ಬಿಜೆಪಿ ಜೊತೆಗಿನ ಮೈತ್ರಿಯ ಸಂಬಂಧವನ್ನು ಎಐಎಡಿಎಂಕೆ ಕೊನೆಗೊಳಿಸಿದ್ದು, ಮುಂದಿನ ಚುನಾವಣೆಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ತಿಳಿಸಿದೆ.
ತಮಿಳುನಾಡಿನಲ್ಲಿ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯ ನಂತರ ಸೋಮವಾರ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಜೊತೆ ಎಐಎಡಿಎಂಕೆ ತನ್ನ ಸಂಬಂಧವನ್ನು ಮುರಿದುಕೊಂಡಿತು. ಕೇಸರಿ ಪಕ್ಷದ ನಾಯಕರು ಎಐಎಡಿಎಂಕೆಯ ಮಾಜಿ ನಾಯಕರ ಬಗ್ಗೆ ಅನಗತ್ಯ ಟೀಕೆಗಳನ್ನು ಮಾಡುತ್ತಿರುವುದು ಮೈತ್ರಿ ಕೊನೆಗೊಳ್ಳಲು ಪ್ರಮುಖ ಕಾರಣವಾಗಿದೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ 2024 ರ ಲೋಕಸಭೆ ಚುನಾವಣೆಗೆ ಪ್ರತ್ಯೇಕ ರಂಗದೊಂದಿಗೆ ಮುನ್ನಡೆಸಲಿದೆ ಎಂದು ಪಕ್ಷವು ಹೇಳಿದೆ.
ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಅವರು ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ದ್ರಾವಿಡ ನೇತಾರ ಸಿ ಎನ್ ಅಣ್ಣಾದೊರೈ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆಗಳ ನಂತರ ಇದು ಸಂಭವಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಯಾರು ಹಸಿದಿದ್ದರು, ಯಾವುದು ಹಳಸಿತ್ತು?
“ಎಐಎಡಿಎಂಕೆ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಗಿದೆ. ಪಕ್ಷವು ಇಂದಿನಿಂದ ಬಿಜೆಪಿ ಮತ್ತು ಎನ್ಡಿಎ ಮೈತ್ರಿಕೂಟದೊಂದಿಗಿನ ಎಲ್ಲ ಸಂಬಂಧಗಳನ್ನು ಮುರಿದುಕೊಳ್ಳುತ್ತದೆ. ಬಿಜೆಪಿಯ ರಾಜ್ಯ ನಾಯಕತ್ವವು ನಮ್ಮ ಮಾಜಿ ನಾಯಕರು, ನಮ್ಮ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ನಮ್ಮ ಕಾರ್ಯಕರ್ತರ ಬಗ್ಗೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ಅನಗತ್ಯ ಟೀಕೆಗಳನ್ನು ಮಾಡುತ್ತಿದ್ದಾರೆ” ಎಂದು ಎಐಎಡಿಎಂಕೆಯ ನಾಯಕ ಕೆ ಪಿ ಮುನಿಸಾಮಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಈ ಸುದ್ದಿಯನ್ನು ಕೇಳಿದ ನಂತರ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಎಐಎಡಿಎಂಕೆ ವಕ್ತಾರೆ ಶಶಿರೇಖಾ, “ಪಕ್ಷದ ಸದಸ್ಯರ ಅಭಿಪ್ರಾಯದ ಆಧಾರದ ಮೇಲೆ ನಾವು ಈ ನಿರ್ಣಯವನ್ನು ತೆಗೆದುಕೊಳ್ಳುತ್ತಿದ್ದೇವೆ. ಇದು ನಮಗೆ ಅತ್ಯಂತ ಸಂತೋಷದ ಕ್ಷಣವಾಗಿದೆ. ನಾವು ತುಂಬಾ ಸಂತೋಷ ಪಡುತ್ತೇವೆ. ಮುಂಬರುವ ಚುನಾವಣೆಗಳನ್ನು ಸ್ವಂತವಾಗಿ ಎದುರಿಸುತ್ತೇವೆ” ಎಂದು ಹೇಳಿದರು.
ಬಿಜೆಪಿ ನಾಯಕ ಅವರು ಇತ್ತೀಚಿಗೆ ನೀಡಿದ ಹೇಳಿಕೆಯು ವಿವಾದವನ್ನು ಹುಟ್ಟುಹಾಕಿತ್ತು. 1956 ರಲ್ಲಿ ಮಧುರೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಣ್ಣಾದೊರೈ ಅವರು ಹಿಂದೂ ಧರ್ಮವನ್ನು ಅವಮಾನಿಸಿದ್ದಾರೆ ಎಂದು ಅಣ್ಣಾಮಲೈ ಆರೋಪಿಸಿದ್ದರು.
ಕಾರ್ಯಕ್ರಮ ಮುಗಿದ ನಂತರ ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸಲು ಅಣ್ಣಾಮಲೈ ನಿರಾಕರಿಸಿದರು ಮತ್ತು ತಮ್ಮ ಪಕ್ಷ ಮತ್ತು ಎಐಎಡಿಎಂಕೆ ನಡುವೆ ಯಾವುದೇ ಸಮಸ್ಯೆ ಇಲ್ಲ ಎಂದು ಸಮರ್ಥಿಸಿಕೊಂಡರು.
ಅಣ್ಣಾದೊರೈ ಅವರು ಹೇಳಿಕೆ ನೀಡಿದ ನಂತರ ಪಕ್ಷದ ಕಾರ್ಯಕರ್ತರು ಅಣ್ಣಾಮಲೈ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ವಿಕೋಪಕ್ಕೆ ಹೋದ ಕಾರಣ ಮಧುರೈನಲ್ಲಿ ರಾಜ್ಯ ಬಿಜೆಪಿ ಮುಖ್ಯಸ್ಥ ಅಡಗಿಕೊಳ್ಳಬೇಕಾಯಿತು. ಕ್ಷಮೆಯಾಚಿಸಿದ ನಂತರ ಮಾತ್ರ ಮುಂದಕ್ಕೆ ಪ್ರಯಾಣಿಸಲು ಸಾಧ್ಯವಾಯಿತು.
ಎಐಎಡಿಎಂಕೆ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡಿರುವ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅಣ್ಣಾಮಲೈ, “ನಾನು ನಿಮ್ಮೊಂದಿಗೆ ನಂತರ ಮಾತನಾಡುತ್ತೇನೆ, ನಾನು ಯಾತ್ರೆಯ ಸಮಯದಲ್ಲಿ ಮಾತನಾಡುವುದಿಲ್ಲ. ನಾನು ನಂತರ ಮಾತನಾಡುತ್ತೇನೆ” ಎಂದು ಹೇಳಿದ್ದಾರೆ.
ಪಕ್ಷವು 2019 ರ ಲೋಕಸಭಾ ಚುನಾವಣೆ ಮತ್ತು 2021 ರ ವಿಧಾನಸಭಾ ಚುನಾವಣೆಗಳಲ್ಲಿ ಮಿತ್ರಪಕ್ಷಗಳಾಗಿ ಬಿಜೆಪಿಯೊಂದಿಗೆ ಮೈತ್ರಿ ಹೊಂದಿತ್ತು.