀರಾತುಗಳ ಮೇಲಿನ ನೋಟಿಸ್ಗೆ ಪ್ರತಿಕ್ರಿಯಿಸದ ಪತಂಜಲಿ ಆಯುರ್ವೇದ ಸಂಸ್ಥೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿತ್ತು. ಇದಾದ ಒಂದು ದಿನದ ನಂತರ, ಅಫಿಡವಿಟ್ ಸಲ್ಲಿಸಿರುವ ಪತಂಜಲಿ ಕ್ಷಮೆಯಾಚಿಸಿದೆ.
ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು ಏಪ್ರಿಲ್ 2 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಬಾಲಕೃಷ್ಣ ಮತ್ತು ರಾಮ್ದೇವ್ಗೆ ಸೂಚಿಸಿದೆ.
ಇದನ್ನು ಓದಿದ್ದೀರಾ? ದಾರಿ ತಪ್ಪಿಸುವ ಜಾಹೀರಾತು ನಿಲ್ಲಿಸದಿದ್ದರೆ ಭಾರೀ ದಂಡ: ಬಾಬಾ ರಾಮ್ದೇವ್ಗೆ ಸುಪ್ರೀಂ ಎಚ್ಚರಿಕೆ
ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್ನಲ್ಲಿ ಬಾಲಕೃಷ್ಣ ಅವರು ಕಾನೂನು ಸುವ್ಯವಸ್ಥೆ ಮೇಲೆ ತಾನು ಗೌರವ ಹೊಂದಿರುವುದಾಗಿ ಹೇಳಿದ್ದು ಬೇಷರತ್ತಾಗಿ ಕ್ಷಮೆ ಕೇಳಿದ್ದಾರೆ. “ಭವಿಷ್ಯದಲ್ಲಿ ಅಂತಹ ಜಾಹೀರಾತುಗಳನ್ನು ನೀಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.
ಪತಂಜಲಿಯ “ಉತ್ಪನ್ನಗಳನ್ನು ಸೇವಿಸುವ ಮೂಲಕ ಆರೋಗ್ಯಕರ ಜೀವನ ನಡೆಸಲು ಈ ದೇಶದ ನಾಗರಿಕರನ್ನು ಉತ್ತೇಜಿಸುವುದು” ಮಾತ್ರ ಎಂದು ಬಾಲಕೃಷ್ಣ ತಿಳಿಸಿದ್ದಾರೆ. “ಪ್ರಾಚೀನ ಆಯುರ್ವೇದದ ಕುರಿತಾದ ಸಂಶೋಧನೆಯ ಬೆಂಬಲದೊಂದಿಗೆ ತಯಾರಿಸಲಾದ ಪತಂಜಲಿ ಉತ್ಪನ್ನಗಳನ್ನು ಸೇವಿಸಿ ಆರೋಗ್ಯಕರ ಜೀವನ ನಡೆಸಿ ಎಂದು ಜನರಿಗೆ ಸಲಹೆ ನೀಡುವ ಉದ್ದೇಶವಷ್ಟೇ ನಮ್ಮದು” ಎಂದಿದ್ದಾರೆ.
ರಾಮ್ದೇವ್ ಮತ್ತು ಬಾಲಕೃಷ್ಣ 2006 ರಲ್ಲಿ ಸ್ಥಾಪಿಸಿದ ಪತಂಜಲಿ ಆಯುರ್ವೇದ ಬಹುರಾಷ್ಟ್ರೀಯ ಕಂಪನಿಯಾಗಿದೆ. ಇದು ಆಯುರ್ವೇದ ಔಷಧದಿಂದ ಹಿಡಿದು ಸೌಂದರ್ಯವರ್ಧಕ, ಆಹಾರ ಪದಾರ್ಥಗಳವರೆಗೆ ಉತ್ಪನ್ನಗಳನ್ನು ತಯಾರಿಸುತ್ತದೆ. ತಮ್ಮ ಉತ್ಪನ್ನಗಳ ಪರಿಣಾಮಕಾರಿತ್ವದ ಬಗ್ಗೆ ತಪ್ಪುದಾರಿಗೆಳೆಯುವ ಜಾಹೀರಾತು ನೀಡಿ ಸಂಸ್ಥೆ ಕೋರ್ಟ್ ಛಾಟಿಯೇಟಿಗೆ ಗುರಿಯಾಗಿದೆ.
ಮಂಗಳವಾರ, ಸುಪ್ರೀಂ ಕೋರ್ಟ್ ಪತಂಜಲಿ ಸಂಸ್ಥೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ರಾಮ್ದೇವ್ ಮತ್ತು ಬಾಲಕೃಷ್ಣ ಸುಪ್ರೀಂ ಕೋರ್ಟ್ ಮುಂದೆ ಹಾಜರಾಗುವಂತೆ ಸೂಚಿಸಿದೆ.