ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಎಐಸಿಸಿ ಸಚಿವರನ್ನು ವೀಕ್ಷಕರನ್ನಾಗಿ ನೇಮಿಸಿದೆ. ಬಹುತೇಕ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರೇ ವೀಕ್ಷಕರಾಗಿದ್ದಾರೆ.
20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ ಪಕ್ಷ ಕ್ಷೇತ್ರವಾರು ವೀಕ್ಷಕರ ನೇಮಕಾತಿ ಜೊತೆಗೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲೇಬೇಕು ಎಂಬ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವೀಕ್ಷಕರಾಗಿರುವ ಸಚಿವರ ಮೇಲೆ ನಿಗಾ ವಹಿಸಲಿದ್ದು, ಕಾಲಕಾಲಕ್ಕೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ್, ಬಳ್ಳಾರಿ ಕ್ಷೇತ್ರಕ್ಕೆ ಬಿ.ನಾಗೇಂದ್ರ, ಬೀದರ್ ಕ್ಷೇತ್ರಕ್ಕೆ ಈಶ್ವರ್ ಖಂಡ್ರೆ, ಚಿಕ್ಕಮಗಳೂರು, ಉಡುಪಿ ಕ್ಷೇತ್ರಕ್ಕೆ ಕೆ.ಜೆ.ಜಾರ್ಜ್, ಚಿತ್ರದುರ್ಗ ಕ್ಷೇತ್ರಕ್ಕೆ ಸಚಿವ ಡಾ.ಸುಧಾಕರ್, ದಕ್ಷಿಣ ಕನ್ನಡ ಕ್ಷೇತ್ರಕ್ಕೆ ದಿನೇಶ್ ಗುಂಡೂರಾವ್, ದಾವಣಗೆರೆ ಕ್ಷೇತ್ರಕ್ಕೆ ಎಸ್.ಎಸ್.ಮಲ್ಲಿಕಾರ್ಜುನ್, ಧಾರವಾಡ ಕ್ಷೇತ್ರಕ್ಕೆ ಸಂತೋಷ್ ಲಾಡ್, ಕಲ್ಬುರ್ಗಿ ಕ್ಷೇತ್ರಕ್ಕೆ ಪ್ರಿಯಾಂಕ್ ಖರ್ಗೆ, ಹಾಸನ ಕ್ಷೇತ್ರಕ್ಕೆ ಕೆ.ಎನ್.ರಾಜಣ್ಣ, ಹಾವೇರಿ ಕ್ಷೇತ್ರಕ್ಕೆ ಶಿವಾನಂದ ಪಾಟೀಲ್, ಕೊಪ್ಪಳಕ್ಕೆ ಶಿವರಾಜ ತಂಗಡಗಿ ಅವರನ್ನು ನೇಮಿಸಲಾಗಿದೆ.
ಮಂಡ್ಯಕ್ಕೆ ಎನ್.ಚಲುವರಾಯಸ್ವಾಮಿ, ಶಿವಮೊಗ್ಗದ ಸಚಿವ ಮಧುಬಂಗಾರಪ್ಪ, ತುಮಕೂರಿನ ಡಾ.ಜಿ.ಪರಮೇಶ್ವರ್, ಉತ್ತರ ಕನ್ನಡದ ಮಂಕಾಳ್ ವೈದ್ಯ ಅವರಿಗೆ ಅದೇ ಜಿಲ್ಲೆಯ ಜವಾಬ್ದಾರಿ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರಕ್ಕೆ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಬದಲಾಗಿ ಭೈರತಿ ಸುರೇಶ್, ಬೆಂಗಳೂರು ನಗರಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಸ್ತುವಾರಿ ಸಚಿವರಾಗಿದ್ದರು. ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಕೃಷ್ಣಬೈರೇಗೌಡ, ಬೆಂಗಳೂರು ಕೇಂದ್ರಕ್ಕೆ ಜಮೀರ್ ಅಹಮ್ಮದ್ ಖಾನ್, ಬೆಂಗಳೂರು ದಕ್ಷಿಣಕ್ಕೆ ರಾಮಲಿಂಗಾರೆಡ್ಡಿ ಅವರುಗಳನ್ನು ಉಸ್ತುವಾರಿಯಾಗಿ ನೇಮಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಬರ ಪರಿಹಾರ ವಿತರಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ರಾಜ್ಯಪಾಲರಿಗೆ ಬಿಜೆಪಿ ನಿಯೋಗ ಮನವಿ
ಚಾಮರಾಜನಗರ ಮೀಸಲು ಕ್ಷೇತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರ ಬದಲಾಗಿ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ. ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸಿದ್ದರಾಮಯ್ಯ ಆಪ್ತ ಕೆ.ವೆಂಕಟೇಶ್ ವೀಕ್ಷಕರಾಗಿದ್ದಾರೆ. ಮೈಸೂರು ಜಿಲ್ಲೆಯ ಉಸ್ತುವಾರಿಯಾಗಿ ಎಚ್.ಸಿ.ಮಹದೇವಪ್ಪರ ಜವಾಬ್ದಾರಿ ಚಾಮರಾಜನಗರ ಕ್ಷೇತ್ರಕ್ಕೆ ಮೀಸಲಾಗಿದೆ.
ಕೊಡಗು ಜಿಲ್ಲೆಯ ಉಸ್ತುವಾರಿಯಾಗಿರುವ ಎನ್.ಎಸ್.ಬೋಸರಾಜು ಅವರಿಗೆ ಸ್ವಂತ ಜಿಲ್ಲೆ ರಾಯಚೂರಿನ ಜವಾಬ್ದಾರಿ ವಹಿಸಲಾಗಿದೆ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಡಾ.ಎಂ.ಸಿ.ಸುಧಾಕರ್ ಸಚಿವರಾಗಿದ್ದರೆ ಅವರ ಬದಲಾಗಿ ಕೋಲಾರದ ಮೂಲದವರಾದ ಕೆ.ಎಚ್.ಮುನಿಯಪ್ಪ ಅವರನ್ನು, ಕೋಲಾರಕ್ಕೆ ಡಾ.ಎಂ.ಸಿ.ಸುಧಾಕರ್ ಅವರುಗಳನ್ನು ಉಸ್ತುವಾರಿಗಳಾಗಿ ಅದಲು ಬದಲು ಮಾಡಲಾಗಿದೆ. ಬೆಳಗಾವಿ ಕ್ಷೇತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಚಿಕ್ಕೋಡಿ ಕ್ಷೇತ್ರಕ್ಕೆ ಹಿರಿಯ ಸಚಿವ ಎಚ್.ಕೆ.ಪಾಟೀಲ್ ಅವರನ್ನು ಬೆಳಗಾವಿಗೆ ಉಸ್ತುವಾರಿಯಾಗಿ ನೇಮಿಸಲಾಗಿದೆ.