ಕೇಂದ್ರ ಸರ್ಕಾರ ದೇಶದ ಹೆಸರನ್ನು ಬದಲಿಸಲು ಮುಂದಾಗಿದೆ ಎಂಬ ಚರ್ಚೆ ಜೋರಾಗಿರುವ ಹೊತ್ತಿನಲ್ಲೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಸಮಯ ಸಾಧಕತನ ಕೂಡ ಜಗಜ್ಜಾಹೀರಾಗಿದೆ.
ಇತ್ತೀಚೆಗೆ ರಾಷ್ಟ್ರಪತಿಗಳ ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ ʼಪ್ರೆಸಿಡೆಂಟ್ ಆಫ್ ಇಂಡಿಯಾʼ ಬದಲು ʼಪ್ರೆಸಿಡೆಂಟ್ ಆಫ್ ಭಾರತ್ʼ ಎಂದು ಉಲ್ಲೇಖಿಸಲಾಗಿತ್ತು. ಈ ಸಂಬಂಧ ದೇಶಾದ್ಯಂತ ಪರ ವಿರೋಧದ ಚರ್ಚೆಗಳು ಶುರುವಾಗಿವೆ. ಇದೇ ಸೂಕ್ಷ್ಮ ಸಂದರ್ಭವನ್ನು ಬಳಸಿಕೊಂಡು ಸಿನಿಮಾ ಪ್ರಚಾರಕ್ಕೆ ಮುಂದಾಗಿರುವ ಅಕ್ಷಯ್ ಕುಮಾರ್, ತಮ್ಮ ನೂತನ ಚಿತ್ರದ ಪೋಸ್ಟರ್ಗಳನ್ನು ಸರಣಿಯಾಗಿ ಬಿಡುಗಡೆ ಮಾಡಿದ್ದಾರೆ. ಚಿತ್ರದ ಟ್ಯಾಗ್ ಲೈನ್ನಲ್ಲಿ ʼಇಂಡಿಯಾʼ ಬದಲು ʼಭಾರತ್ʼ ಎಂದು ಉಲ್ಲೇಖಿಸಿ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದ್ದಾರೆ ಎಂದು ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.
ಅಷ್ಟೇ ಅಲ್ಲ, ಅಕ್ಷಯ್ ಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ʼಮಿಶನ್ ರಾಣಿಗಂಜ್ʼ ಚಿತ್ರದ ಮೂರು ಪೋಸ್ಟರ್ಗಳನ್ನು ಕಳಪೆಯಾಗಿ ಎಡಿಟ್ ಮಾಡಲಾಗಿದೆ ಎಂದು ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ. ಪ್ರಚಾರದಾಸೆಗೆ ಬಿದ್ದು ತರಾತುರಿಯಲ್ಲಿ ಒಂದೇ ಫೋಟೋವನ್ನು ಬಳಸಿ ಎರಡೆರೆಡು ಪೋಸ್ಟರ್ಗಳನ್ನು ಮಾಡಿದ್ದಾರೆ. ಎರಡೂ ಪೋಸ್ಟರ್ಗಳಲ್ಲಿ ಅಕ್ಷಯ್ ಕುಮಾರ್ ಜೊತೆಗೆ ನಿಂತಿರುವ ಕಲಾವಿದರ ಹಾವ-ಭಾವ ಬದಲಾಗಿಲ್ಲ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.
ಅಕ್ಷಯ್ ಕುಮಾರ್ ʼಮಿಶನ್ ರಾಣಿಗಂಜ್ʼ ಹೆಸರಿನ ನೈಜ ಘಟನೆ ಆಧಾರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ. 1989ರಲ್ಲಿ ಪಶ್ಚಿಮ ಬಂಗಾಳದ ರಾಣಿಗಂಜ್ನ ಕಲ್ಲಿದ್ದಲಿನ ಗಣಿಯಲ್ಲಿ ಸಿಲುಕಿದ್ದ 64 ಮಂದಿಯನ್ನು ಜಸ್ವಂತ್ ಸಿಂಗ್ ಗಿಲ್ ಎನ್ನುವ ಸಾಹಸಿ ತನ್ನ ಸಹ ಕಾರ್ಮಿಕರ ನೆರವಿನೊಂದಿಗೆ ರಕ್ಷಿಸಿದ್ದರು. ಬಾಲಿವುಡ್ನ ನಿರ್ದೆಶಕ ಸುರೇಶ್ ದೇಸಾಯಿ ಇದೇ ರೋಚಕ ಕಥೆಯನ್ನು ʼಮಿಶನ್ ರಾಣಿಗಂಜ್ʼ ಹೆಸರಿನಲ್ಲಿ ತೆರೆಗೆ ಅಳವಡಿಸಲು ಮುಂದಾಗಿದ್ದಾರೆ. ಅಕ್ಷಯ್ ಕುಮಾರ್, ಸಾಹಸಿ ಜಸ್ವಂತ್ ಸಿಂಗ್ ಗಿಲ್ ಅವರ ಪಾತ್ರದಲ್ಲಿ ನಟಿಸುತ್ತಿದ್ದು, ಪರಿಣಿತಿ ಚೋಪ್ರಾ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.